ಅಣ್ಣ-ತಮ್ಮಂದಿರನ್ನೇ ಬೇರೆ ಮಾಡುತ್ತದೆ ಬಿಜೆಪಿ: ಎಸ್ಆರ್ ಪಾಟೀಲ್
ದೇವದುರ್ಗ (ರಾಯಚೂರು), ಜನವರಿ 12 : ಬಿಜೆಪಿಯು ಅಣ್ಣ-ತಮ್ಮಂದಿರನ್ನೇ ಬೇರೆ ಮಾಡುತ್ತದೆ. ಆದರೆ ಕಾಂಗ್ರೆಸ್ ಪಕ್ಷ ಎಲ್ಲರನ್ನು ಜತೆಜತೆಗೆ ಕರೆದುಕೊಂಡು ಹೋಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಶುಕ್ರವಾರ ಕಾಂಗ್ರೆಸ್ ಸಮಾವೇಶದಲ್ಲಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.
'ಯಡಿಯೂರಪ್ಪ ಮಾತ್ರ ಏಕೆ, ಅಮಿತ್ ಶಾ ಬೇಕಾದರೂ ಸ್ಪರ್ಧಿಸಲಿ'
ಕಾಂಗ್ರೆಸ್ ಪಕ್ಷವು ದೇಶದಲ್ಲಿ ಕಟ್ಟುವ ಕೆಲಸ ಮಾಡುತ್ತಿದೆ. ಇನ್ನು ರಾಜ್ಯದ ವಿಚಾರಕ್ಕೆ ಹೇಳುವುದಾದರೆ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ. ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ನಾವು ಕೊಟ್ಟ ಮಾತಿನಂತೆ ಭರವಸೆಗಳನ್ನು ಈಡೇರಿಸಿದ್ದೇವೆ. ಆದರೆ ಹಸಿರು ಶಾಲು ಹೊದ್ದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಯಡಿಯೂರಪ್ಪ ಏನು ಮಾಡಿದರು ಎಂದು ಪ್ರಶ್ನಿಸಿದರು
ಇನ್ನು ಕೇಂದ್ರದಲ್ಲಿ ಬಿಜೆಪಿಯು ಅಧಿಕಾರಕ್ಕೆ ಬಂದರೆ ವಿದೇಶದಲ್ಲಿನ ಕಪ್ಪು ಹಣವನ್ನು ವಾಪಸ್ ತರ್ತೀವಿ, ದೇಶದ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಹದಿನೈದು ಲಕ್ಷ ರುಪಾಯಿ ಹಾಕ್ತೀವಿ ಅಂದರಲ್ಲ, ನಿಮ್ಮ ಅಕೌಂಟ್ ಗೆ ಹಣ ಜಮೆ ಆಯಿತಾ? ಜನರಿಗೆ ಅನುಕೂಲ ಆಡುವ ಬದಲು ನೋಟು ನಿಷೇಧ ಮಾಡಿ ಇನ್ನಷ್ಟು ಸಂಕಷ್ಟ ತಂದೊಡ್ಡಿದರು. ಆಸ್ಪತ್ರೆ ಖರ್ಚು ನಿಭಾಯಿಸುವುದಕ್ಕೂ ಜನ ಕಷ್ಟಪಟ್ಟರು ಎಂದು ಎಸ್.ಆರ್.ಪಾಟೀಲ್ ವಾಗ್ದಾಳಿ ನಡೆಸಿದರು.