ಪಡಿತರ ಅಕ್ಕಿ ಕಳ್ಳ ಸಾಗಾಣೆದಾರರಿಂದ 3 ಲಕ್ಷ ರೂ. ವಸೂಲಿ; ತನ್ನ ಗನ್ ಮ್ಯಾನ್ ಅನ್ನೇ ಒದ್ದು ಒಳಗೆ ಹಾಕಿ ಎಂದ ಬಳ್ಳಾರಿ ಎಸ್ಪಿ
ಬಳ್ಳಾರಿ, ಮೇ 9: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ರಕ್ಷಣೆಗೆ ಇರಬೇಕಾದ ಸಿಬ್ಬಂದಿಯೇ ಅಕ್ರಮ ಎಸಗಿ ಸಿಕ್ಕಿಬಿದ್ದಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಅಕ್ರಮ ಪಡಿತರ ಅಕ್ಕಿ ಸಾಗಾಟದಾರರಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿದ ಆರೋಪದ ಮೇಲೆ ಬಳ್ಳಾರಿ ಎಸ್ಪಿ ಸುಮನ್ ಡಿ.ಪನ್ನೇಕರ್ ಅವರ ಗನ್ ಮ್ಯಾನ್ ದೇವರಾಜ್ ಹಾಗೂ ಆತನ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.
ಮಡಕೇರಿಯಿಂದ ಆಂಧ್ರಪ್ರದೇಶಕ್ಕೆ ಎರಡು ಲಾರಿಗಳಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಈ ವೇಳೆ ಶರಭಯ್ಯ ಎಂಬುವವರ ಲಾರಿಗಳನ್ನು ಅಡ್ಡಗಟ್ಟಿದ ಗನ್ ಮ್ಯಾನ್ ದೇವರಾಜ್ ಮತ್ತು ಆತನ ಸಹಚರರು ತಾವು ಎಸ್ಪಿ ಸ್ಕ್ವಾಡ್ ಅಧಿಕಾರಿಗಳೆಂದು ಹೇಳಿದ್ದಾರೆ. ಬಳಿಕ ಲಾರಿಗಳನ್ನು ಜಪ್ತಿ ಮಾಡಿ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ ಈ ತಂಡವು ಪ್ರಕರಣ ಮುಚ್ಚಿಹಾಕಲು 5 ಲಕ್ಷ ರೂಪಾಯಿ ಬೇಡಿಕೆಯಿಟ್ಟಿದ್ದರು. ಅಂತಿಮವಾಗಿ 3 ಲಕ್ಷ ರೂಪಾಯಿಗಳನ್ನು ಸುಲಿಗೆ ಮಾಡಿದ್ದರು ಎನ್ನುವ ರೋಪ ಕೇಳಿಬಂದಿದೆ.

ತಮ್ಮ ಗನ್ ಮ್ಯಾನ್ ಬಂಧಿಸಲು ಎಸ್ಪಿ ಸೂಚನೆ
ಹಣ ಕಳೆದುಕೊಂಡ ಶರಭಯ್ಯ ಅವರು ಮೋಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಖುದ್ದು ಎಸ್ಪಿಯವರೇ ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿದರು. ತನಿಖೆಯ ವೇಳೆ ತಮ್ಮದೇ ಗನ್ ಮ್ಯಾನ್ ಈ ಕೃತ್ಯದಲ್ಲಿ ಭಾಗಿಯಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ದೇವರಾಜ್ ಮತ್ತು ಆತನ ತಂಡವನ್ನು ಬಂಧಿಸಲು ಎಸ್ಪಿ ಸೂಚನೆ ನೀಡಿದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು
ಸದ್ಯ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಮೋಕಾ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಸ್ವತಃ ಎಸ್ಪಿಯವರೇ ತಮ್ಮ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಈ ಮೂಲಕ ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶ ರವಾನೆ ಮಾಡಿದ್ದಾರೆ.












Click it and Unblock the Notifications