''ಇಂಧನ ಬೆಲೆ ಏರಿಕೆಯಿಂದ ಕಾಂಗ್ರೆಸ್ ಸರ್ಕಾರಕ್ಕೆ 6000 ಕೋಟಿ ರೂ ಆದಾಯ: ವ್ಯಾಟ್ ಇಳಿಕೆಗೆ ಆಗ್ರಹ''
ಬೆಂಗಳೂರು: ಇಂಧನ ದರ ಏರಿಕೆಯಿಂದ ಒಂದು ಕಡೆ ಜನರಿಗೆ ತೊಂದರೆ ಆಗುತ್ತಿದ್ದರೆ, ಮತ್ತೊಂದೆಡೆ ಈ ವಿಚಾರ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಸಿಎಂ ಸಿದ್ದರಾಮಯ್ಯ ಆದಿಯಾಗಿ ಅನೇಕ ರಾಜ್ಯ ಕಾಂಗ್ರೆಸ್ ನಾಯಕರು ಇಂಧನ ಬೆಲೆ ಹೆಚ್ಚಳ ಖಂಡಿಸಿ ಕೇಂದ್ರ ಸರ್ಕಾರ ದೂರಿದ್ದಾರೆ. ವಿಪಕ್ಷ ನಾಯಕರು ತಕ್ಕ ಕೌಂಟರ್ ನೀಡುತ್ತಿದ್ದಾರೆ. ಇದೀಗ ಪೆಟ್ರೋಲ್ ವ್ಯಾಟ್ನಿಂದ ರಾಜ್ಯ ಸರ್ಕಾರವೇ ಕೋಟಿ ಕೋಟಿ ಆದಾಯ ಗಳಿಸುತ್ತಿದೆ. ಅದನ್ನು ಕಡಿಮೆ ಮಾಡುವಂತೆ ಒತ್ತಾಯ ಕೇಳಿ ಬಂದಿದೆ.
ಪೆಟ್ರೋಲ್ ದರ ಏರಿಕೆಯಿಂದ ವಾರ್ಷಿಕ 6,000 ಕೋಟಿ ರೂ. ಹೆಚ್ಚುವರಿ ಆದಾಯ ಗಳಿಸುತ್ತಿರುವ ಕಾಂಗ್ರೆಸ್ ಸರ್ಕಾರ, ವ್ಯಾಟ್ ಕಡಿಮೆ ಮಾಡದೆ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದೆ. ಜನರಿಗೆ ಅನುಕೂಲ ಮಾಡಲು ಸರ್ಕಾರ ಪೆಟ್ರೋಲ್ ಮೇಲಿನ ವ್ಯಾಟ್ ಕಡಿಮೆ ಮಾಡಬೇಕೆಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಪೆಟ್ರೋಲ್ ದರ ಏರಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕಾರಣ ಮಾಡುತ್ತಿದ್ದಾರೆ. ಯುದ್ಧದಿಂದಾಗಿ ಪೆಟ್ರೋಲ್ ಬಳಕೆ ಕಡಿಮೆ ಮಾಡಲು ಬೇರೆ ದೇಶಗಳು ನಿರ್ಬಂಧ ಹಾಕಿದ್ದರೂ ಪ್ರಧಾನಿ ನರೇಂದ್ರ ಮೋದಿ ಅಂತಹ ನಿರ್ಬಂಧ ಹಾಕಿಲ್ಲ ಎಂದು ಕೇಂದ್ರದ ನಡೆ ಸಮರ್ಥಿಸಿಕೊಂಡರು.
ರಾಜ್ಯದಲ್ಲಿ ಪೆಟ್ರೋಲ್ ವ್ಯಾಟ್ ದರ ಅಧಿಕ
ಕರ್ನಾಟಕದಲ್ಲಿ ಪೆಟ್ರೋಲ್ ದರ ಲೀಟರ್ಗೆ 107.70 ರೂ. ಇದ್ದರೆ, ದೆಹಲಿಯಲ್ಲಿ 99.50 ರೂ., ಗುಜರಾತ್ನಲ್ಲಿ 99.10 ರೂ., ಉತ್ತರ ಪ್ರದೇಶದಲ್ಲಿ 99.50 ರೂ., ಹರಿಯಾಣದಲ್ಲಿ 99.70 ರೂ. ದರವಿದೆ. ಅಂದರೆ ರಾಜ್ಯದಲ್ಲಿ ಮಾತ್ರ ದರ ಹೆಚ್ಚಿದೆ. ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಮೇಲಿನ ವ್ಯಾಟ್ ಹೆಚ್ಚಳ ಮಾಡಿದ್ದು, ಅದನ್ನು ಕಡಿಮೆ ಮಾಡದೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ದರ ಏರಿಕೆಯಿಂದ ಕೇಂದ್ರ ಸರ್ಕಾರಕ್ಕೆ ಆದಾಯ ಬರುವುದಿಲ್ಲ. ರಾಜ್ಯ ಸರ್ಕಾರಕ್ಕೆ ಹೆಚ್ಚುವರಿಯಾಗಿ ವಾರ್ಷಿಕ 6,000 ಕೋಟಿ ರೂ. ಆದಾಯ ಬರಲಿದೆ. ಇದನ್ನು ಗ್ಯಾರಂಟಿಗೆ ಬಳಸುತ್ತಾರೆ ಎಂದು ದೂರಿದರು.
