ಚುನಾವಣೆ ಮುಗಿದರೂ ಅಕ್ರಮಗಳ ಆರೋಪ ಇನ್ನೂ ನಿಂತಿಲ್ಲ
ರಾಯಚೂರು, ಜೂನ್.06: ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ರಚನೆಯಾಗಿದ್ದು, ಮಂತ್ರಿಮಂಡಲ ರಚನೆಯ ಚರ್ಚೆಗಳು ನಡೆಯುತ್ತಿದೆ. ಆದ್ರೂ ಚುನಾವಣಾ ಅಕ್ರಮಗಳ ಬಗ್ಗೆ ಆರೋಪಗಳು ಇನ್ನೂ ನಿಂತಿಲ್ಲ.
ಈ ಸಾಲಿಗೆ ಮಸ್ಕಿ ವಿಧಾನಸಭಾ ಕ್ಷೇತ್ರ ಸೇರಿದೆ. ಬಿಜೆಪಿ ಪರಾಜಿತ ಅಭ್ಯರ್ಥಿಯೊಬ್ಬರು ಕಾಂಗ್ರೆಸ್ ಶಾಸಕರ ವಿರುದ್ಧ ಅಕ್ರಮ ಮತದಾನ ಮಾಡಿಸಿದ ಆರೋಪ ಮಾಡಿದ್ದಾರೆ. ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಮೇಲೂ ಅಕ್ರಮದ ಕುರಿತು ಆರೋಪಗಳು ಕೇಳಿ ಬರುತ್ತಿವೆ.
ಸ್ಫೋಟವಾಯಿತು ಶರವಣ ಅಸಮಾಧಾನ, ಜೆಡಿಎಸ್ ನಲ್ಲಿ ಭಾರೀ ಕಂಪನ
ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲೂ ಮತದಾನದ ವೇಳೆ ಅಕ್ರಮ ನಡೆದಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆದ್ದಿರುವ ಪ್ರತಾಪಗೌಡ ಪಾಟೀಲ್ ವಿರುದ್ಧ ಬಿಜೆಪಿ ಪರಾಜಿತ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಗಂಭೀರ ಆರೋಪ ಮಾಡಿದ್ದಾರೆ.
ಮೇ 12ರಂದು ನಡೆದ ಮತದಾನದ ವೇಳೆ ಮೃತರು, ವಿದೇಶದಲ್ಲಿದ್ದವರು ಹಾಗೂ ಎರಡೆರಡು ಕಡೆ ಮತದಾನ ನಡೆದಿವೆ. ಇದರ ಹಿಂದೆ ಕಾಂಗ್ರೆಸ್ನಿಂದ ಗೆದ್ದಿರುವ ಪ್ರತಾಪಗೌಡ ಪಾಟೀಲ್ ಕೈವಾಡವಿದೆ. ಹೀಗಾಗಿ ಮರು ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ಚುನಾವಣಾ
ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಕಾಂಗ್ರೆಸ್ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ಗೆ ಬಿಜೆಪಿ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಪ್ರಬಲ ಪೈಪೋಟಿ ನೀಡಿದ್ದರು. ಇದು ಮತ ಎಣಿಕೆಯಲ್ಲೂ ಮುಂದುವರೆದಿತ್ತು.
ಪ್ರತಿ ಸುತ್ತಿನ ಮತ ಎಣಿಕೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿ ಪ್ರತಾಪಗೌಡಗೆ ಬಿಜೆಪಿ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಸಮಬಲದ ಹೋರಾಟ ಮಾಡಿದ್ರು. ಅಂತಿಮ ಫಲಿತಾಂಶ ಪ್ರಕಟವಾದಾಗ ಕಾಂಗ್ರೆಸ್ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ 212 ಮತಗಳಿಂದ ಆಯ್ಕೆಯಾದ್ರು.
ಆಗ ಬಿಜೆಪಿ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಮತ ಎಣಿಕೆ ಸರಿಯಾಗಿ ನಡೆದಿಲ್ಲ ಎಂದು ಮರು ಮತ ಎಣಿಕೆಗೆ ಮನವಿ ಮಾಡಿದರು. ಆಗ ಎರಡನೇ ಬಾರಿಗೆ ಅಂಚೆ ಮತಗಳ ಎಣಿಕೆ ಮಾಡಿದಾಗ ಕಾಂಗ್ರೆಸ್ ಅಭ್ಯರ್ಥಿ 213 ಮತಗಳಿಂದ ಗೆಲುವು ಸಾಧಿಸಿದರು. ಬಳಿಕ ದಾಖಲೆಗಳನ್ನ ಪರಿಶೀಲಿಸಿರುವ ಬಿಜೆಪಿ
ಅಭ್ಯರ್ಥಿ ಬಸನಗೌಡ ತುರ್ವಿಹಾಳ ಅಕ್ರಮದ ಕುರಿತು ಜಿಲ್ಲಾಧಿಕಾರಿಯೂ ದೂರು ನೀಡಿದ್ದಾರೆ.
ಇನ್ನು ವಿಜೇತ ಕಾಂಗ್ರೆಸ್ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಪುತ್ರಿ ಪ್ರೀತಿ ಪಾಟೀಲ್ ಚುನಾವಣೆ ವೇಳೆ ವಿದೇಶದಲ್ಲಿದ್ದರು ಎನ್ನಲಾಗುತ್ತಿದೆ. ಆದ್ರೆ ಪ್ರೀತಿ ಪಾಟೀಲ್ ಹೆಸರಿನಲ್ಲಿ ಮತದಾನ ದಾಖಲಾಗಿದೆ. ಹೀಗಾಗಿ ಅಕ್ರಮದ ವಾಸನೆಗೆ ಪುಷ್ಟಿ ಸಿಕ್ಕಂತಾಗಿದೆ.
ಈಗಾಗಲೇ ಪರಾಜಿತ ಬಿಜೆಪಿ ಅಭ್ಯರ್ಥಿ ಬಸನಗೌಡ ತುರ್ವಿಹಾಳ ದೂರು ನೀಡಿದ್ದಾರೆ. ಚುನಾವಣಾ ಆಯೋಗದ ಮುಂದಿನ ನಡೆ ಏನೂ ಎಂಬುದು ಕಾದು ನೋಡಬೇಕಿದೆ.