D Sudhakar Profile: ಜನಸೇವೆ ಉಸಿರಾಗಿಸಿಕೊಂಡಿದ್ದ ಡಿ.ಸುಧಾಕರ್, ಅವರ ರಾಜಕೀಯ-ಶೈಕ್ಷಣಿಕ ಹಿನ್ನೆಲೆ
D Sudhakar: ಕರ್ನಾಟಕದ ಹಾಲಿ ಸಚಿವ, ಚಿತ್ರದುರ್ಗದ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ (D Sudhakar) ಅವರು ಇಂದು ಭಾನುವಾರ (ಮೇ 10) ಕೊನೆಯುಸಿರೆಳೆದಿದ್ದಾರೆ. ರಾಜಕೀಯ ಚತುರ, ಬಡವರ ಬಂಧು ಎಂದು ಕರೆಸಿಕೊಳ್ಳುತ್ತಿದ್ದ ಅವರು ತೀವ್ರ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ನಿಧನರಾದರು. 2004ರಲ್ಲಿ ಅವರು ಚಳ್ಳಕೆರೆಯಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ ಆದರು. ಅಲ್ಲಿಂದ ಈವರೆಗೆ ಅನೇಕ ಏಳು ಬೀಳು ನೋಡಿಕೊಂಡು ಬಂದ ಅವರು ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳಲ್ಲೂ ಸಚಿವರಾಗಿ ತಮ್ಮದೇ ಆದ ಛಾಪು ಮೂಡಿಸಿದವರು. ಅವರ ಜೀವನ, ರಾಜಕೀಯ ಪ್ರವೇಶ, ಶೈಕ್ಷಣಿಕ ಮತ್ತು ರಾಜಕೀಯ ಹಿನ್ನೆಲೆ ಇಲ್ಲಿದೆ.
ಸಚಿವ ಡಿ.ಸುಧಾಕರ್ ಅವರು ಎದುರಾಳಿಗಳ ಪ್ರಬಲ ಸ್ಪರ್ಧೆ, ರಾಜಕೀಯ ಏರಿಳಿತ ಎದುರಾದರೂ ಸಹಿತ ಜಗ್ಗದೇ ವಿಧಾನಸಭೆಗೆ ನಾಲ್ಕು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು. ಹಾಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಅತ್ಯಾಪ್ತರು. ಅವರ ಆಪ್ತ ವಲಯದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದ ನಾಯಕರಲ್ಲಿ ಇವರು ಪ್ರಮುಖರು.

ಕೃಷಿ, ಉದ್ಯಮದಿಂದ ರಾಜಕೀಯದೆಡೆಗೆ; ಆರಂಭಿಕ ಜೀವನ
ಡಿ.ಸುಧಾಕರ್ ಅವರು 1961ರಲ್ಲಿ ಜನಿಸಿದ್ದು, ಪ್ರಾಥಮಿಕ, ಪ್ರೌಢ ಶಿಕ್ಷಣ ಮುಗಿಸಿದರು. ಕಾಲೇಜು ಮುಗಿಯುತ್ತಿದ್ದಂತೆ ಬಿ.ಕಾಂ ಪದವಿ ಪಡೆದರು. ಕೃಷಿಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಅವರು ವ್ಯವಸಾಯದ ಜೊತೆ ಜೊತೆಗೆ ಉದ್ಯಮ ರಂಗದಲ್ಲಿ ತೊಡಗಿಕೊಂಡಿದ್ದರು.
ಮಾಜಿ ಶಾಸಕ ಎನ್. ಜಯಣ್ಣ ಅವರೊಂದಿಗೆ ಒಡನಾಟದೊಂದಿಗೆ ರಾಜಕೀಯ ವಿದ್ಯೆ ಕಲಿತರು. ಬಳಿಕ 2004ರಲ್ಲಿ ಚಳ್ಳಕೆರೆ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆ ನಿಂತು ಗೆದ್ದು ಬಂದರು. ಈ ಮೂಲಕ ರಾಜಕೀಯ ಜೀವನ ಆರಂಭಿಸಿದರು. ನಂತರ 2008ರಲ್ಲಿ ಟಿಕೆಟ್ ಸಿಗದಿದ್ದಾಗ ಅವರು ಪಕ್ಷೇತರರಾಗಿ ಹಿರಿಯೂರಿನಿಂದ ಸ್ಪರ್ಧಿಸಿ ಜಯಶಾಲಿಯಾದರು. ಬಳಿಕ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದರು. ಅಂದಿನ ಬಿಜೆಪಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದರು.
