ಸಚಿವರೇ ಜಿಲ್ಲೆಯ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು?: ಅನಿತಾ ಕುಮಾರಸ್ವಾಮಿ ಪ್ರಶ್ನೆ
ರಾಮನಗರ, ಸೆಪ್ಟೆಂಬರ್, 18: "ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಲೂಸ್ ಟಾಕ್ ಬಿಟ್ಟು, ಮೊದಲು ರಾಮನಗರ ಅಭಿವೃದ್ಧಿಗೆ ತಮ್ಮ ಕೊಡುಗೆ ಏನು ಎಂಬುದನ್ನು ತಿಳಿಸಿ" ಎಂದು ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ರಾಮನಗರ ಜಿಲ್ಲಾ ಸಚಿವ ಡಾ. ಸಿ. ಎನ್. ಅಶ್ವತ್ಥ್ ನಾರಾಯಣ್ ವಿರುದ್ಧ ಕಿಡಿಕಾರಿದರು.
ನಗರದಲ್ಲಿ ಮಳೆರಾಯ ಅಬ್ಬರಿಸಿದ್ದು, ಸಾಕಷ್ಟು ಅವಾಂತರಗಳು ಸೃಷ್ಟಿ ಆಗಿವೆ. ಅವಾಂತರಕ್ಕೆ ಬಹು ಕಾಲ ಕ್ಷೇತ್ರವನ್ನು ಪ್ರತಿನಿಧಿಸಿದವರ ವೈಪಲ್ಯ ಕಾರಣವಾಗಿದೆ. ಅವರು ಕ್ಷೇತ್ರಕ್ಕೆ ಏನು ಅಭಿವೃದ್ಧಿ ಮಾಡಿಲ್ಲ ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಮಾಡಿದ್ದ ಸಚಿವ ಅಶ್ವತ್ಥ್ ನಾರಾಯಣ್ ಅವರಿಗೆ ಶಾಸಕಿ ಅನಿತಾ ಕುಮಾರಸ್ವಾಮಿ ಟಾಂಗ್ ನೀಡಿದರು.
ರಾಮನಗರ: ಜೈಲಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡು, ಫೇಸ್ಬುಕ್ನಲ್ಲಿ ಫೋಟೋ ಶೇರ್ ಮಾಡಿದ ಕೈದಿ
ಜಿಲ್ಲಾಡಳಿತ ವತಿಯಿಂದ ಹಾರೋಹಳ್ಳಿಯ ಕೊಳ್ಳಿಗನಹಳ್ಳಿಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಎನ್ನುವ ಕಾರ್ಯಕ್ರಮವನ್ನು ಆಯೋಜಿಲಾಗಿತ್ತು. ಹಾಗೂ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕಿ ಅನಿತಾ ಕುಮಾರಸ್ವಾಮಿ ಅವರು, ಸಚಿವ ಅಶ್ವತ್ಥ್ ನಾರಾಯಣ್ ಆರೋಪಗಳಿಗೆ ತಿರುಗೇಟು ನೀಡಿದರು.

ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ಅಪಾರ; ಜಿಲ್ಲೆಯ ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಅಪಾರ ಕೊಡುಗೆಯನ್ನು ನೀಡಿದ್ದಾರೆ. ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಕುಮಾರಸ್ವಾಮಿ ಅವರ ಬದ್ಧತೆ ಏನು ಎಂಬುದು ಜಿಲ್ಲೆಯ ಜನರಿಗೆ ಗೊತ್ತಿದೆ. ಅವರ ಮೇಲೆ ಆರೋಪ ಮಾಡುವ ಸಚಿವ ಅಶ್ವತ್ಥ್ ನಾರಾಯಣ್ ಕೊಡುಗೆ ಏನಿದೆ? ಎಂದು ಮೊದಲು ಹೇಳಲಿ ಎಂದರು.
"ಕೇವಲ ವೀರಾವೇಶದ ಭಾಷಣದಿಂದ ಜಿಲ್ಲೆಯ ಅಭಿವೃದ್ಧಿ ಸಾಧ್ಯವಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಜಿಲ್ಲೆಯ ಪ್ರವಾಸದ ಸಂದರ್ಭದಲ್ಲಿ ವೇದಿಕೆಯ ಮೇಲೆ ಜಗಳ ಮಾಡಿದ್ದೇ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಸಾಧನೆ ಎಂದುಕೊಂಡಿದ್ದಾರೆ. ಸುಮ್ಮನೆ ವೀರಾವೇಶದಿಂದ ಮಾತನಾಡುವುದು ಹಾಗೂ ಲೂಸ್ ಟಾಕ್ ಬಿಟ್ಟು ಜಿಲ್ಲೆಯ ಅಭಿವೃದ್ಧಿ ಮಾಡಿ ತೋರಿಸಲಿ" ಎಂದರು.
"ದಶಪಥ ರಾಷ್ಟ್ರೀಯ ಹೆದ್ದಾರಿಯ ಅಂಡರ್ ಪಾಸ್, ಸರ್ವೀಸ್ ರಸ್ತೆ ಸೇರಿದಂತೆ ದಶಪಥ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯೇ ನಗರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಲು ಕಾರಣ, ಹೆದ್ದಾರಿ ನಿರ್ಮಾಣದಲ್ಲಿ ಹಿಂದೆಯಿದ್ದ ಕಾಲುವೆಗಳನ್ನು ಮುಚ್ವಿದ್ದಾರೆ. ರಸ್ತೆ ನೀರು ಹರಿದು ಹೋಗಲು ಸರಿಯಾದ ರೀತಿ ಚರಂಡಿ ವ್ಯವಸ್ಥೆ ಮಾಡಿಲ್ಲ. ಬಾರಿ ಮಳೆಯಿಂದ ನೀರು ನಗರಕ್ಕೆ ನುಗ್ಗಿ ಪ್ರವಾಹ ಉಂಟಾಗಿದೆ" ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಆರೋಪಿಸಿದರು.

ಸರ್ಕಾರದಿಂದ ನೆರೆ ಅನುದಾನ ನೀಡಿಲ್ಲ: ರಾಮನಗರ ಮತ್ತು ಚನ್ನಪಟ್ಟಣಕ್ಕೆ ತಲಾ 5 ಕೋಟಿ ರೂಪಾಯಿ ಅನುದಾನ ಬಿಡುಗಡೆ ಆಗಿದೆ ಎಂದು ಸುದ್ದಿ ಆಗುತ್ತಿದೆ. ಅದರೆ ಇದು ತಪ್ಪು, ಯಾರೋ ತಪ್ಪು ಮಾಹಿತಿಯನ್ನು ನೀಡಿದ್ದಾರೆ. ಸರ್ಕಾರ ಇನ್ನೂ ಯಾವುದೇ ವಿಶೇಷ ಪ್ಯಾಕೇಜ್ ನೀಡಿಲ್ಲ. ಈ ಬಗ್ಗೆ ಸದನದಲ್ಲೂ ಸಹ ಮಾತನಾಡಿ ಗಮನ ಸೆಳೆದಿದ್ದೇನೆ. ಅಲ್ಲದೇ ಸ್ವತಃ ಮುಖ್ಯಮಂತ್ರಿಗಳೇ ರಾಮನಗರ ಚನ್ನಪಟ್ಟಣ ನೆರೆ ಹಾನಿಯನ್ನು ವೀಕ್ಷಣೆ ಮಾಡಿದ್ದಾರೆ. ಈಗ ಸರ್ಕಾರದಿಂದ ಬಿಡುಗಡೆಯಾದ 5 ಕೋಟಿ ರೂಪಾಯಿ ಅನುದಾನ, ಸಮಾಜ ಕಲ್ಯಾಣ ಇಲಾಖೆಯ ಹಳೆಯ ಅನುದಾನ ಆಗಿದೆ. ಇದಕ್ಕೂ ನೆರೆ ಅನುದಾನಲ್ಲೂ ಯಾವುದೇ ಸಂಬಂಧ ಇಲ್ಲ. ಸರ್ಕಾರ ಯಾವುದೇ ತಾರತಮ್ಯ ಮಾಡದೇ ಕೂಡಲೇ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಒತ್ತಾಯಿಸಿದರು.












Click it and Unblock the Notifications