ಮೇಕೆದಾಟು ಶೀಘ್ರ ಅನುಷ್ಠಾನಕ್ಕೆ ಆಗ್ರಹಿಸಿ ರಾಮನಗರದಲ್ಲಿ ರೈತರ ಪ್ರತಿಭಟನೆ
ರಾಮನಗರ, ನವೆಂಬರ್ 30 : ಮೇಕೆದಾಟು ಅಣೆಕಟ್ಟೆ ಶೀಘ್ರ ಅನುಷ್ಠಾನಕ್ಕೆ ಆಗ್ರಹಿಸಿ ರೈತ ಸಂಘ, ಮೇಕೆದಾಟು ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರಾಮನಗರದಲ್ಲಿ ಗುರುವಾರ(ನ.30) ಪ್ರತಿಭಟನೆ ನಡೆಯಿತು.
ನಗರದ ಪಿಡಬ್ಲೂಡಿ ಸರ್ಕಲ್ ಬಳಿ ಬೆಂಗಳೂರು -ಮೈಸೂರು ಹೆದ್ದಾರಿ ರಸ್ತೆ ತಡೆ ನಡೆಸಿ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಮೇಕೆದಾಟು ಅಣೆಕಟ್ಟೆ ವಿಚಾರವಾಗಿ ಹಣವನ್ನು ಮೀಸಲಿಟ್ಟಿದ್ದೇವೆ ಎಂದು ಹೋರಾಟಗಾರರ ದಿಕ್ಕು ತಪ್ಪಿಸಿದೆ. ಮುಂದಿನ ಬಜೆಟ್ನಲ್ಲಿ ಯೋಜನೆಯನ್ನು ಘೋಷಣೆ ಮಾಡಬೇಕು. ಅಲ್ಲದೇ ಮೇಕೆದಾಟು ಅಣೆಕಟ್ಟೆ ಯೋಜನೆಯ ಅನುಷ್ಠಾನ ನಡೆಸಿ ಶಂಕುಸ್ಥಾಪನೆ ನೆರವೇರಿಸಬೇಕು.

ಅಲ್ಲದೇ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು ಒಮ್ಮತದ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು. ಇಲ್ಲವಾದಲ್ಲಿ ಮುಂದಿನ ಡಿಸೆಂಬರ್ ತಿಂಗಳ 25 ರಿಂದ 28 ರವರೆಗೆ ಮೇಕೆದಾಟಿನಿಂದ ವಿಧಾನಸೌಧಕ್ಕೆ ಪಾದಯಾತ್ರೆ ನಡೆಸಿ ಮುತ್ತಿಗೆ ಹಾಕುವುದಾಗಿ ಪ್ರತಿಭಟನಕಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕನಕಪುರ ತಾಲ್ಲೂಕಿನ ಸಂಗಮ್ ಬಳಿ ಮೇಕೆದಾಟು ಅಣೆಕಟ್ಟು ನಿರ್ಮಾಣವಾದರೆ ಬಯಲುಸೀಮೆಯ ಜಿಲ್ಲೆಗಳು ಸೇರಿದಂತೆ ಬೆಂಗಳೂರಿನ ಜನತೆಗೂ ಕುಡಿಯಲು ನೀರು ಸಿಗುತ್ತದೆ. ಇದರ ಜೊತೆಯಲ್ಲೇ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು ಮತ್ತು ರಾಜ್ಯಕ್ಕೆ 60 ಟಿಎಂಸಿ ನೀರು ಸಂಗ್ರಹವಾಗುತ್ತದೆ.
ಯೋಜನೆ ಅನುಷ್ಠಾನಕ್ಕೆ ಅಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಎಲ್ಲಾ ಮಠಾಧೀಶರು, ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಎಲ್ಲಾ ಕನ್ನಡ ಪರ ಸಂಘಟನೆಗಳು ಕೈಜೋಡಿಸಿವೆ. ಇನ್ನಾದರು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಯೋಜನೆಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದರು.












Click it and Unblock the Notifications