ಬಿಡದಿ: ಬಾಣಂತಿ ಡಿಸ್ಚಾರ್ಜ್ ಮಾಡಲು 6 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟ ವೈದ್ಯೆ
ರಾಮನಗರ, ನವೆಂಬರ್, 26: ರಾಮನಗರ ತಾಲೂಕಿನ ಬಿಡದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಾಣಂತಿಯನ್ನು ಡಿಸ್ಚಾರ್ಜ್ ಮಾಡಲು 6 ಸಾವಿರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಪ್ರಸೂತಿ ತಜ್ಞೆ ಡಾ. ಶಶಿಕಲಾ ಬಾಣಂತಿಯನ್ನು ಡಿಸ್ಚಾರ್ಜ್ ಮಾಡಲು ಬೇಡಿಕೆ ಇಟ್ಟಿರುವುದು ಬೆಳಕಿಗೆ ಬಂದಿದೆ.
ಬಾಣಂತಿಯನ್ನು ಡಿಸ್ಚಾರ್ಜ್ ಮಾಡಲು 6 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಇದೀಗ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಒಂದು ವಾರದ ಹಿಂದೆಯೇ ಬಾಣಂತಿ ರೂಪ ಎಂಬುವವರಿಗೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಆಗಿತ್ತು. ಡಿಸ್ಚಾರ್ಜ್ ಮಾಡಲು ರೂಪಾ ಅವರ ಪತಿಗೆ ವೈದ್ಯೆ ಶಶಿಕಲಾ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

ಬಾಣಂತಿ ಡಿಸ್ಚಾರ್ಜ್ ಮಾಡಲು ಲಂಚಕ್ಕೆ ಬೇಡಿಕೆ
ರಾಮನಗರ ಜಿಲ್ಲೆ ಬಿಡದಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಲ್ಲಿ ಒಬ್ಬರಾಗಿರುವ ಪ್ರಸೂತಿ ತಜ್ಞೆ ಡಾ.ಶಶಿಕಲಾ ಅವರು ಒಂದು ವಾರದ ಹಿಂದೆ ಬಾಣಂತಿ ಡಿಸ್ಚಾರ್ಜ್ ಮಾಡಲು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮಗು ಹೆತ್ತ ಬಾಣಂತಿ ರೂಪ ಎನ್ನುವವರನ್ನು ಡಿಸ್ಚಾರ್ಜ್ ಮಾಡಲು ಆರು ಸಾವಿರ ಲಂಚ ಕೇಳಿದ್ದಾರೆ. ಅವರು ಅರು ಸಾವಿರ ರೂಪಾಯಿಗಳಲ್ಲಿ 2,000 ರೂಪಾಯಿ ತೆಗೆದುಕೊಳ್ಳುತ್ತಾರಂತೆ. ಉಳಿದ ನಾಲ್ಕು ಸಾವಿರ ರೂಪಾಯಿಯನ್ನು ಇನ್ನಿಬ್ಬರ ವೈದ್ಯರಿಗೆ ತಲಾ 2,000 ರೂಗಳಂತೆ ಹಂಚುತ್ತಾರಂತೆ ಎನ್ನುವ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ರಾಮನಗರದ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಮತ್ತು ಅರೋಗ್ಯ ಸಚಿವ ಡಾ.ಕೆ.ಸುಧಾಕರ್ ಇಬ್ಬರೂ ವೈದ್ಯರಾಗಿದ್ದವರಾಗಿದ್ದಾರೆ. ತಮ್ಮ ಸಮುದಾಯದ ಒಬ್ಬ ಸದಸ್ಯೆ ನಡೆಸುತ್ತಿರುವ ಭ್ರಷ್ಟಾಚಾರ ಅವರ ಕಣ್ಣಿಗೆ ಕಾಣುತ್ತಿಲ್ಲವೇ? ಎಂದು ಜನರು ಪ್ರಶ್ನೆ ಕೇಳುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ನಿಲ್ಲದ ಲಂಚವತಾರ
ಸಾಮಾನ್ಯವಾಗಿ ಜನರ ಆರೋಗ್ಯವನ್ನು ಕಾಪಾಡುವ ಹಾಗೂ ಜೀವಗಳನ್ನು ಉಳಿಸುವಂತಹ ವೈದ್ಯರಿಗೆ ವೈದ್ಯೋ ನಾರಾಯಣ ಹರಿ ಅಂತಾ ಹೇಳುತ್ತಾರೆ. ಆದರೆ ಅದು ಇತ್ತೀಚಿನ ದಿನಗಳಲ್ಲಿ ಹಣವೋ ನಾರಾಯಣ ಹರಿ ಎನ್ನುವಂತಾಗಿದೆ. ಆಸ್ಪತ್ರೆಗೆ ಯಾರಾದರೂ ರೋಗಿಗಳು ಬಂದ ಅನೇಕ ವೈದ್ಯರು ಮೊದಲು ಬಿಲ್ಲಿಂಗ್ ಕೌಂಟರ್ಗೆ ಹಣ ಕಟ್ಟೀದ್ಧೀರಾ ಎಂದು ಕೇಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಜನರ ಜೀವ ಉಳಿಸುವ ವೈದ್ಯರಿಗಿಂತಲೂ, ಹಣವನ್ನು ಎರೆಯುತ್ತಲೇ ಜೀವಗಳನ್ನು ತೆಗೆಯುವ ವೈದ್ಯರ ಸಂಖ್ಯೆ ಹೆಚ್ಚಾಗಿದೆ. ಹಳ್ಳಿಗಾಡಿನಲ್ಲಿ ಇಂತಹ ಸಂಸ್ಯೆಗಳು ಪ್ರತಿನಿತ್ಯ ನಡೆಯುತ್ತಲೇ ಇರುತ್ತವೆ. ಬಡವರು ಹಣವಿಲ್ಲದೇ ಸರ್ಕಾರಿ ಆಸ್ಪತ್ರೆಗಳ ಕಡೆಗೆ ಮುಖ ಮಾಡುತ್ತಾರೆ. ಆದರೆ ಅಲ್ಲಿನ ಕೆಲವು ವೈದ್ಯರು ರಾಕ್ಷಸರಂತೆ ವರ್ತಿಸುತ್ತಾ ರೋಗಿಗಳ ಬಳಿ ಹಣವನ್ನು ಎರೆಯುತ್ತಲೇ ಇರುತ್ತಾರೆ. ಇದರಿಂದ ಎಷ್ಟೋ ಜನರು ತಮಗೆ ಸಮಸ್ಯೆ ಇದ್ದರೂ ಕೂಡ ಆಸ್ಪತ್ರೆಗಳತ್ತ ಮುಖ ಮಾಡದೇ ಅಲ್ಲಿಯೇ ಸಾವನ್ನಪ್ಪಿರುವ ಉದಾಹರಣೆಗಳು ಇವೆ. ಇಂತಹ ದಂಧೆಗಳು ನಡೆಯುತ್ತಿದ್ದರೂ ಕೂಡ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.












Click it and Unblock the Notifications