ಜಾತಿ ಗಣತಿ ಕುರಿತ ನಿರ್ಧಾರ ಮರು ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿತೀಶ್ ಕುಮಾರ್ ಆಗ್ರಹ
ಪಾಟ್ನಾ, ಸೆಪ್ಟೆಂಬರ್ 27: ದೇಶದಲ್ಲಿ ಜಾತಿ ಗಣತಿ ಅಸಾಧ್ಯ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ತಿಳಿಸಿರುವ ಹಿನ್ನೆಲೆಯಲ್ಲಿ ಈ ನಿಲುವನ್ನು ಮರು ಪರಿಶೀಲಿಸಬೇಕೆಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಗ್ರಹಿಸಿದ್ದಾರೆ.
ಬಿಹಾರ ವಿಧಾನಸಭೆ ಹಾಗೂ ಪರಿಷತ್ನಲ್ಲಿ ಜಾತಿ ಗಣತಿ ಬೆಂಬಲಿಸಲು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ. ನಾವೆಲ್ಲರೂ ಈಗಾಗಲೇ ಬೇಡಿಕೆಗಳನ್ನು ಒಟ್ಟಾಗಿ ಇರಿಸಿದ್ದೇವೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
'ಹಿಂದುಳಿದ ವರ್ಗದ ಜಾತಿಗಣತಿ ನಿಷ್ಪ್ರಯೋಜಕ, ಕಷ್ಟ' ಎಂದ ಕೇಂದ್ರ ಸರ್ಕಾರ
ಮೂರು ದಿನಗಳ ಹಿಂದಷ್ಟೇ ಹಿಂದುಳಿದ ವರ್ಗಗಳ ಜಾತಿ ಗಣತಿ ನಡೆಸುವುದು ಆಡಳಿತಾತ್ಮಕವಾಗಿ ಕಠಿಣ ಮತ್ತು ತೊಡಕಿನ ಕೆಲಸ. ಅಲ್ಲದೆ ಇಂಥ ಮಾಹಿತಿಯನ್ನು ಗಣತಿ ವ್ಯಾಪ್ತಿಯಿಂದ ಹೊರಗಿಟ್ಟಿರುವುದು ಪ್ರಜ್ಞಾಪೂರ್ವಕ ನಿರ್ಧಾರ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿತ್ತು.
ಇತ್ತೀಚಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ 10 ಪಕ್ಷಗಳ ನಿಯೋಗ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಹಿಂದುಳಿದ ವರ್ಗಗಳ ಜನಗಣತಿ ನಡೆಸಬೇಕು ಎಂದು ಮನವಿ ಮಾಡಿತ್ತು.
ಜೊತೆಗೆ ದೇಶದ ಹಲವು ರಾಜ್ಯಗಳಿಂದಲೂ ಇಂಥ ಬೇಡಿಕೆ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಅಭಿಪ್ರಾಯ ವ್ಯಕ್ತಪಡಿಸಿರುವುದು ಮಹತ್ವ ಪಡೆದುಕೊಂಡಿದೆ.
"ಈ ಜಾತಿಗಣತಿ ವಿಚಾರವನ್ನು ಈ ಹಿಂದಿನ ಎಲ್ಲಾ ಅಂಶಗಳೊಂದಿಗೆ ತುಲನೆ ಮಾಡಿ ಪರಿಶೀಲನೆ ನಡೆಸಲಾಗಿದೆ. ಆದರೆ ಎಲ್ಲಾ ಸಂದರ್ಭದಲ್ಲೂ ಈ ಜಾತಿಗಣತಿಯು ಕಷ್ಟ ಹಾಗೂ ನಿಷ್ಪ್ರಯೋಜಕ ಎಂದು ತಿಳಿದು ಬಂದಿದೆ.
ಈ ಜಾತಿ ಗಣತಿಯನ್ನು ಮಾಡಿದರೆ, ಇದು ಪೂರ್ತಿ ಎಂದು ಆಗದು ಹಾಗೂ ಯಾವುದೇ ಸ್ಪಷ್ಟತೆಯೂ ಇರದು. ಇದು 2011 ರಲ್ಲಿ ನಡೆಸಿದ ಜಾತಿಗಣತಿಯಿಂದ ಸ್ಪಷ್ಟವಾಗಿದೆ," ಎಂದು ಕೂಡಾ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ತನ್ನ ಅಫಿಡವಿಟ್ನಲ್ಲಿ ಅಭಿಪ್ರಾಯಿಸಿದೆ.
