Karnataka Weather: ವಾಯು ಚಂಡಮಾರುತ ಪ್ರಸರಣ, ಬೆಂಗಳೂರು ಸೇರಿ ರಾಜ್ಯದ ಈ ಜಿಲ್ಲೆಗಳಿಗೆ ಮಳೆ ಎಚ್ಚರಿಕೆ
Karnataka Weather Alert: ರಾಜ್ಯದಲ್ಲಿ ಬಿಸಿಲ ಝಳದ ಮಧ್ಯ ಮಳೆಯ ಸಿಂಚನವಾಗುತ್ತಿದೆ. ದಕ್ಷಿಣ ಒಳನಾಡಿನಲ್ಲಿ 5 ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಮಳೆ ಸುರಿಯಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಶುಷ್ಕ ವಾತಾವರಣ ಮುಂದುವರಿಯಲಿದೆ. ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಇಂದು ಸಹ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕರ್ನಾಟಕ ಕರಾವಳಿ ಸೇರಿದಂತೆ ಭೂಮಿ ಹಾಗೂ ಸಮುದ್ರ ಮೇಲ್ಮೈನಲ್ಲಿ ತೀವ್ರ ಸ್ವರೂಪದ ಬದಲಾವಣೆಗಳು ಉಂಟಾಗಿವೆ. ಇದರಿಂದ ಪೂರ್ವ ಮುಂಗಾರು ಮಳೆ ಚುರುಕಾಗಿದೆ. ಅರಬ್ಬಿ ಸಮುದ್ರದ ಕೇರಳದ ಆಗ್ನೇಯ ಕರಾವಳಿ ಹೊಂದಿಕೊಂಡಂತೆ ಲಕ್ಷದ್ವೀಪದಲ್ಲಿ 1.5 ಕಿ.ಮೀ. ಎತ್ತರದಲ್ಲಿ ಹಾಗೂ ಕೊಮೊರಿನ್ ಪ್ರದೇಶದ ಮೇಲ್ಭಾಗದಲ್ಲಿ ಸುಮಾರು 5.8 ಕಿ.ಮೀ. ಎತ್ತರದಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿದೆ. ಕೇರಳ ಕರಾವಳಿ, ಕರಾವಳಿ ಕರ್ನಾಟಕ, ಒಳನಾಡು ಕರ್ನಾಟಕದಿಂದ ಹಿಡಿದು ಮಹಾರಾಷ್ಟ್ರದವರೆಗೆ 0.9ಕಿಮೀ ಎತ್ತರದಲ್ಲಿ ವಾಯು ಚಂಡಮಾರುತ ಪರಿಚಲನೆ ಉಂಟಾಗಿದೆ. ಈ ಕಾರಣಕ್ಕೆ ವಿವಿಧೆಡೆ ವ್ಯಾಪಕ ಮಳೆ ನಿರೀಕ್ಷೆ ಇದೆ.

ವಿವಿಧ ಜಿಲ್ಲೆಗಳಿಗೆ ವ್ಯಾಪಕ ಮಳೆ
ಪೂರ್ವ ಮುಂಗಾರು ಮಳೆ ಸುರಿಸುವ ಮಾರುತಗಳು ದಕ್ಷಿಣ ಒಳನಾಡಿನಲ್ಲಿ ಹೆಚ್ಚು ಸಕ್ರಿಯವಾಗಿವೆ. ಕೋಲಾರ, ರಾಮನಗರ, ಚಾಮರಾಜನಗರ, ಮೈಸೂರು ಮತ್ತು ಕೊಡಗು ಸೇರಿ 5 ಜಿಲ್ಲೆಗಳಲ್ಲಿ ಬಿರುಗಾಳಿ, ಗುಡುಗು ಮಿಂಚು ಸಹಿತ ಸಾಧಾರಣದಿಂದ ವ್ಯಾಪಕ ಮಳೆ ಆಗಲಿದೆ. ಉಳಿದಂತೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರದಲ್ಲಿ ಹಗುರ ಮಳೆ ಆಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಮುಂದಿನ ಎರಡು ದಿನ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಾಗೂ ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ಹಾವೇರಿ, ಗದಗ ವ್ಯಾಪ್ತಿಯ ಒಂದೆರಡು ಕಡೆಗಳಲ್ಲಿ ಮುಂದಿನ ಮೂರು ಹಗುರ ಮಳೆ ನಿರೀಕ್ಷೆ ಇದೆ. ಈ ವೇಳೆ ಗಾಳಿಯ ವೇಗ ಗಂಟೆಗೆ 40-50 ಕಿಲೋ ಮೀಟರ್ ವೇಗದಲ್ಲಿ ಬೀಸಲಿದೆ. ಯಾವ ಭಾಗಕ್ಕೂ ಆಲಿಕಲ್ಲು ಸಹಿತ ಭಾರೀ ಮಳೆ ಮತ್ತು ಗರಿಷ್ಠ ತಾಪಮಾನದಲ್ಲಿ ತೀವ್ರ ಬದಲಾವಣೆಗಳು ಇಲ್ಲ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.
ಮೇ 14ರವರೆಗೆ ಬೆಂಗಳೂರಿಗೆ ಮಳೆ ಮುನ್ಸೂಚನೆ
ರಾಜಧಾನಿ ಬೆಂಗಳೂರಿನಲ್ಲಿ ನೆನ್ನೆ ಶನಿವಾರ (ಮೇ 9) ರಂದು ದಕ್ಷಿಣ ವಲಯದಲ್ಲಿ ಕೊಂಚ ಮಳೆ ಆಗಿದೆ. ಸಂಜೆ ಮತ್ತು ರಾತ್ರಿಯಿಡಿ ತಂಪು ವಾತಾವರಣ ಕಂಡು ಬಂತು. ಕೋರಮಂಗಲ, ಜಕ್ಕಸಂದ್ರ ಎರಡು ವಾರ್ಡ್ಗಳಲ್ಲಿ ಸಂಜೆ ಹಗುರು ಮಳೆ ಸುರಿಯಿತು. ಇದರಿಂದ ಬಿಸಿಲಿಗೆ ಕಾದಿದ್ದ ನೆಲ ತಂಪಾಗಿತ್ತು. ಮುಂದಿನ ಮೇ 14ರವರೆಗೆ ನಗರದಲ್ಲಿ ವಿವಿಧ ಪ್ರತ್ಯೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ ನಿರೀಕ್ಷೆ ಇದೆ. ಗರಿಷ್ಠ ತಾಪಮಾನ 33 ಮತ್ತು ಕನಿಷ್ಠ 22-23 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ ಎಂದು ಐಎಂಡಿ ತಿಳಿಸಿದೆ.













Click it and Unblock the Notifications