ಸಿಎಂ ಜೊತೆ ದೆಹಲಿಗೆ ತೆರಳಲಿರುವ ಜಿ ಪರಮೇಶ್ವರ್, ಸಭೆಯ ಗುಟ್ಟು ಬಿಚ್ಚಿಟ್ಟ ಗೃಹ ಸಚಿವ
ಬೆಂಗಳೂರು: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಸದ್ದು ಮತ್ತೆ ಜೋರಾಗಿರುವ ಹೊತ್ತಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ಸೋಮವಾರ (ಮೇ 25) ರಾತ್ರಿಯೇ ಭೇಟಿ ನೀಡಿದ್ದಾರೆ. ಅವರೊಂದಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸಹ ತೆರಳಿದ್ದಾರೆ. ಮಂಗಳವಾರ (ಮೇ 26) ಬೆಳಗ್ಗೆ 11 ಗಂಟೆಗೆ ವರಿಷ್ಠರೊಂದಿಗೆ ಮಹತ್ವದ ಸಭೆ ನಡೆಯಲಿದೆ. ಏನೆಲ್ಲ ಚರ್ಚೆಗಳಾಗಬಹುದು ಎಂಬ ಸುಳಿವು ನೀಡಿದ್ದಾರೆ. ರಾಜ್ಯ ರಾಜಕೀಯದಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ಎಲ್ಲರ ಚಿತ್ತ ದೆಹಲಿ ಕಾಂಗ್ರೆಸ್ ಸಭೆ ಮೇಲೆ ನೆಟ್ಟಿದೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಪ್ರತ್ಯೇಕ ವಿಮಾನದಲ್ಲಿ ಸಿಎಂ ಜೊತೆಗೆ ಹಲವು ನಾಯಕರ ದಂಡೇ ದೆಹಲಿ ಪ್ರವಾಸ ಕೈಗೊಂಡಿದೆ. ಇತ್ತ ಡಿಸಿಎಂ ಡಿಕೆ ಶಿವಕುಮಾರ್ ಅವರು ತೆರಳಲಿದ್ದಾರೆ.
ದೆಹಲಿ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಕಾಂಗ್ರೆಸ್ ಹೈಕಮಾಂಡ್ ಆಹ್ವಾನದ ಮೇರೆಗೆ ನಾನು ಇಂದೇ ಸಿಎಂ ಜೊತೆಗೆ ದೆಹಲಿಗೆ ತೆರಳುತ್ತಿದ್ದೇನೆ. ಅಲ್ಲಿ ಅನೇಕ ವಿಚಾರಗಳು ಚರ್ಚೆಗೆ ಬರಬಹುದು ಅಂತಲೂ ಅವರು ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಗೊಂದಲ ನಿವಾರಿಸುವಂತೆ ಮನವಿ ಮಾಡುವೆ
ನಾನು ಪ್ರತ್ಯೇಕವಾಗಿ ಎಂದೂ ಕೂಡ ದೆಹಲಿಗೆ ಹೋಗಿಲ್ಲ. ನಾಳೆಯೇ ಸಭೆಯಲ್ಲಿ ಸಿಎಂ ಜೊತೆಗೆ ಪಾಲ್ಗೊಳ್ಳಲಿದ್ದೇನೆ. ಚರ್ಚೆಗಳಂತೂ ಆಗಲಿವೆ, ಪಕ್ಷದಲ್ಲಿ ಏನೇ ಗೊಂದಲಗಳಿದ್ದರೂ ಅವು ಬಗೆಹರಿಯಬೇಕು. ನನ್ನ ಆಶಯ ಕೂಡ ಅದೇ ಆಗಿದೆ. ಏಕೆಂದರೆ ಗೊಂದಲ ಇದ್ದಷ್ಟು ಅದರ ಪರಿಣಾಮ ಆಡಳಿತದ ಮೇಲೆ ಬೀರಲಿದೆ. ಆದ್ದರಿಂದ ಏನೇ ಇದ್ದರೂ ಹೈಕಮಾಂಡ್ ಬಗೆಹರಿಸಬೇಕು. ಈ ಬಗ್ಗೆ ನಾನು ಸಹ ಮನವಿ ಮಾಡಲಿದ್ದೇನೆ ಎಂದರು.
ಸಭೆಯ ಅಜೆಂಡ ನೀಡಿದ ಪರಮೇಶ್ವರ್
ಕೆಲವೊಮ್ಮೆ ಸಿಎಂ ಜೊತೆಗೆ ನಮ್ಮನ್ನು ಒಟ್ಟಿಗೆ ಕೂರಿಸಿ ಕೆಲವು ವಿಷಯಗಳನ್ನು ಮಾತನಾಡುತ್ತಾರೆ. ಕೆಲವೊಮ್ಮೆ ಅವರೊಂದಿಗಷ್ಟೇ ಮಾತನಾಡುತ್ತಾರೆ. ಪ್ರತಿಯೊಂದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಸಭೆಯಲ್ಲಿ ರಾಜ್ಯಸಭೆ ಮೂರು ಸ್ಥಾನಗಳ ಆಯ್ಕೆ ಕುರಿತು ಚರ್ಚೆ ಆಗಲಿದೆ. ಆ ಮೂರು ಸ್ಥಾನಗಳು ಕಾಂಗ್ರೆಸ್ಗೆ ಸಿಗಲಿದೆ. ಇದರೊಂದಿಗೆ ವಿಧಾನಪರಿಷತ್ತ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಜೊತೆಗೆ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (SIR) ಕುರಿತು ಒಂದಷ್ಟು ವಿಚಾರವಾಗಿ ಮಾಡಲಿದ್ದೇವೆ ಎಂದು ಅವರು ಸಭೆಯ ಅಜೆಂಡ ತಿಳಿಸಿದ್ದಾರೆ. ಇದರೊಂದಿಗೆ ಸಚಿವ ಸಂಪುಟ ಸಭೆ ಪುನರ್ ರಚನೆ ಬಗ್ಗೆಯೂ ಚರ್ಚೆಗಳಾಗಲಿವೆ ಎನ್ನಲಾಗಿದೆ.
