ಪ್ರೇಮಿಯೊಂದಿಗೆ ಪತಿಯನ್ನು ಕೊಂದ ಮಹಿಳೆಗೆ ಕೆಮಿಕಲ್ ತಂದಿತು ಆಪತ್ತು!
ಪಾಟ್ನಾ, ಸೆಪ್ಟೆಂಬರ್ 21: ಬಿಹಾರದಲ್ಲಿ ಮಹಿಳೆಯೊಬ್ಬಳು ತನ್ನ ಪ್ರೇಮಿಯೊಂದಿಗೆ ಸೇರಿ ತನ್ನ ಪತಿಯನ್ನು ಹತ್ಯೆಗೈದು ತುಂಡು ತುಂಡಾಗಿ ಕತ್ತರಿಸಿ ಕೆಮಿಕಲ್ ಬಳಸಿ ಪತಿಯ ದೇಹವನ್ನು ನಾಶ ಮಾಡಲು ಯತ್ನ ಮಾಡಿದ ಘಟನೆ ನಡೆದಿದ್ದು ಈ ಕೆಮಿಕಲ್ ಈ ಮಹಿಳೆಯನ್ನು ಸಿಕ್ಕಿ ಬೀಳುವಂತೆ ಮಾಡಿದೆ.
ಹೌದು ಮಹಿಳೆಯು ತನ್ನ ಪತಿಯ ಮೃತದೇಹವನ್ನು ಕರಗಿಸುವ ಸಲುವಾಗಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಅದರ ಮೇಲೆ ಕೆಮಿಕಲ್ ಅನ್ನು ಸುರಿದಿದ್ದು, ಈ ಕೆಮಿಕಲ್ ಸ್ಪೋಟವಾದ ಕಾರಣ ಮಹಿಳೆಯು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ.
ದಾವಣಗೆರೆ; ಕಾಂಗ್ರೆಸ್ ಮುಖಂಡನ ಕೊಂದವರ ಸುಳಿವು ಸಿಕ್ಕಿದ್ದು ಹೇಗೆ?
ಈ ಘಟನೆಯು ಬಿಹಾರದ ಮುಜಾಫುರ್ನ ಸಿಖಂದರ್ಪುರ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 30 ವರ್ಷ ಪ್ರಾಯದ ರಾಕೇಶ್ ಎಂಬಾತನನ್ನು ಪತ್ನಿ ರಾಧಾ ತನ್ನ ಪ್ರೇಮಿ ಸುಭಾಷ್, ರಾಧಾಳ ಸಹೋದರಿ ಕೃಷ್ಣ ಹಾಗೂ ಆಕೆಯ ಪತಿಯ ಜೊತೆ ಸೇರಿ ಹತ್ಯೆ ಮಾಡಿದ್ದಾಳೆ. ಹತ್ಯೆ ಮಾಡಿದ ಬಳಿಕ ಮೃತ ದೇಹವನ್ನು ನಾಶ ಮಾಡುವ ನಿಟ್ಟಿನಲ್ಲಿ ಈ ನಾಲ್ವರು ಖರ್ತನಾಕ್ ಪ್ಲ್ಯಾನ್ ಮಾಡಿದ್ದು, ಆ ಪ್ಲ್ಯಾನ್ ಈ ಆರೋಪಿಗಳಿಗೆ ಮುಳುವಾಗಿದೆ.
ಮೃತ ದೇಹವನ್ನು ನಾಶ ಮಾಡಲೆಂದು ಈ ಆರೋಪಿಗಳು ಪೈಕಿ ರಾಧಾಳ ಪ್ರೇಮಿ ಮೃತ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ. ಬಳಿಕ ತಾವು ಬಾಡಿಗೆಗೆ ಇರುವ ಮನೆಯೊಳಗೆ ಶವದ ಮೇಲೆ ಕೆಮಿಕಲ್ ಅನ್ನು ಸುರಿದು ಶವವನ್ನು ಕರಗಿಸುವ ಪ್ರಯತ್ನವನ್ನು ಈ ಆರೋಪಿ ರಾಧಾ ಹಾಗೂ ಪ್ರಿಯಕರ ಸುಭಾಷ್ ಮಾಡಿದ್ದಾರೆ. ಆದರೆ ಈ ಕೆಮಿಕಲ್ ಬಳಸುವ ಪ್ಲ್ಯಾನ್ ಈ ಆರೋಪಿಗಳನ್ನು ಜೈಲಿಗಟ್ಟಿದೆ. ಕೆಮಿಕಲ್ ಹಾಕಿದ ಕಾರಣ ಸ್ಪೋಟ ಉಂಟಾಗಿದ್ದು, ಈ ಕಾರಣದಿಂದಾಗಿ ಸ್ಥಳೀಯ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಕೂಡಲೇ ಧಾವಿಸಿದ್ದು, ಅಲ್ಲಿ ಮೃತ ದೇಹವು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಪೊಲೀಸರು ಈ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದು, ವಿಧಿವಿಜ್ಞಾನ ತಂಡವು ಈ ಬಗ್ಗೆ ತನಿಖೆಯನ್ನು ಆರಂಭ ಮಾಡಿದೆ. ತನಿಖೆಯನ್ನು ನಡೆಸುತ್ತಿದ್ದ ಸಂದರ್ಭದಲ್ಲಿ ಈ ಮೃತದೇಹವು ಮುಜಾಫುರ್ನ ಸಿಖಂದರ್ಪುರ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ರಾಕೇಶ್ನದ್ದು ಎಂದು ಪೊಲೀಸರಿಗೆ ತಿಳಿದು ಬಂದಿದೆ.