"2011 ರಲ್ಲಿ ನಡೆಸಿದ ಸಾಮಾಜಿಕ, ಆರ್ಥಿಕ ಹಾಗೂ ಜಾತಿಗಣತಿಯಲ್ಲಿನ (ಎಸ್ಇಸಿಸಿ) ಮಾಹಿತಿಯು ಯಾವುದೇ ಅಧಿಕೃತ ಬಳಕೆಗೆ ಸಹಕಾರಿಯಾಗಿಲ್ಲ. ಹಾಗೆಯೇ ಇದು ಇದನ್ನು ಜನಸಂಖ್ಯೆಯ ಬಗ್ಗೆ ತಿಳಿಯಲು ಸಹಾಯ ಮಾಡುವ ಮೂಲ ಡೇಟಾ ಎಂದು ಕೂಡಾ ಪರಿಗಣಿಸಲಾಗದು," ಎಂದು ಕೇಂದ್ರ ಸರ್ಕಾರವು ತಿಳಿಸಿತ್ತು.
2021 ರ ಜನಗಣತಿಯ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಜಾತಿಗಣತಿಯನ್ನು ಕೂಡಾ ಮಾಡಬೇಕು. ಜನರಿಂದ ಜಾತಿಯ ಮಾಹಿತಿ ಕೂಡಾ ಸಂಗ್ರಹ ಮಾಡಬೇಕು ಎಂದು ಮಹಾರಾಷ್ಟ್ರವು ಸಲ್ಲಿಕೆ ಮಾಡಿರುವ ರಿಟ್ ಅರ್ಜಿಗೆ ಪ್ರತಿಕ್ರಿಯೆ ನೀಡಿ ತನ್ನ ಅಫಿಡವಿಟ್ನಲ್ಲಿ ಕೇಂದ್ರ ಸರ್ಕಾರ ಈ ಹೇಳಿಕೆ ನೀಡಿದೆ.
2011 ರ ಎಸ್ಇಸಿಸಿಯಲ್ಲಿ ಸುಮಾರು 4.28 ಲಕ್ಷ ಜಾತಿಗಳನ್ನು ಮಹಾರಾಷ್ಟ್ರ ರಾಜ್ಯದಲ್ಲಿ ಎಣಿಕೆ ಮಾಡಲಾಗಿದೆ. ಆದರೆ ಪ್ರಸ್ತುತ ಮಹಾರಾಷ್ಟ್ರದಲ್ಲಿ ಇರುವ ಎಸ್ಸಿ, ಎಸ್ಟಿ, ಒಬಿಸಿ ಜಾತಿಗಳು 494 ಮಾತ್ರ ಎಂದು ಕೂಡಾ ಕೇಂದ್ರ ಅಫಿಡವಿಟ್ನಲ್ಲಿ ಉಲ್ಲೇಖ ಮಾಡಿದೆ.
2011ರಲ್ಲಿ ನಡೆದ ಆರ್ಥಿಕವಾಗಿ ಹಿಂದುಳಿದವರ ಜಾತಿ ಗಣತಿ ಸಾಕಷ್ಟುತಪ್ಪುಗಳಿಂದ ಕೂಡಿತ್ತು ಮತ್ತು ದೋಷಪೂರಿತವಾಗಿತ್ತು. ಜಾತಿ ಗಣತಿ ನಡೆಸುವುದು ಅತಿ ಕಠಿಣ ಕೆಲಸ. ಹಿಂದುಳಿದ ವರ್ಗಗಳ ಗಣತಿ ನಡೆಸುವುದು ಸರ್ಕಾರಕ್ಕೆ ಹೊರೆ ಆಗುತ್ತದೆ ಮತ್ತು ಅತಿ ಸಂಕೀರ್ಣತೆಯಿಂದ ಕೂಡಿದ ಕೆಲಸವಾಗಿದೆ ಎಂದು ಕೇಂದ್ರ ಹೇಳಿದೆ.
ಜಾತಿಗಣತಿ ನಡೆಸಲು ಕೇಂದ್ರಕ್ಕೆ ಸೂಚಿಸಬೇಕು ಎಂದು ಕೋರಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಸಲ್ಲಿಸಿದ ಅಫಿಡವಿಟ್ನಲ್ಲಿ ಈ ಮಾಹಿತಿ ಇದೆ.