ನಾಯಕತ್ವ ಬದಲಾವಣೆ ಬಗ್ಗೆ ಪರಮೇಶ್ವರ್ ಹೇಳಿದ್ದೇನು?
ನಾಳೆ ದೆಹಲಿಯಲ್ಲಿ ನಾಯಕತ್ವ ಬದಲಾವಣೆ ಕುರಿತು ಚರ್ಚೆಗಳು ಆಗುತ್ತವೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದನ್ನು ಹೈಕಮಾಂಡ್ ತಿರ್ಮಾನಿಸುತ್ತದೆ. ಅದೆಲ್ಲವು ನಾಳೆ ಗೊತ್ತಾಗಲಿದೆ ಎಂದಷ್ಟೇ ಉತ್ತರಿಸಿದರು. ನಾಯಕತ್ವ ಬದಲಾಗಣೆ ಆದರೆ ಕೆ.ಎನ್. ರಾಜಣ್ಣ ಅವರು, ಪರಮೇಶ್ವರ ಸಿಎಂ ಆಗಲಿ ಎಂದಿದ್ದರೆಂಬ ಸುದ್ದಿಗಾರರ ಪ್ರಶ್ನೆಗೆ ಅವರು, ಅದೆಲ್ಲವನ್ನು ವರಿಷ್ಠರು ನಿರ್ಧರಿಸುತ್ತಾರೆ. ಯಾರು ಏನೇ ಹೇಳಿದರೂ ಅಂತಿಮ ತೀರ್ಮಾನ ಹೈಕಮಾಂಡ್ನದ್ದೆ, ನಾವು ಒಪ್ಪಬೇಕು ಎಂದು ತಿಳಿಸಿದರು.
ದೆಹಲಿಗೆ ಡಿಕೆ ಶಿವಕುಮಾರ್ ಗೆ ತಡವಾಗಿ ಆಹ್ವಾನ
ಪಕ್ಷದ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರನ್ನು ದೆಹಲಿಗೆ ಬರುವಂತೆ ಇಂದು ಮಧ್ಯಾಹ್ನ ಆಹ್ವಾನಿಸಿದ್ದಾರೆ. ಏಕೆಂದರೆ ನಾಯಕರಿಗೆ ಪ್ರತ್ಯೇಕ ಸಮಯ ಕೊಡಬೇಕಾಗುತ್ತದೆ. ಅದೆಲ್ಲ ನೋಡಿಕೊಂಡು ತಡವಾಗಿ ಅವರನ್ನು ಕರೆದಿರಬಹುದು ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.
ದೆಹಲಿಗೆ ಸಿಎಂ ಜೊತೆ ನಾಯಕತ ದಂಡು, ಪಟ್ಟಿ ಇಲ್ಲಿದೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಎಎಲ್ ವಿಮಾನ ನಿಲ್ದಾಣದ ಮೂಲಕ ತೆರಳಿದ್ದಾರೆ. ಅವರೊಂದಿಗೆ ಗೃಹ ಸಚಿವ ಜಿ.ಪರಮೇಶ್ವರ ಅವರು ತೆರಳಿರುವುದು ಅಧಿಕೃತ ಮಾಹಿತಿ ಇದೆ. ಆದರೆ ಪ್ರತ್ಯೇಕ ವಿಮಾನದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ.ಮಹದೇವಪ್ಪ, ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಇಂಧನ ಸಚಿವ ಕೆ.ಜೆ.ಜಾರ್ಜ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ಅವರು ಹೆಚ್ಎಎಲ್ನಿಂದ ವಿಶೇಷ ವಿಮಾನದಲ್ಲಿ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು 6 ಗಂಟೆಗೆ ಪ್ರತ್ಯೇಕವಾಗಿ ದೆಹಲಿಗೆ ತೆರಳಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಸಿಎಂ ಬಣದ ಬಹುತೇಕ ಎಲ್ಲ ನಾಯಕರು ದೆಹಲಿಗೆ ಭೇಟಿ ನೀಡಿರುವುದು ಮತ್ತಷ್ಟು ಕುತೂಹಲ ಕೆರಳುವಂತೆ ಮಾಡಿದೆ. ಇತ್ತ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಹ ದೆಹಲಿಗೆ ತಲುಪಲಿದ್ದಾರೆ. ಸಿಎಂ ಬಣದಂತೆ ಡಿಕೆ ಶಿವಕುಮಾರ್ ಬಣವು ನಾಳೆ ಮಂಗಳವಾರ ದೆಹಲಿ ಪ್ರವಾಸ ಕೈಗೊಂಡರು ಅಚ್ಚರಿ ಪಡಬೇಕಿಲ್ಲ.














Click it and Unblock the Notifications