2013ರಲ್ಲಿ ಮತ್ತೆ ಕಾಂಗ್ರೆಸ್ ಸೇರ್ಪಡೆ
ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ಅವರ ವಿರುದ್ಧ ಬಂಡಾವೆದ್ದು ವಿಧಾನಸಭಾಧ್ಯಕ್ಷರಿಂದ ಅನರ್ಹಗೊಂಡಿದ್ದರು. ಅಷ್ಟಕ್ಕೆ ಸಮ್ಮನಾಗದೇ ಸುಪ್ರೀಂ ಕೋರ್ಟ್ನಲ್ಲಿ ಕಾನೂನು ಹೋರಾಟ ನಡೆಸಿ ಬಳಿಕ ಶಾಸಕ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. 2013ರಲ್ಲಿ ಮತ್ತೆ ಕಾಂಗ್ರೆಸ್ ಸೇರ್ಪಡೆಯಾದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ಇದೇ ಸುಧಾಕರ್ ಅವರು ಮತ್ತೆ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು, ಪ್ರಸ್ತುತ ಸಿಎಂ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಯೋಜನೆ ಮತ್ತು ಸಾಂಖ್ಯಿತ ಖಾತೆ ನಿರ್ವಹಿಸುತ್ತಿದ್ದರು.
ಜನಪರ ಕಾಳಜಿ, ಬಡವರ ಬಂಧು
ಕೃಷಿ ಹಿನ್ನೆಲೆಯಿಂದ ಬಂದ ಸಚಿವ ಡಿ.ಸುಧಾಕರ್ ಅವರು ಆರಂಭದಲ್ಲಿ ತಂದೆಯೊಂದಿಗೆ ಕೃಷಿಯಲ್ಲಿ ಬೆರೆತರು. ನಂತರ ಉದ್ಯಮ, ರಾಜಕೀಯ ಜೀವನ ಆರಂಭಿಸಿದ್ದರು. ಜನರ ಪರವಾದ ನಿಲುವು, ರೈತಪರ ಕಾಳಜಿ ಅವರಲ್ಲಿ ಇಂದಿಗೂ ಇತ್ತು. ಚಿತ್ರದುರ್ಗದ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾಗ ಅಪಾರ ಕೊಡುಗೆ ನೀಡಿದ್ದಾರೆ. ತಮ್ಮ ರಾಜಕೀಯ ಸೇವೆಗೆ ಅಪಾರ ಜನರ ಆಶೀರ್ವಾದ ಪಡೆದಿದ್ದ ಅವರು ಅಧಿಕಾರಕ್ಕಾಗಿ ರಾಜಕಾರಣ ಮಾಡಿದವರಲ್ಲ. ಜನಸೇವೆಗೆ ಜೀವನವನ್ನು ಮುಖ್ಯವಾಗಿಸಿಕೊಂಡಿದ್ದ ಅವರು ಇಂದು ಅನಾರೋಗ್ಯದಿಂದ ನಿಧನರಾಗಿದ್ದು, ಪತ್ನಿ ಹರ್ಷಿಣಿ, ಪುತ್ರ ಸುಹಾಸ್ ಮತ್ತು ಪುತ್ರಿ ಸ್ಪೂರ್ತಿ ಸೇರಿದಂತೆ ಕುಟುಂಬಸ್ಥರು, ಆಪ್ತರನ್ನು ಅಗಲಿದ್ದಾರೆ. ಅವರ ಸ್ನೇಹ ವಲಯ, ರಾಜಕೀಯ ಗಣ್ಯರು ಸೇರಿ ಅನೇಕರು ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.













Click it and Unblock the Notifications