ಸಾವಿರ ಕೋಟಿ ಒಡೆಯ ಡಿಕೆಶಿ ಎದುರು 2 ಕೋಟಿ ಸಾಲಗಾರ ಸ್ಪರ್ಧೆ
ರಾಮನಗರ, ಏಪ್ರಿಲ್ 24 : ಅಚ್ಚರಿಯ ಬೆಳವಣಿಗೆಯಲ್ಲಿ ಕನಕಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದು ಬಿಂಬಿತವಾಗಿದ್ದ ಡಿ.ಎಂ.ವಿಶ್ವನಾಥ್ ಅವರಿಗೆ ಟಿಕೆಟ್ ಕೈತಪ್ಪಿದ್ದು, ನಾರಾಯಣಗೌಡರಿಗೆ ಜೆಡಿಎಸ್ ವರಿಷ್ಠರು ಮಣೆಹಾಕಿದ್ದಾರೆ.
ಅಂದಹಾಗೆ ನಾರಾಯಣಗೌಡ ಅವರು ಸೋಮವಾರ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಪಟ್ಟಣದ ಅಧಿದೇವತೆ ಕೆಂಕೇರಮ್ಮ ದೇವಾಲಯದಿಂದ ಎತ್ತಿನ ಗಾಡಿಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿತ್ತು. ಮರಳೇಗವಿ ಮಠ, ದೇಗುಲ ಮಠ, ಕಲ್ಲಳ್ಳಿ ವೆಂಕಟೇಶ್ವರ ದೇವಾಲಯ ಮತ್ತು ಕೆಂಕೇರಿಯಮ್ಮ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ, ನಂತರ ನೂರಾರು ಬಿಎಸ್ಪಿ ಮತ್ತು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರೂಂದಿಗೆ ಮೆರವಣಿಗೆ ಮೂಲಕ ಕನಕಪುರ ತಾಲೂಕು ಕಚೇರಿಗೆ ತೆರಳಿ ಚುನಾವಣಾಧಿಕಾರಿ ಉಮೇಶ್ ಗೆ ನಾಮಪತ್ರ ಸಲ್ಲಿಸಿದರು.
ಡಿಕೆ ಶಿವಕುಮಾರ್ ಭದ್ರಕೋಟೆ ಕನಕಪುರ ಕ್ಷೇತ್ರದ ಅಂತರಂಗ
ಠೇವಣಿ ಹಣವನ್ನು ಸಾಮಾನ್ಯ ಕೂಲಿ ಕಾರ್ಮಿಕ ಎಂಬುವರು ಭರಿಸಿದರು. ಹಾಗೆಯೇ ಕೆಂಕೇರಿಯಮ್ಮ ದೇವಾಲಯದ ಬಳಿ ಅಭ್ಯರ್ಥಿ ನಾರಾಯಣಗೌಡರ ಚುನಾವಣಾ ವೆಚ್ಚಕ್ಕಾಗಿ ಕಾರ್ಯಕರ್ತರು ದೇಣಿಗೆ ಸಂಗ್ರಹಿಸಿದರು. ನಾರಾಯಣಗೌಡ ಸುಮಾರು 5 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದು, ಅದರ ಮೇಲೆ ಕೆನರಾ ಬ್ಯಾಂಕ್ ನಲ್ಲಿ 2 ಕೋಟಿ ಸಾಲ ಮಾಡಿರುವುದಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಘೋಷಣೆ ಮಾಡಿಕೊಂಡಿದ್ದಾರೆ.
ಉಮೇದುವಾರಿಕೆ ಸಲ್ಲಿಸಿ ಮಾತನಾಡಿದ ನಾರಾಯಣಗೌಡರು, ಸಾಮಾನ್ಯ ರೈತನ ಮಗನಾದ ನನ್ನನ್ನು ಗೆಲ್ಲಿಸಿ, ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿಯವರ ಕೈ ಬಲಪಡಿಸಿ ಎಂದು ವಿನಂತಿಸಿಕೊಂಡರು. ಸಾವಿರ ಕೋಟಿ ಒಡೆಯ ಡಿ.ಕೆ.ಶಿವಕುಮಾರ್ ವಿರುದ್ಧ 2 ಕೋಟಿ ಸಾಲಗಾರ ನಾರಾಯಣಗೌಡ ಸ್ಪರ್ಧೆ ಮಾಡಿದ್ದಾರೆ ಅವರನ್ನು ಕ್ಷೇತ್ರದ ಜನತೆ ಕೈಹಿಡಿಯಬೇಕೆಂದು ಮುಖಂಡರು ಕರೆ ನೀಡಿದರು.
ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕಣದಲ್ಲಿದ್ದಾರೆ. ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನಾರಾಯಣಗೌಡ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಇಂದು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ನಂದಿನಿಗೌಡ ನಾಮಪತ್ರ ಸಲ್ಲಿಸುವ ಮೂಲಕ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ.