Ranveer Singh: ₹1,799 ಕೋಟಿ ಬಾಚಿದ ಧುರಂಧರ್ ನಟ ರಣವೀರ್ ಸಿಂಗ್ಗೆ ಇಡೀ ಚಿತ್ರರಂಗದಿಂದ ಬ್ಯಾನ್ ಭೀತಿ, ಕಾರಣ ಇಲ್ಲಿದೆ
"ಧುರಂಧರ್" ಖ್ಯಾತಿಯ ಬಾಲಿವುಡ್ ನಟ ರಣವೀರ್ ಸಿಂಗ್ ಮತ್ತು ನಿರ್ಮಾಪಕ ಫರ್ಹಾನ್ ಅಖ್ತರ್ ನಡುವಿನ 'ಡಾನ್ 3' ಸಿನಿಮಾ ವಿವಾದ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಶೂಟಿಂಗ್ ಆರಂಭಕ್ಕೆ ಕೇವಲ ಮೂರು ವಾರ ಇರುವಾಗ ರಣವೀರ್ ಚಿತ್ರದಿಂದ ಹೊರನಡೆದಿದ್ದಕ್ಕೆ ಚಿತ್ರರಂಗದ ಕಾರ್ಮಿಕ ಒಕ್ಕೂಟ (FWICE) ಅವರ ವಿರುದ್ಧ ಅಸಹಕಾರ ಚಳವಳಿ ಘೋಷಿಸಿದೆ. ಇದರ ಬೆನ್ನಲ್ಲೇ ರಣವೀರ್ ಸಿಂಗ್ಗೆ ಇಡೀ ಚಿತ್ರರಂಗದಿಂದ ನಿಷೇಧ ಎದುರಿಸುವ ಆತಂಕ ಎದುರಾಗಿದೆ.
ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ ಫೆಡರೇಶನ್ (FWICE) ತಕ್ಷಣದಿಂದ ಜಾರಿಗೆ ಬರುವಂತೆ ಅಸಹಕಾರ ನಿರ್ದೇಶನ ಹೊರಡಿಸಿದೆ. ನಿರ್ದೇಶಕ ಹಾಗೂ ನಿರ್ಮಾಪಕ ಫರ್ಹಾನ್ ಅಖ್ತರ್ ಅವರ ಬಹುನಿರೀಕ್ಷಿತ 'ಡಾನ್ 3' (Don 3) ಚಿತ್ರದಿಂದ ರಣವೀರ್ ಸಿಂಗ್ ದಿಢೀರ್ ಆಗಿ ಹೊರನಡೆದ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಫರ್ಹಾನ್ ಅಖ್ತರ್ ನೀಡಿದ ಅಧಿಕೃತ ದೂರಿನ ಅನ್ವಯ ಫೆಡರೇಶನ್ ಈ ನಿರ್ಧಾರ ಪ್ರಕಟಿಸಿದೆ. ಇತ್ತೀಚೆಗಷ್ಟೇ ರಣವೀರ್ ನಟನೆಯ 'ಧುರಂಧರ್ 2' ಸಿನಿಮಾ ಬಿಡುಗಡೆಯಾಗಿದ್ದ ಬೆನ್ನಲ್ಲೇ, ಚಿತ್ರರಂಗದ ಪ್ರಮುಖ ಒಕ್ಕೂಟದಿಂದಲೇ ಇಂತಹದೊಂದು ನಿಷೇಧ ಎದುರಾಗಿರುವುದು ನಟನಿಗೆ ದೊಡ್ಡ ಹಿನ್ನಡೆ ತಂದೊಡ್ಡಿದೆ.

3 ವಾರಗಳ ಮುನ್ನ ಚಿತ್ರದಿಂದ ಔಟ್: ಏನಿದು ವಿವಾದ?
ಮುಂಬೈನಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ FWICE ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ಈ ವಿವಾದದ ಸಂಪೂರ್ಣ ವಿವರ ನೀಡಿದ್ದಾರೆ. ಕಳೆದ ಏಪ್ರಿಲ್ 11 ರಂದೇ ಫರ್ಹಾನ್ ಅಖ್ತರ್ ಫೆಡರೇಶನ್ಗೆ ರಣವೀರ್ ಸಿಂಗ್ ವಿರುದ್ಧ ದೂರು ಸಲ್ಲಿಸಿದ್ದರು. 'ಡಾನ್ 3' ಚಿತ್ರದ ಶೂಟಿಂಗ್ ಶೆಡ್ಯೂಲ್ ಆರಂಭವಾಗಿ ಇಡೀ ಚಿತ್ರೀಕರಣದ ತಂಡ ವಿದೇಶಕ್ಕೆ ಹೊರಡಲು ಇನ್ನು ಕೇವಲ ಮೂರು ವಾರಗಳು ಬಾಕಿ ಇರುವಾಗ ರಣವೀರ್ ಸಿಂಗ್ ಚಿತ್ರದಿಂದ ಹಿಂದೆ ಸರಿದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಇದರಿಂದ ಇಡೀ ಪ್ರಾಜೆಕ್ಟ್ಗೆ ಭಾರಿ ಆರ್ಥಿಕ ನಷ್ಟ ಹಾಗೂ ತೊಂದರೆಯಾಗಿದೆ ಎಂದು ನಿರ್ಮಾಪಕರಾದ ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಒಕ್ಕೂಟಕ್ಕೆ ಸಾಕ್ಷಿಗಳನ್ನು ಒದಗಿಸಿದ್ದರು.