ಜನರಿಗೆ ಅನುಕೂಲ ಮಾಡಲು ಇಂಧನ ತೆರಿಗೆ ಇಳಿಸಿ
ಈಗ ಪ್ರತಿ ಲೀಟರ್ ಪೆಟ್ರೋಲ್ ಮಾರಾಟದಿಂದ 1.15 ರೂ. ಹೆಚ್ಚುವರಿ ಆದಾಯ ರಾಜ್ಯ ಸರ್ಕಾರಕ್ಕೆ ಬರುತ್ತಿದೆ. ಜನರಿಗೆ ಸಹಾಯ ಮಾಡಬೇಕೆಂಬ ಮನಸ್ಸಿದ್ದರೆ ರಾಜ್ಯ ಸರ್ಕಾರದ ಕಡೆಯಿಂದಲೇ ತೆರಿಗೆ ಇಳಿಕೆ ಮಾಡಬೇಕು. ಇಲ್ಲವಾದರೆ ಹೆಚ್ಚುವರಿ ಆದಾಯ ಪಡೆಯುತ್ತಿರುವ ಬಗ್ಗೆ ಜನರಿಗೆ ಹೇಳಬೇಕು. ದರ ಏರಿಕೆಯ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡುವುದು ಎಂದರೆ ಅದು ಜನರಿಗೆ ಮಾಡುವ ವಂಚನೆ ಎಂದರು.
ಮತಬ್ಯಾಂಕ್ ರಾಜಕಾರಣಕ್ಕಾಗಿ ಗಲಭೆ: ಕ್ರಮ ಯಾಕಿಲ್ಲ?
ಅಳಂದದ ಕೋಮುಗಲಭೆ ಪ್ರಕರಣದಲ್ಲಿ ಮುಸ್ಲಿಮರ ವಿರುದ್ಧ ಕೇಸು ವಾಪಸ್ ಪಡೆಯಲಾಗಿದೆ. ನಂತರ ಭಟ್ಕಳದಲ್ಲಿ ಹಿಂದೂಗಳು ಕಟ್ಟಿದ್ದ ಮೂರಿನಕಟ್ಟೆಯನ್ನು ಮುಸ್ಲಿಮ್ ಮತಾಂಧರು ಒಡೆದು ಹಾಕಿದ್ದಾರೆ. ಈ ಭಯೋತ್ಪಾದಕರ ಸಂತತಿಯವರು ಇಷ್ಟೆಲ್ಲ ಮಾಡಿದರೂ ಪೊಲೀಸರು ಕ್ರಮ ವಹಿಸಿಲ್ಲ. ಸಿದ್ದರಾಮಯ್ಯ ಇರುವವರೆಗೂ ಕೇಸು ವಾಪಸ್ ಪಡೆಯುತ್ತಾರೆ ಎಂಬ ನಂಬಿಕೆ ಮುಸ್ಲಿಮ್ ಮತಾಂಧರಲ್ಲಿದೆ. ಮತಬ್ಯಾಂಕ್ ರಾಜಕಾರಣಕ್ಕಾಗಿ ಇಂತಹ ಗಲಭೆ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಪೊಲೀಸರ ಮೇಲೆ ಹಲ್ಲೆಯಾದರೂ ಕ್ರಮ ಕೈಗೊಂಡಿಲ್ಲ. ಇದನ್ನು ಹಗುರವಾಗಿ ಪರಿಗಣಿಸಿದೆ ನಿಷ್ಪಕ್ಷಪಾತ ತನಿಖೆ ಮಾಡಬೇಕು. ಪೊಲೀಸರ ಮೇಲೆ ಕೈ ಮಾಡಿದ ಮತಾಂಧರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು. ಇದರ ನೈತಿಕ ಹೊಣೆ ಹೊತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಅಭಿವೃದ್ಧಿಗಾಗಿ ಸಾಲ ಮಾಡಿದೆ. ರೈಲು, ಹೆದ್ದಾರಿ, ರಕ್ಷಣಾ ಸಾಮಗ್ರಿ ರಫ್ತು ಮೊದಲಾದವುಗಳಿಗೆ ಸಾಲದ ಹಣ ಬಳಕೆಯಾಗಿದೆ. ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ 49 ವಸ್ತುಗಳ ಮೇಲಿನ ಜಿಎಸ್ಟಿ ಕಡಿಮೆ ಮಾಡಿದ್ದಾರೆ. ಈ ಮಾದರಿಯಲ್ಲಿ ಸಿದ್ದರಾಮಯ್ಯ ಆಡಳಿತ ನಡೆಸಿಲ್ಲ. ಸಾಲ ಮಾಡುವುದರ ಜೊತೆಗೆ ಎಲ್ಲ ವಸ್ತುಗಳ ತೆರಿಗೆಗಳನ್ನು ಹೆಚ್ಚಿಸಿದ್ದಾರೆ. ಕಸಕ್ಕೆ ಹೊಸದಾಗಿ ತೆರಿಗೆ ಹೇರಿದ್ದಾರೆ. ಇದರ ಜೊತೆಗೆ ಸಿಎಂ ಕುರ್ಚಿಗಾಗಿ ಕಾದಾಟ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್ ಭವಿಷ್ಯ ನೋಡಿಕೊಳ್ಳುತ್ತಾರೋ ಅಥವಾ ಬೇರೆ ಪಕ್ಷಕ್ಕೆ ಹೋಗುತ್ತಾರೋ ಎಂದು ಗೊತ್ತಿಲ್ಲ. ಸಿದ್ದರಾಮಯ್ಯ ಮಾತ್ರ ಸಿಎಂ ಕುರ್ಚಿಯನ್ನು ಖಾಲಿ ಮಾಡುವುದಿಲ್ಲ, ಆದರೆ ಡಿ.ಕೆ.ಶಿಗೆ ಖಾಲಿ ತಟ್ಟೆಯನ್ನು ಕೊಟ್ಟಿದ್ದಾರೆ ಎಂದು ಕಾಲೆಳೆದರು.
