ಕಾಂಗ್ರೆಸ್ ಬಳಿ ಒಬ್ಬ ಟ್ರಬಲ್ ಶೂಟರ್, ನಮ್ಮ ಬಳಿ ಹತ್ತು ಟ್ರಬಲ್ ಕಿಲ್ಲರ್ಸ್: ಕಟ್ಟಾ
ಮಾಗಡಿ (ರಾಮನಗರ ಜಿಲ್ಲೆ), ಜುಲೈ 28: "ಕಾಂಗ್ರೆಸ್ಸಿಗರ ಬಳಿ ಒಬ್ಬ ಟ್ರಬಲ್ ಶೂಟರ್ ಇದ್ದರೆ, ನಮ್ಮ ಬಳಿ ಹತ್ತು ಟ್ರಬಲ್ ಕಿಲ್ಲರ್ಸ್ ಇದ್ದಾರೆ" ಎಂದು ಬಿಜೆಪಿಯ ಮುಖಂಡ ಕಟ್ಟಾ ಸುಬ್ರಮಣ್ಯಂ ನಾಯ್ಡು ವ್ಯಂಗ್ಯವಾಡಿದರು.
ಮಾಗಡಿಯಲ್ಲಿ ಮಾತನಾಡಿದ ಅವರು, "ಕೆಲವರಿಗೆ ಬಿಜೆಪಿಗೆ ಅಧಿಕಾರ ಬಂದಿರುವುದು ಅರ್ಜಿಣವಾಗಿದೆ. ಆಸೂಯೆ, ಅಸಂತೃಪ್ತಿ ಕೂಡ ಬಂದಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಕೆಲ ಶಾಸಕರು ಅಲ್ಲಿನ ಅತೃಪ್ತಿಯಿಂದ ಪಕ್ಷ ಬಿಟ್ಟು ಹೊರ ಬಂದಿದ್ದಾರೆ. ಈ ಹಿಂದೆ ಸಮಾಧಾನವಾಗಿದ್ದ ಆ ಶಾಸಕರ ಮೇಲೆ ಯಾವ ಟೀಕೆಯೂ ಇರಲಿಲ್ಲ. ಈಗ ಪಕ್ಷ ನಡೆಸಿಕೊಂಡಿರುವ ನಡವಳಿಕೆಯಿಂದ ಅವರಿಗೆ ಅಸಮಾಧಾನವಾಗಿದೆ. ಹೀಗಾಗಿ ಪಕ್ಷ ಬಿಟ್ಟಿದ್ದಾರೆ" ಎಂದರು.
ಆದರೆ, ಈಗ ಅಂತಹ ಶಾಸಕರನ್ನು ದುಷ್ಟರು, ಭ್ತಷ್ಟರು, ಭೂತಗಳು ಎಂದು ಸಮಾಜದಲ್ಲಿ ಬಿಂಬಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು. ಜೆಡಿಎಸ್ ಹಾಗೂ ಕಾಂಗ್ರೆಸ್ ಬಳಿ ಇದ್ದಾಗ ಶಾಸಕರು ಸರಿ ಇದ್ದರು, ಈಗ ಅವರು ಭ್ರಷ್ಟರಾಗಿದ್ದಾರಾ ಎಂದು ಪ್ರಶ್ನಿಸಿದರು.

"ಇನ್ನು ಅತೃಪ್ತ ಶಾಸಕರು ನಮ್ಮನ್ನು ತಿಂದುಬಿಡುತ್ತಾರೆ ಎಂದು ಹೇಳಿದ್ದಾರೆ. ನಾವೇನು ಬಿರಿಯಾನಿಯಾ ತಿಂದು ಬಿಡುವುದಕ್ಕೆ?" ಎಂದು ಕಿಡಿ ಕಾರಿದರು.
'ಸಿದ್ದರಾಮಯ್ಯ ಅವರು ಸುಳ್ಳಿನ ಸೌಧ ಕಟ್ಟುತ್ತಿದ್ದಾರೆ. ಅವರ ಈ ಬುದ್ಧಿಯಿಂದಲೇ ಇಂದು ಕಾಂಗ್ರೆಸ್ ಸರ್ವನಾಶವಾಗಿದೆ. ಅತೃಪ್ತ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ. ಈ ಶಾಸಕರನ್ನು ಅನರ್ಹ ಮಾಡಲು ಅವರಿಗೆ ಹಕ್ಕಿಲ್ಲ. ಇನ್ನು ಯಡಿಯೂರಪ್ಪ ಅವರ ಪದವಿ ಸ್ವೀಕಾರವೇ ಸರಿಯಲ್ಲ ಎನ್ನುವವರು ಕಾನೂನು ರೀತಿ ಹೋರಾಟ ಮಾಡಲಿ. ಸುಪ್ರೀಂ ಕೋರ್ಟ್, ಹೈ ಕೋರ್ಟ್ ಗೆ ಹೋಗಲಿ. ಅದನ್ನು ಬಿಟ್ಟು ಬರೀ ಮಾತನಾಡುವುದರಲ್ಲಿ ಏನಿದೆ" ಎಂದು ಪ್ರಶ್ನಿಸಿದರು.












Click it and Unblock the Notifications