ಬಿಜೆಪಿಯವರು ಅನರ್ಹರಿಗೆ ಗೋರಿ ಕಟ್ತಿದ್ದಾರೆ, ನಾವು ತಿಥಿಗೆ ಹೋಗ್ತೀವಿ; ಡಿಕೆಶಿ
Recommended Video
ಕನಕಪುರ, ಆಗಸ್ಟ್ 14: "ಬಿಜೆಪಿಯವರು ಅನರ್ಹರಿಗೆ ಗೋರಿ ಕಟ್ತಿದ್ದಾರೆ, ನಾವು ದಿವಸಕ್ಕೆ (ತಿಥಿ) ಹೋಗಿ ಬರ್ತೀವಿ" ಎಂದು ಪ್ರತಿಕ್ರಿಯಿಸಿದ್ದಾರೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್. ಅನರ್ಹ ಶಾಸಕ ಎಚ್.ವಿಶ್ವನಾಥ್ ಫೋನ್ ಕದ್ದಾಲಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಈ ರೀತಿ ಮಾತನಾಡಿದರು.
ಕನಕಪುರದ ಸಂಗಮ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಅವರು, "ಕಾವೇರಿ ಈ ಬಾರಿ ಉಕ್ಕಿ ಹರಿದಿದ್ದಾಳೆ. ಸಂಗಮದ ಅಕ್ಕಪಕ್ಕ ಇರುವ ಹಳ್ಳಿಗಳು ಮುಂಜಾಗ್ರತೆ ವಹಿಸಬೇಕು. ನನ್ನ ಕ್ಷೇತ್ರದ ಯೋಗಕ್ಷೇಮ ನೋಡಲು ಬಂದಿದ್ದೇನೆ" ಎಂದು ಹೇಳಿದರು.
"ರಾಜ್ಯದಲ್ಲಿ ನೆರೆಯಿಂದ ಜನರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಈ ನೆರೆ ಸಂತ್ರಸ್ತರಿಗೆ ಮನೆ ಬಾಡಿಗೆ ಮನೆ ಕಟ್ಟಲು 5 ಲಕ್ಷ ಹಣ ಕೊಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಈ ಮಾತನ್ನು ತಪ್ಪದೇ ನಡೆಸಲಿ. ಬೆಳೆ ಕಳೆದುಕೊಂಡು ಕಂಗಾಲಾಗಿರುವ ರೈತರಿಗೂ ಪರಿಹಾರ ನೀಡಲಿ" ಎಂದಿದ್ದಾರೆ.

"ನೋಟ್ ಪ್ರಿಂಟ್ ಮಾಡುವ ಮಿಷಿನ್ ಇಲ್ಲ ಎಂದು ಯಡಿಯೂರಪ್ಪ ಸಭೆಯಲ್ಲಿ ಹೇಳಿದ್ದಾರೆ. ಈ ಹಿಂದೆಯೂ ಇದೇ ರೀತಿ ಮಾತನಾಡಿದ್ದರು. ಅದರ ಬಗ್ಗೆ ಈಗ ಚರ್ಚೆ ಬೇಡ. ಆದರೆ ಸ್ವಾತಂತ್ರ್ಯ ಬಂದ ನಂತರ ಇದೇ ಮೊದಲ ಬಾರಿಗೆ ಅಧಿಕಾರಿಗಳ ಕೈಗೆ ಧ್ವಜಾರೋಹಣ ಮಾಡುವ ಶಕ್ತಿ ಕೊಟ್ಟಿದ್ದಾರೆ. ಯಡಿಯೂರಪ್ಪ ಅವರಿಗೆ ಒಳ್ಳೆಯದಾಗಲಿ" ಎಂದರು.
ಫೋನ್ ಕದ್ದಾಲಿಕೆ ಕುರಿತು ಮಾತನಾಡಿದ ಅವರು, "ನಮ್ಮ ಸರ್ಕಾರದಲ್ಲಿ ಸಿಎಂ ಆಗಲಿ ಗೃಹಮಂತ್ರಿಗಳಾಗಲಿ ಫೋನ್ ಕದ್ದಾಲಿಕೆ ಮಾಡಿಲ್ಲ. ಯಾರು ಬೇಕಾದರೂ ತನಿಖೆ ನಡೆಸಲಿ. ನಾನು ಕೂಡ ಸಮ್ಮಿಶ್ರ ಸರ್ಕಾರದಲ್ಲಿ ಸಚಿವನಾಗಿದ್ದವನು. ನನಗೆ ತಿಳಿದ ಹಾಗೆ ಯಾವುದೇ ಫೋನ್ ಟ್ರ್ಯಾಪ್ ಮಾಡಿಸಿಲ್ಲ" ಎಂದು ಹೇಳಿದರು.

ಸಿಎಂ ಪರಿಹಾರ ನಿಧಿಗೆ ಹಣ ನೀಡುವ ಬಗ್ಗೆ ಶಾಸಕರೆಲ್ಲ ಕೂತು ಚರ್ಚೆ ನಡೆಸಿ ಶಾಸಕರ ನಿಧಿಯಿಂದ ಸಹಾಯ ಒದಗಿಸುವುದಾಗಿ ತಿಳಿಸಿದರು.












Click it and Unblock the Notifications