ಬಿಹಾರ ಸಿಎಂ ಕುರ್ಚಿ ಮೇಲೆ ಯಾರ ಹೆಸರು: ಏನ್ ಆಂತಾರೆ ನಾಯಕರು?
ಪಾಟ್ನಾ, ನವೆಂಬರ್.11: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್ ಡಿಎ) ದಿಗ್ವಿಜಯ ಸಾಧಿಸಿದೆ. ಆದರೆ ನಿತೀಶ್ ಕುಮಾರ್ ಮುಂದಿನ ಮುಖ್ಯಮಂತ್ರಿ ಆಗುತ್ತಾರೆಯೇ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತಿದೆ.
ರಾಜ್ಯ ರಾಜಕಾರಣದಲ್ಲಿ ಯಾರು ಮುಂದಿನ ಸಿಎಂ ಎಂಬ ಚರ್ಚೆ ನಡೆಯುತ್ತಿದೆ. ಭಾರತೀಯ ಜನತಾ ಪಕ್ಷ ಹಾಗೂ ಜೆಡಿಯು ಪಕ್ಷದ ನಾಯಕರು ಅದಕ್ಕೆ ಸ್ಪಷ್ಟ ಉತ್ತರವನ್ನು ಕೊಟ್ಟಿದ್ದಾರೆ. ನಿತೀಶ್ ಕುಮಾರ್ ಅವರೇ ಮುಂದಿನ ಸಿಎಂ ಎಂದು ಸ್ಪಷ್ಟನೆ ನೀಡುತ್ತಿದ್ದಾರೆ. ದೀಪಾವಳಿ ಹಬ್ಬದ ನಂತರದಲ್ಲಿ ರಾಜ್ಯದ 37ನೇ ಮುಖ್ಯಮಂತ್ರಿಯಾಗಿ 7ನೇ ಬಾರಿಗೆ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಕೆ.ಸಿ. ತ್ಯಾಗಿ ಹೇಳಿದ್ದಾರೆ.
ಬಿಹಾರದಲ್ಲಿ 7ನೇ ಬಾರಿ ಸಿಎಂ ಆಗಿರುವ ನಿತೀಶ್ ಕುಮಾರ್ ರಾಜಕೀಯ ಇತಿಹಾಸ
243 ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಎನ್ ಡಿಎ 125 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ ಮೇಲೆಯೂ ಈ ಕುರಿತು ಚರ್ಚೆಗಳು ನಡೆಯುವುದಕ್ಕೆ ಸಾಕಷ್ಟು ಕಾರಣಗಳಿವೆ. ಬಿಹಾರ ಫಲಿತಾಂಶದ ಬಳಿಕ ಈ ಪ್ರಶ್ನೆ ಹುಟ್ಟಿಕೊಳ್ಳಲು ಕಾರಣವೇನು. ಬಿಜೆಪಿ ಮತ್ತು ಜೆಡಿಯು ನಾಯಕರು ಈ ಕುರಿತು ಹೇಳುವುದು ಏನು ಎನ್ನುವುದರ ಕುರಿತು ಒಂದು ವರದಿ ಇಲ್ಲಿದೆ.
ಬಿಹಾರ ಬಿಟ್ಟು ರಾಷ್ಟ್ರ ರಾಜಕಾರಣಕ್ಕೆ ನಿತೀಶ್?
ಬಿಹಾರ ವಿಧಾನಸಭಾ ಚುನಾವಣೆ ನಂತರದಲ್ಲಿ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್, ಇನ್ನು ನಿತೀಶ್ ಕುಮಾರ್ ರನ್ನು ರಾಷ್ಟ್ರ ರಾಜಕಾರಣಕ್ಕೆ ಆಹ್ವಾನಿಸಿದ್ದರು. "ನಿತೀಶ್ ಜೀ ನಿಮ್ಮ ಮಟ್ಟಕ್ಕೆ ಬಿಹಾರ ರಾಜಕಾರಣವು ತೀರಾ ಸಣ್ಣದು ಎನಿಸುತ್ತಿದ್ದು, ನೀವು ರಾಷ್ಟ್ರ ರಾಜಕಾರಣಕ್ಕೆ ಬರಬೇಕು. ಒಡೆದು ಆಳುವ ನೀತಿಯನ್ನು ನೆಚ್ಚಿಕೊಂಡಿರುವ ಜಾತ್ಯಾತೀತ ಸಮಾನ ಮನಸ್ಕರ ಜೊತೆಗೆ ನೀವು ಬಂದು ಸೇರಿಕೊಳ್ಳಿ" ಎಂದು ಲೇವಡಿ ಮಾಡಿದ್ದರು.