ನೋಟಿಸ್ಗೆ ಕ್ಯಾರೇ ಎನ್ನದ ರಣವೀರ್
ರಣವೀರ್ ಸಿಂಗ್ ಅವರಿಗೂ ತಮ್ಮ ವಾದ ಮಂಡಿಸಲು ಫೆಡರೇಶನ್ ಸಾಕಷ್ಟು ಅವಕಾಶ ನೀಡಿತ್ತು. ಒಕ್ಕೂಟದ ವತಿಯಿಂದ ಪ್ರತಿ 10ರಿಂದ 15 ದಿನಗಳಿಗೊಮ್ಮೆ ಸರಣಿ ನೋಟಿಸ್ಗಳನ್ನು ಕಳುಹಿಸಲಾಗಿದ್ದರೂ ರಣವೀರ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಆದರೆ, ಒಕ್ಕೂಟವು ಸುದ್ದಿಗೋಷ್ಠಿ ಕರೆದ ಬೆನ್ನಲ್ಲೇ ಎಚ್ಚೆತ್ತ ರಣವೀರ್ ಸಿಂಗ್ ಅವರ ತಂಡವು ಫೆಡರೇಶನ್ಗೆ ಇಮೇಲ್ ಕಳುಹಿಸಿದೆ. ಅದರಲ್ಲಿ, "ಈ ವಿವಾದದಲ್ಲಿ ಮಧ್ಯಪ್ರವೇಶಿಸಲು ಕಾರ್ಮಿಕ ಒಕ್ಕೂಟಕ್ಕೆ ಯಾವುದೇ ವ್ಯಾಪ್ತಿ ಇಲ್ಲ" ಎಂದು ಪ್ರಶ್ನಿಸುವ ಮೂಲಕ ಮುಖಾಮುಖಿ ಭೇಟಿಗೆ ನಿರಾಕರಿಸಿದೆ.
"ಸೂಪರ್ಸ್ಟಾರ್ ಆದರೂ ನಿಯಮಗಳಿಗಿಂತ ಮೇಲಲ್ಲ"
ಈ ಕುರಿತು ಕಠಿಣ ನಿಲುವು ತಳೆದಿರುವ ಒಕ್ಕೂಟದ ಅಧ್ಯಕ್ಷ ಬಿ.ಎನ್.ತಿವಾರಿ, "ಒಂದು ದೊಡ್ಡ ಸಿನಿಮಾ ದಿಢೀರ್ ಆಗಿ ನಿಂತುಹೋದಾಗ ಕೇವಲ ನಿರ್ಮಾಪಕರಿಗಷ್ಟೇ ನಷ್ಟವಾಗುವುದಿಲ್ಲ. ಅದರ ನಂಬಿಕೊಂಡಿರುವ ಸಾವಿರಾರು ದಿನಗೂಲಿ ನೌಕರರು, ತಂತ್ರಜ್ಞರು ಹಾಗೂ ಜೂನಿಯರ್ ಆರ್ಟಿಸ್ಟ್ಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಚಿತ್ರರಂಗದಲ್ಲಿ ಯಾರೇ ಸೂಪರ್ಸ್ಟಾರ್ ಆಗಿದ್ದರೂ ಅವರು ಉದ್ಯಮದ ನಿಯಮಗಳಿಗಿಂತ ಮೇಲಲ್ಲ ಎಂಬ ಬಲವಾದ ಸಂದೇಶ ರವಾನಿಸಬೇಕಿದೆ" ಎಂದು ಗುಡುಗಿದ್ದಾರೆ.
ಫೆಡರೇಶನ್ನ ಅಡಿಯಲ್ಲಿ ಬರುವ ಯಾವುದೇ ವಿಭಾಗದ ಕಾರ್ಮಿಕರು, ತಂತ್ರಜ್ಞರು ಅಥವಾ ಕಲಾವಿದರು ರಣವೀರ್ ಸಿಂಗ್ ಅವರ ಮುಂಬರುವ ಯಾವುದೇ ಪ್ರಾಜೆಕ್ಟ್ಗಳಲ್ಲಿ ಭಾಗವಹಿಸಬಾರದು ಮತ್ತು ಅವರೊಂದಿಗೆ ಸಹಕರಿಸಬಾರದು ಎಂದು ಒಕ್ಕೂಟ ಕರೆ ನೀಡಿದೆ. ಈ ವಿವಾದ ಸೌಹಾರ್ದಯುತವಾಗಿ ಬಗೆಹರಿಯುವವರೆಗೂ ಈ ನಿಷೇಧ ಮುಂದುವರಿಯಲಿದ್ದು, ಬಾಲಿವುಡ್ ಅಂಗಳದಲ್ಲಿ ಈಗ 'ಡಾನ್ 3' ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ.













Click it and Unblock the Notifications