ಮಗನ ಹಾದಿಯಲ್ಲೇ ಸಾಗಿ, ಬಿಜೆಪಿ ಸೇರಿದ ಕಾಂಗ್ರೆಸ್ ಮುಖಂಡ ಪಾಟೀಲ್
ಮುಂಬೈ, ಮಾರ್ಚ್ 19: ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಅವರ ತಮ್ಮ ಪುತ್ರ ಸುಜಯ್ ವಿಖೆ ಪಾಟೀಲ್ ಅವರು ಸಾಗಿದ ಹಾದಿಯನ್ನೇ ಹಿಡಿದಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಸುಜಯ್ ಅವರಂತೆ ರಾಧಾಕೃಷ್ಣ ಅವರು ಕೇಸರಿ ಪದೆ ಪಾಲಾಗಿದ್ದಾರೆ. ಈ ಮೂಲಕ ಮಹಾರಾಷ್ಟ್ರ ಕಾಂಗ್ರೆಸ್ಸಿಗೆ ಒಂದು ವಾರದಲ್ಲಿ ಡಬ್ಬಲ್ ಆಘಾತವಾಗಿದೆ.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ಎನ್ ಸಿಪಿ ಮೈತ್ರಿಯಿದ್ದು, ಸುಜಯ್ ಸ್ಪರ್ಧೆಗೆ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಪಕ್ಷವು ನಿರಾಕರಿಸಿತ್ತು. ಈ ಬಗ್ಗೆ ರಾಧಾಕೃಷ್ಣ ಅವರು ಪ್ರತಿಕ್ರಿಯಿಸಿರಲಿಲ್ಲ. ಮಹಾರಾಷ್ಟ್ರದ ಅಹ್ಮದ್ ನಗರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಕೇಳಿದ್ದ ಸುಜಯ್ ಗೆ ಟಿಕೆಟ್ ನಿರಾಕರಿಸಲಾಗಿತ್ತು.
ಕಾಂಗ್ರೆಸ್ ವಿಪಕ್ಷ ನಾಯಕರ ಮಗ ಸುಜಯ್ ಅವರು ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ 7 ಬಾರಿ ಶಾಸಕರಾಗಿರುವ ಕಾಳಿದಾಸ್ ಕೊಲಂಬ್ಕರ್ ಅವರು ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿ ದೇವೇಂದ್ರ ಫಡ್ನವೀಸ್ ಗೆ ನನ್ನ ಬೆಂಬಲ ಎಂದಿದ್ದಾರೆ.

ಮಹಾರಾಷ್ಟ್ರ ಸಚಿವ. ಬಿಜೆಪಿ ಮುಖಂಡ ಗಿರೀಶ್ ಮಹಾಜನ್ ಅವರು, ಪಕ್ಷಾಂತರ ಪರ್ವದ ಬಗ್ಗೆ ಪ್ರತಿಕ್ರಿಯಿಸಿ, ಇದು ಇನ್ನು ಆರಂಭ, ಇನ್ನು ಅನೇಕ ಮುಖಂಡರು ಬಿಜೆಪಿಯತ್ತ ಬರಲಿದ್ದಾರೆ ಎಂದಿದ್ದಾರೆ.
ಒಟ್ಟಾರೆ, ಐದು ದಶಕಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿದ್ದ ವಿಖೆ ಪಾಟೀಲ್ ಕುಟುಂಬದವರು ಎನ್ ಸಿಪಿ ಮುಖಂಡ ಶರದ್ ಪವಾರ್ ಅವರ ಸ್ವಜನಪಕ್ಷಪಾತವನ್ನು ಖಂಡಿಸಿ, ಕಾಂಗ್ರೆಸ್ ತೊರೆದಿದ್ದಾರೆ. ಕಾಂಗ್ರೆಸ್ಸಿನ ಪ್ರಾಬಲ್ಯವಿರುವ ಅಹ್ಮದ್ ನಗರದಲ್ಲಿ ಈ ಬಾರಿ ನ್ಯೂರೋ ಸರ್ಜನ್ ಡಾ. ಸುಜಯ್ ವಿಖೆ ಪಾಟೀಲ್ ಅವರು ಬಿಜೆಪಿಯಿಂದ ಸ್ಪರ್ಧಿಸಲು ಸಜ್ಜಾಗುತ್ತಿದ್ದಾರೆ.
ಗುಜರಾತಿನಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ, ಚುನಾವಣಾ ಪ್ರಚಾರ ಸಮಿತಿ ಸಭೆ ನಡೆಯುವ ಸಂದರ್ಭದಲ್ಲೇ ಅತ್ತ ಕೋಲ್ಕತ್ತಾದಲ್ಲಿ ಟಿಎಂಸಿ ಸಂಸದ ಅನುಪಮ್ ಹಜ್ರಾ, ಸಿಪಿಐ ಶಾಸಕ ಖಗೇನ್ ಮುರ್ಮು ಅವರು ಬಿಜೆಪಿ ಸೇರಿದ್ದಾರೆ. ತೆಲಂಗಾಣದಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರು ಪಕ್ಷ ತೊರೆದಿದ್ದಾರೆ.












Click it and Unblock the Notifications