ದಿಗ್ವಿಜಯ್ ಸಿಂಗ್ ಟ್ವೀಟ್ ಗೆ ಬಿಜೆಪಿ ತಿರುಗೇಟು
ಬಿಹಾರವನ್ನು ತೊರೆದು ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸಬೇಕು ಎಂಬ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಆಹ್ವಾನಕ್ಕೆ ಬಿಜೆಪಿ ಮುಖಂಡ ಗಿರಿರಾಜ್ ಸಿಂಗ್ ತಿರುಗೇಟು ನೀಡಿದ್ದಾರೆ. "ನಿತೀಶ್ ಕುಮಾರ್ ಅವರು ಎನ್ ಡಿಎ ಮುಖಂಡರಾಗಿದ್ದು, ಸೋಲು-ಗೆಲುವಿನಿಂದ ಅವರ ಘನತೆಯಲ್ಲಿ ವ್ಯತ್ಯಾಸ ಆಗುವುದಿಲ್ಲ. ನಿತೀಶ್ ಕುಮಾರ್ ವಿರುದ್ಧ ಆರೋಪಗಳನ್ನು ಮಾಡಿದ ತೇಜಸ್ವಿ ಯಾದವ್ ಅವರಿಗೆ ಎಲ್ಲಿ ಗೆಲುವು ಸಿಕ್ಕಿದೆ. ಈಗ ಬಿಹಾರದ ಜನರು ಅವರಿಗೆ ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ ಹೇಳಿದ್ದಾರೆ. ದಿಗ್ವಿಜಯ್ ಸಿಂಗ್ ಅವರೇ ನೀವು ನಿಮ್ಮ ರಾಜ್ಯದ ಬಗ್ಗೆ ಹೆಚ್ಚು ನಿಗಾ ವಹಿಸಿರಿ" ಎಂದು ಬಿಜೆಪಿ ಮುಖಂಡ ಗಿರಿರಾಜ್ ಸಿಂಗ್ ಹೇಳಿದ್ದಾರೆ.
ಸಂಘಟಿತ ಹೋರಾಟಕ್ಕೆ ಗೆಲುವು ಎಂದ ಸುಶೀಲ್ ಮೋದಿ
ಬಿಹಾರದ ಮುಂದಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಬಿಜೆಪಿ ಮುಖಂಡ ಹಾಗೂ ಡಿಸಿಎಂ ಸುಶೀಲ್ ಮೋದಿ ಸ್ಪಷ್ಟಪಡಿಸಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಲ್ಲಿರುವ ಎಲ್ಲ ಪಕ್ಷಗಳು ಸಮಾನ ರೀತಿಯಲ್ಲಿ ಗೆಲುವು ಸಾಧಿಸಿಲ್ಲ. ಒಕ್ಕೂಟದ ಒಂದೊಂದು ಪಕ್ಷಗಳು ಒಂದೊಂದು ಅಂಕಿ-ಅಂಶಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ ಗೆಲುವಿನಲ್ಲಿ ಜೆಡಿಯು ಮಹತ್ವದ ಪಾತ್ರ ವಹಿಸಿದ್ದರೆ, ಜೆಡಿಯು ಗೆಲುವಿನಲ್ಲಿ ಬಿಜೆಪಿ ಕೂಡಾ ಅಷ್ಟೇ ಮಹತ್ವದ ಪಾತ್ರವನ್ನು ವಹಿಸಿದೆ. ಬಿಜೆಪಿ, ಜೆಡಿಯು, ವಿಐಪಿ ಮತ್ತು ಹೆಚ್ಎಎಂ ಮೈತ್ರಿಕೂಟದ ಸಂಘಟಿತ ಹೋರಾಟದಿಂದಾಗಿ ಬಿಹಾರದಲ್ಲಿ ಜಯಭೇರಿ ಬಾರಿಸುವುದಕ್ಕೆ ಸಾಧ್ಯವಾಯಿತು ಎಂದು ಡಿಸಿಎಂ ಸುಶೀಲ್ ಮೋದಿ ಹೇಳಿದ್ದಾರೆ.
ಬಿಹಾರ ಮತದಾರರು ನೀಡಿರುವ ತೀರ್ಪಿನ ವಿವರ
ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ನಡೆದ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ರಾಜ್ಯದಲ್ಲಿ ಸ್ಪಷ್ಟ ಬಹುಮತಕ್ಕೆ 122 ಸ್ಥಾನಗಳ ಅಗತ್ಯವಿದ್ದು, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್ ಡಿಎ) 125 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ. ಈ ಪೈಕಿ ಬಿಜೆಪಿ 74, ಜೆಡಿಯು 43, ವಿಐಪಿ 4 ಹಾಗೂ ಹಿಂದೂಸ್ಥಾನ್ ಅವಂ ಮೋರ್ಚಾ ಪಕ್ಷವು 4 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಮಹಾಘಟಬಂಧನ್ ಮೈತ್ರಿಕೂಟವು 110 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಅದರಲ್ಲಿ ರಾಷ್ಟ್ರೀಯ ಜನತಾ ದಳ 75, ಕಾಂಗ್ರೆಸ್ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಎಐಎಂಐಎಂ 5, ಲೋಕಜನಶಕ್ತಿ ಪಕ್ಷ 1 ಹಾಗೂ ಪಕ್ಷೇತರ ಅಭ್ಯರ್ಥಿಗಳು 2 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದಾರೆ.
Recommended Video