ಇನ್ನು ಬಿಹಾರದಲ್ಲಿ ಮದ್ಯಪಾನವನ್ನು ನಿಷೇಧ ಮಾಡಿದ ಬಳಿಕವೂ ಮದ್ಯವನ್ನು ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಮೃತ ರಾಕೇಶ್ ಪೊಲೀಸರಿಗೆ ಬೇಕಾದ ವ್ಯಕ್ತಿಯಾಗಿದ್ದ. ಈ ಕಾರಣದಿಂದಾಗಿ ರಾಕೇಶ್ ಈ ಬಾಡಿಗೆ ಮನೆಯಲ್ಲಿ ಯಾರಿಗೂ ತಿಳಿಯದಂತೆ ಹೆಚ್ಚಾಗಿ ಇರುತ್ತಿದ್ದ ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ರಾಕೇಶ್ನ ವ್ಯಾಪಾರದಲ್ಲಿ ಜೊತೆಯಾಗಿದ್ದ ಸುಭಾಷ್, ರಾಕೇಶ್ ಪತ್ನಿಯ ಸಂಪರ್ಕಕ್ಕೆ ಬಂದಿದ್ದು, ಇಬ್ಬರ ನಡುವೆ ಪ್ರೀತಿ ಮೊಳಕೆ ಒಡೆದಿದೆ.
ಈ ಹಿನ್ನೆಲೆ ರಾಧಾ, ತನ್ನ ಪ್ರಿಯಕರ ಸುಭಾಷ್ ಜೊತೆ ಸೇರಿ ರಾಕೇಶ್ ಅನ್ನು ತನ್ನ ದಾರಿಯಲ್ಲಿ ಇಲ್ಲದಂತೆ ಮಾಡಲು ಸಂಚು ರೂಪಿಸಿದ್ದಾಳೆ. ಇದಕ್ಕೆ ಆಕೆಯ ಸಹೋದರಿ ಹಾಗೂ ಆಕೆಯ ಪತಿಯು ಜೊತೆಯಾಗಿದ್ದಾರೆ. ಈ ಬಗ್ಗೆ ರಾಕೇಶ್ನ ಸಹೋದರ ದಿನೇಶ್ ಸಾಹ್ನಿ ದೂರು ದಾಖಲು ಮಾಡಿದ್ದು, ದೂರಿನಲ್ಲಿ ರಾಧಾ, ಪ್ರಿಯಕರ ಸುಭಾಷ್, ಸಹೋದರಿ ಕೃಷ್ಣ ಹಾಗೂ ಕೃಷ್ಣರ ಗಂಡ ಕೊಲೆಗಾರರು ಎಂದು ಆರೋಪ ಮಾಡಿದ್ದಾರೆ.
"ರಾಕೇಶ್ನ ಪತ್ನಿ ರಾಧಾ ಹಾಗೂ ಸುಭಾಷ್ನ ನಡುವೆ ಸಂಬಂಧವಿದೆ," ಎಂದು ಸಹೋದರ ದಿನೇಶ್ ಸಾಹ್ನಿ ದೂರಿದ್ದಾರೆ. ಹಾಗೆಯೇ "ಅವರಿಬ್ಬರ ನಡುವೆ ಸಂಬಂಧ ಇರುವ ವಿಚಾರದಲ್ಲಿ ಸುತ್ತಮುತ್ತಲಿನ ಹಲವಾರು ಮಂದಿಗೆ ತಿಳಿದಿದೆ," ಎಂದು ಕೂಡಾ ದೂರಿನಲ್ಲಿ ತಿಳಿಸಿದ್ದಾರೆ. "ಮನೆಯಲ್ಲಿ ಸ್ಪೋಟವಾಗಿದೆ ಎಂದು ಮಾಹಿತಿ ದೊರೆತ ಹಿನ್ನೆಲೆಯಲ್ಲಿ ನಾನು ಸ್ಥಳಕ್ಕೆ ಹೋಗಿದ್ದು ಆ ಸಂದರ್ಭದಲ್ಲಿ ರಾಕೇಶ್ನ ಮೃತ ದೇಹವು ತುಂಡು ತುಂಡಾಗಿ ಪತ್ತೆಯಾಗಿದೆ," ಎಂದು ಕೂಡಾ ಸಹೋದರ ದಿನೇಶ್ ಸಾಹ್ನಿ ಹೇಳಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿದ ಸಿಖಂದರ್ಪುರ ಪೊಲೀಸ್ ಠಾಣೆಯ ಹರೇಂದ್ರ ತಿವಾರಿ, "ಪತ್ನಿ, ಆಕೆಯ ಪ್ರಿಯಕರ ಸುಭಾಷ್, ಆಕೆಯ ಸಹೋದರೆ ಹಾಗೂ ಸಹೋದರಿಯ ಪತಿಯ ಮೇಲೆ ಕೊಲೆ ಪ್ರಕರಣ ದಾಖಲು ಮಾಡಲಾಗಿದೆ," ಎಂದು ತಿಳಿಸಿದ್ದಾರೆ.
(ಒನ್ ಇಂಡಿಯಾ ಸುದ್ದಿ)