ತಾಯಿ ನೆನಪಿಗಾಗಿ ಉಚಿತವಾಗಿ 501 ಪರಿಸರ ಸ್ನೇಹಿ ಗಣೇಶ ಮೂರ್ತಿ ವಿತರಣೆ
ಚನ್ನಪಟ್ಟಣ (ರಾಮನಗರ), ಸೆಪ್ಟೆಂಬರ್ 1: ಗಣೇಶ ಹಬ್ಬ ಬಂತು ಅಂದರೆ ಎಲ್ಲೆಲ್ಲೂ ವಿವಿಧ ಬಗೆಯ ಗಣೇಶ ಮೂರ್ತಿಗಳದ್ದೇ ಕಾರುಬಾರು. ನೂರು- ಸಾವಿರ ರುಪಾಯಿಯಿಂದ ಆರಂಭವಾಗಿ ಲಕ್ಷದ ತನಕ ಗಣೇಶ ಮೂರ್ತಿಗಳ ಬೆಲೆ ಇರುತ್ತದೆ. ಇಂತಹ ಸಂದರ್ಭದಲ್ಲಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಜೆಡಿಎಸ್ ತಾಲೂಕು ಅಧ್ಯಕ್ಷ ಹಾಗೂ ಬಮೂಲ್ ನಿರ್ದೇಶಕ ಎಚ್.ಸಿ.ಜಯಮುತ್ತು 501 ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಣೆ ಮಾಡಿದ್ದಾರೆ.
ಅಂದ ಹಾಗೆ, ಭಾನುವಾರದಂದು ವಿತರಣೆ ಮಾಡಿದ ಎಲ್ಲ ಗಣೇಶ ಮೂರ್ತಿಗಳು ಪರಿಸರಸ್ನೇಹಿ ಮಣ್ಣಿನ ಮೂರ್ತಿಗಳಾಗಿದ್ದು ವಿಶೇಷ. ಮೂರ್ತಿಗಳನ್ನು ಹೊಸಕೋಟೆ ಕಲಾವಿದರು ಕಳೆದ ಮೂರು ತಿಂಗಳಿಂದ ಶ್ರಮ ವಹಿಸಿ, ಜೇಡಿ ಮಣ್ಣಿನಿಂದ ನಿರ್ಮಿಸಿದ್ದಾರೆ.
7 ವರ್ಷದಿಂದಲೂ ಗೌರಿ- ಗಣೇಶ ಹಬ್ಬಕ್ಕೆ ಉಚಿತವಾಗಿ ತಾಲೂಕಿನ ಎಲ್ಲ ಗ್ರಾಮಗಳಿಗೆ ಗಣೇಶನ ಮೂರ್ತಿಗಳನ್ನು ವಿತರಣೆ ಮಾಡುತ್ತಾ ಬರುತ್ತಿದ್ದಾರೆ. ತಮ್ಮ ತಾಯಿ ಚನ್ನಮ್ಮ ಅವರ ನೆನಪಿಗಾಗಿ ಚನ್ನಮ್ಮ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಉಚಿತವಾಗಿ ಗಣೇಶ ಮೂರ್ತಿಗಳನ್ನು ವಿತರಿಸುತ್ತಾ ಬರುತ್ತಿದ್ದಾರೆ.
ಈ ವರ್ಷವೂ 501 ಗಣೇಶ ಮೂರ್ತಿಗಳನ್ನು ವಿತರಣೆ ಮಾಡಲಾಯಿತು. ಇನ್ನು ಪ್ರತಿವರ್ಷ ಗೌರಿ- ಹಬ್ಬದ ದಿನದಂದು ಗಣೇಶನ ಮೂರ್ತಿಗಳನ್ನು ಪಡೆಯಲು ಯುವಕರ ಪಡೆ ಕಾಯುತ್ತಾ ನಿಂತಿರುತ್ತಾರೆ. ಭಾನುವಾರ ಕೂಡ ಚನ್ನಪಟ್ಟಣ ವ್ಯಾಪ್ತಿಯ ಹಳ್ಳಿಗಳು ಮತ್ತು ಬಡಾವಣೆಗಳಿಂದ ಬಂದ ಯುವಕರ ದಂಡು ಮೆರವಣಿಗೆ ಮಾಡುತ್ತಾ ತಮ್ಮೂರಿಗೆ ಗಣೇಶ ಮೂರ್ತಿಗಳನ್ನು ತೆಗೆದುಕೊಂಡು ಹೋಗಿದ್ದಾರೆ.