'ಸಿದ್ದರಾಮೋತ್ಸವ' ಸಿದ್ದರಾಮಯ್ಯಗೆ ರಾಜಕೀಯ ಬೀಳ್ಕೊಡುಗೆ!
ರಾಮನಗರ, ಆಗಸ್ಟ್, 02: ದಾವಣಗೆರೆಯಲ್ಲಿ ನಡೆಯುವ ಸಿದ್ದರಾಮೋತ್ಸವ ಕಾರ್ಯಕ್ರಮ ರಾಜ್ಯ ರಾಜಕೀಯದ ಗಮನ ಸೆಳೆದಿದೆ. ಆಗಸ್ಟ್ 3ರಂದು ನಡೆಯುವ ಕಾರ್ಯಕ್ರಮದ ಬಗ್ಗೆ ಬಿಜೆಪಿ ನಾಯಕರು ಸಹ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ. ಎನ್. ಅಶ್ವಥ್ ನಾರಾಯಣ ಈ ಕಾರ್ಯಕ್ರಮದ ಕುರಿತು ವ್ಯಂಗ್ಯವಾಡಿದರು. "ಆ ದಿನದಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಧನೆ ಬಿಂಬಿಸುವ ಅಥವಾ ವೈಭವೀಕರಣ ಮಾಡುವ ಸಮಾವೇಶ ಅಲ್ಲ. ಸಿದ್ದರಾಮಯ್ಯ ಅವರಿಗೆ ರಾಜಕೀಯ ಬೀಳ್ಕೊಡುಗೆ ಸಮಾರಂಭ ಅಷ್ಟೇ" ಎಂದು ಟೀಕಿಸಿದರು.
ಕೈಗೆಟುಕುವ ದರದಲ್ಲಿ ದರದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ದೊರೆಯಬೇಕು: ಸಚಿವ ಡಾ. ಅಶ್ವತ್ಥ ನಾರಾಯಣ
ಪುರಾಣ ಪ್ರಸಿದ್ಧ ಮಾಗಡಿ ರಂಗನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, "ಸಿದ್ದರಾಮೋತ್ಸವ ಸಿದ್ದರಾಮಯ್ಯರಿಗೆ 75 ವರ್ಷ ಆಗಿದೆ ಅದಕ್ಕೆ ಮನೆಗೆ ಹೋಗಪ್ಪಾ ಅಂತಾ ಬೀಳ್ಕೋಡುಗೆ ಸಮಾರಂಭ ಮಾಡಿ ಕಳುಹಿಸುತ್ತಿದ್ದಾರೆ. ಸಿದ್ದರಾಮಯ್ಯ ಗುಡ್ ಬಾಯ್ ಅಂತ ಹೇಳೋದಿಕ್ಕೆ ಕಾರ್ಯಕ್ರಮ ಮಾಡುತ್ತಿದ್ದಾರೆ" ಎಂದರು.
"ತಮಗೆ 65 ವರ್ಷ ಆದಾಗಲೇ ನಾನು ಇದೊಂದು ಭಾರೀ ಮುಖ್ಯಮಂತ್ರಿ ಆಗುತ್ತೇನೆ. ನನ್ನ ಅವಧಿಯ ನಂತರ ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳುತ್ತೇನೆ ಅಂದಿದ್ದರು" ಎಂದು ಸಚಿವರು ವ್ಯಂಗ್ಯವಾಡಿದರು.
ಸಿದ್ದರಾಮೋತ್ಸವದ ಬಗ್ಗೆ ಸಚಿವರ ಪ್ರತಿಕ್ರಿಯೆ
"ಅಧಿಕಾರದ ರುಚಿ ನೋಡಿರೋ ಅಂಕಲ್ಗೆ ರಾಜಕೀಯದಲ್ಲಿ ಮುಂದುವರೆಯುವ ಆಸಕ್ತಿಇದೆ. ಆದರೆ ಜನ ಈ ಕಾಲಕ್ಕೆ ಸಿದ್ದರಾಮಯ್ಯ ಅವರನ್ನು ತಿರಸ್ಕರಿಸುತ್ತಾರೆ. ಹಾಗಾಗಿ ಸಿದ್ದರಾಮಯ್ಯ ತಮ್ಮ ದುರಾಸೆ ಬಿಟ್ಟು ಗೌರವಾನ್ವಿತವಾಗಿ ಯುವಕರಿಗೆ ಅವಕಾಶ ಮಾಡಿಕೊಡಲಿ. 75 ವರ್ಷಕ್ಕೆ ಕಾಲಿಟ್ಟಿರುವ ಸಿದ್ದರಾಮಯ್ಯ ಅವರಿಗೆ ದುರಾಸೆ ಹೋಗಿ ತಿಳುವಳಿಕೆ ಬರಲಿ" ಎಂದು ಸಚಿವ ಡಾ. ಸಿ. ಎನ್. ಅಶ್ವಥ್ ನಾರಾಯಣ ಸಿದ್ದರಾಮಯ್ಯಗೆ ಸಲಹೆ ನೀಡಿದರು.