SIR ನಿಂದ ಅಕ್ರಮ ನಿವಾಸಿಗಳು ಪತ್ತೆ
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯಿಂದ ಬಾಂಗ್ಲಾ ಅಕ್ರಮ ನಿವಾಸಿಗಳ ಪತ್ತೆಯಾಗಲಿದೆ. ನಿಜವಾದ ಮತದಾರರು ಮಾತ್ರ ಮತದಾರರ ಪಟ್ಟಿಯಲ್ಲಿ ಉಳಿದುಕೊಳ್ಳುತ್ತಾರೆ. ಪಡಿತರ ಚೀಟಿಯ ಪರಿಷ್ಕರಣೆಗೆ ಅಭಿಯಾನ ಮಾಡುವ ಅಗತ್ಯವಿಲ್ಲ. ಮರಣ ಪ್ರಮಾಣ ಪತ್ರ ಮಂಜೂರಾದ ಕೂಡಲೇ ಸ್ವಯಂಚಾಲಿತವಾಗಿ ಪಡಿತರ ಚೀಟಿ ರದ್ದಾಗಬೇಕು. ಆದರೆ ಗ್ಯಾರಂಟಿಗಳಲ್ಲಿ ಹಣ ಉಳಿಸಲು ಪಡಿತರ ಚೀಟಿ ರದ್ದು ಮಾಡಲಾಗುತ್ತಿದೆ ಎಂದು ದೂರಿದರು.
ಕೇಂದ್ರದಿಂದ ಅಕ್ಕಿ ಸಿಗುತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಆದರೆ ಕೇಂದ್ರ ಸರ್ಕಾರದಿಂದ ಜೂನ್ವರೆಗೆ ಅಕ್ಕಿ ಲಭ್ಯವಿದೆ. 4 ಲಕ್ಷ ಟನ್ ಅಕ್ಕಿ ಸಿದ್ಧವಾಗಿದ್ದರೂ, ಆರ್ಥಿಕ ಇಲಾಖೆಯಿಂದ ಕೆಜಿಗೆ 23 ರೂ. ನಂತೆ ಹಣ ಬಿಡುಗಡೆ ಮಾಡಿಲ್ಲ. ರಾಜ್ಯ ಸರ್ಕಾರ ಹಣ ನೀಡಿದ ಕೂಡಲೇ ಕೇಂದ್ರ ಅಕ್ಕಿ ನೀಡುತ್ತದೆ. ಹೀಗಿದ್ದರೂ ಹಣ ನೀಡಿಲ್ಲ ಎಂದರೆ ಸರ್ಕಾರ ಖಜಾನೆ ಖಾಲಿ ಆಗಿದೆ ಎಂದರ್ಥ. ಸರ್ಕಾರ ದಿವಾಳಿಯ ಅಂಚಿಗೆ ಬಂದಿದೆ ಎಂದು ಹರಿಹಾಯ್ದರು.
ಸಿಜೆಪಿ ಮೂಲಕ ದೇಶ ಒಡೆಯುವ ಹುನ್ನಾರ
ದೇಶ ವಿರೋಧಿಗಳು ಕಾಕ್ರೋಚ್ ಜನತಾ ಪಾರ್ಟಿಯ ಮೂಲಕ ದೇಶ ಒಡೆಯುವ ಹುನ್ನಾರ ಮಾಡಿದ್ದಾರೆ. ಇದರಲ್ಲಿ ಪಾಕಿಸ್ತಾನ, ಬಾಂಗ್ಲಾದೇಶದವರೂ ಇದ್ದಾರೆ. ಇಂತಹ ಟೂಲ್ಕಿಟ್ ಅನ್ನು ಜನರು ನಂಬಬಾರದು ಎಂದರು.














Click it and Unblock the Notifications