ಎಚ್. ಡಿ. ಕುಮಾರಸ್ವಾಮಿ ಬಗ್ಗೆ ಸಚಿವರ ನಿಲುವು
ಮಂಗಳೂರು ಹತ್ಯೆ ಪ್ರಕರಣದ ಪರಿಹಾರ ನೀಡುವಲ್ಲಿ ತಾರತಮ್ಯ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಆರೋಪಿಸಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಅಶ್ವಥ್ ನಾರಾಯಣ, "ಮನೆಗೆ ಬೆಂಕಿ ಬಿದ್ದಾಗ ಅಡುಗೆ ಮಾಡಿಕೊಳ್ಳುವ ಪ್ರಯತ್ನ ಬಿಡಲಿ. ಜನರ ಭಾವನೆ ಜೊತೆ ಆಟವಾಡುವ ಕೆಲಸ ಬೇಡ" ಎಂದು ಕಿಡಿಕಾರಿದರು.
"ಮಂಗಳೂರು ಭಾಗದಲ್ಲಿ ನಡೆದಿರುವ ಅಮಾಯಕ ಯುವಕರ ಹತ್ಯೆ ಪ್ರಕರಣದ ಬಗ್ಗೆ ಸಿಎಂ ಸೂಕ್ತವಾದ ಕ್ರಮ ವಹಿಸುತ್ತಿದ್ದಾರೆ. ತನಿಖೆ ಕೂಡ ಪಾರದರ್ಶಕವಾಗಿ ನಡೆಯುತ್ತಿದೆ. ನಮ್ಮ ಸಿಎಂ ತಿಳುವಳಿಕೆ ಇರುವವರು. ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿರುವ ಎಚ್. ಡಿ. ಕುಮಾರಸ್ವಾಮಿ ಅವರು ರಾಜಕೀಯ ಪ್ರೇರಿತವಾಗಿ ಹೇಳಿಕೆ ನೀಡಬಾರದು. ಹೇಳಿಕೆ ಕೊಡಬೇಕಾದರೆ ಆಧಾರ, ವಿಚಾರ ಇರಬೇಕು. ಸುಮ್ಮನೆ ಹೇಳಿಕೆ ನೀಡಿ ತಪ್ಪಿಸಿಕೊಳ್ಳಬಾರದು" ಎಂದರು.
ದೇವಾಲಯದ ಅಭಿವೃದ್ಧಿಗೆ ಸಚಿವರಿಂದ ಭರವಸೆ
ದೇವಾಲಯದ ಬಗ್ಗೆ ಮಾತನಾಡಿದ ಸಚಿವರು, "ಇಲ್ಲಿನ ಪುರಾಣ ಪ್ರಸಿದ್ಧ ರಂಗನಾಥ ಸ್ವಾಮಿ ದೇವಸ್ಥಾನವನ್ನು 5 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸಂಪೂರ್ಣವಾಗಿ ಜೀರ್ಣೋದ್ಧಾರ ಮಾಡಲಾಗುವುದು. ರಾಜ್ಯದಲ್ಲಿ ಪ್ರವಾಸೋದ್ಯಮ ಮತ್ತು ಆತಿಥ್ಯ ಉದ್ಯಮ ಅಭಿವೃದ್ಧಿಗೆ ಸರ್ಕಾರವು ಹಲವು ಯೋಜನೆಗಳನ್ನು ರೂಪಿಸಿದೆ. ಇದರಂತೆ ಪ್ರವಾಸೋದ್ಯಮ ವಿಷನ್ ಗ್ರೂಪ್ ನೀಡಿರುವ ಸಲಹೆ ಪ್ರಕಾರ ರಂಗನಾಥ ದೇಗುಲವನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗುವುದು" ಎಂದು ತಿಳಿಸಿದರು.
ಸರ್ಕಾರದ ಬಗ್ಗೆ ಸಚಿವರು ಹೇಳಿದ್ದೇನು?
"ಬಿಜೆಪಿ ಸರ್ಕಾರವು ರಾಜ್ಯದ ಶ್ರದ್ಧಾ ಕೇಂದ್ರಗಳ ಸಂರಕ್ಷಣೆಗೆ ಮತ್ತು ಪುನಶ್ಚೇತನಕ್ಕೆ ಬದ್ಧವಾಗಿದೆ. ಇದು ನಮ್ಮ ಪಕ್ಷದ ಮೂಲ ಆಶಯಗಳಲ್ಲಿ ಒಂದಾಗಿದೆ. ರಂಗನಾಥ ಸ್ವಾಮಿ ದೇವಸ್ಥಾನದಲ್ಲಿರುವ ಉದ್ಭವಮೂರ್ತಿ ಮತ್ತು ರಂಗನಾಥನ ಪ್ರತಿಮೆಗಳು ಭಕ್ತರ ಪಾಲಿಗೆ ನೆಮ್ಮದಿಯ ತಾಣಗಳಾಗಿವೆ. ಮಾಗಡಿಯ ಆಕರ್ಷಣೆಯನ್ನು ಹೆಚ್ಚಿಸುವ ರೀತಿಯಲ್ಲಿ ದೇವಸ್ಥಾನದ ಪುಣ್ಯತನ ನಡೆಯಲಿದೆ" ಎಂದು ಸಚಿವ ಅಶ್ವಥ್ ನಾರಾಯಣ್ ಹೇಳಿದರು.
Recommended Video