'ಜಂಗಲ್ ಕಾ ಯುವರಾಜ್' ತೇಜಸ್ವಿ ಯಾದವ್ ಮುಟ್ಟಿಸಿದ ಬಿಸಿಗೆ ಪಿಎಂ ಮೋದಿ ಕಕ್ಕಾಬಿಕ್ಕಿ
ಈ ಕ್ಷಣದವರೆಗೂ ಬಿಹಾರದಲ್ಲಿ ಯಾರ ನೇತೃತ್ವದ ಸರಕಾರ ಅಧಿಕಾರಕ್ಕೆ ಬರಲಿದೆ ಎನ್ನುವುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಒಮ್ಮೆ, ಎನ್ಡಿಎ ಮೈತ್ರಿಕೂಟದ ಕಡೆಗೆ, ಇನ್ನೊಮ್ಮೆ, ಮಹಾಘಟಬಂಧನ್ ಕಡೆ ವಿಜಯಲಕ್ಷ್ಮಿ ಚಂಚಲೆಯಾಗುತ್ತಿದ್ದಾಳೆ.
Recommended Video
ಅದೇನೇ ಇರಲಿ, ಬಿಹಾರ ರಾಜಕೀಯದಲ್ಲಿ ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ಬೆಳೆದು ಬಂದ ರೀತಿ ಖುದ್ದು ಅವರ ತಂದೆ ಲಾಲೂ ಪ್ರಸಾದ್ ಯಾದವ್ ಅವರಿಗೂ ಆಶ್ಚರ್ಯವಾಗಿರಬಹುದು. ಸದ್ಯ, ಆರ್ಜೆಡಿ, ಶೇಕಡಾವಾರು ಮತಗಳಿಕೆಯಲ್ಲಿ ಬಿಜೆಪಿ, ಜೆಡಿಯು ಅನ್ನೂ ಹಿಂದಿಕ್ಕಿದೆ.
ಬಿಹಾರದ ರಾಜಕೀಯವನ್ನು ಅರಿದು ಕುಡಿದ ಅನುಭವವಿರುವ ನಿತೀಶ್ ಕುಮಾರ್ ಆಗಲಿ ಅಥವಾ ಬಿಜೆಪಿಯ ಮತ್ತು ಡಿಸಿಎಂ ಆಗಿರುವ ಸುಶೀಲ್ ಕುಮಾರ್ ಮೋದಿ, ಆರ್ಜೆಡಿಯಿಂದ ಈ ರೀತಿಯ ಪ್ರಬಲ ಪೈಪೋಟಿ ಎದುರಾಗಬಹುದು ಎಂದು ನಿರೀಕ್ಷಿಸಿರಲಿಕ್ಕಿಲ್ಲ.
ಇಷ್ಟೆಲ್ಲಾ ಯಾಕೆ, ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಕೂಡಾ, ತೇಜಸ್ವಿ ಯಾದವ್ ನೇತೃತ್ವದ ಮೈತ್ರಿಕೂಟ ಇಷ್ಟು ಕಠಿಣ ಸವಾಲನ್ನು ನೀಡಬಹುದು ಅಂದಾಜಿಸಿರಲಿಕ್ಕಿಲ್ಲ. ಜಂಗಲ್ ಕಾ ಯುವರಾಜ್ ಎಂದು ಲೇವಡಿ ಮಾಡಿದ್ದ ಪ್ರಧಾನಿ ಮೋದಿಗೂ ಈಗ ಹೊರಬೀಳುತ್ತಿರುವ ಫಲಿತಾಂಶ ಶಾಕ್ ನೀಡಿರಬಹುದು. ಸದ್ಯದ ತಾಜಾ ಮಾಹಿತಿಯ ಪ್ರಕಾರ, ಎನ್ಡಿಎ ಮೈತ್ರಿಕೂಟ ಅಧಿಕಾರವನ್ನು ಉಳಿಸಿಕೊಳ್ಳಬಹುದು.

ಬಿಜೆಪಿ ಮೈತ್ರಿಕೂಟಕ್ಕೆ ಇನ್ನೊಂದು ದಿಗ್ವಿಜಯ
ಬಿಹಾರ ಅಸೆಂಬ್ಲಿಯ ಚುನಾವಣಾಪೂರ್ವ ಸಮೀಕ್ಷೆಯಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಇನ್ನೊಂದು ದಿಗ್ವಿಜಯ ಎಂದೇ ಹೇಳಲಾಗುತ್ತಿತ್ತು. ಆದರೆ, ಬರಬರುತ್ತಾ ಮತಗಟ್ಟೆ ಸಮೀಕ್ಷೆಯ ವೇಳೆ, ಸದ್ಯ, ಜೈಲಿನಲ್ಲಿರುವ ರಂಗು ರಂಗಿನ ರಾಜಕಾರಣಿ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ಮತದಾರರಿಗೆ ಹೊಸ ಆಶಾಕಿರಣವಾಗಿ ಮುನ್ನಲೆಗೆ ಬಂದಿದ್ದರು.

ಇದೇ ನನ್ನ ಕೊನೆಯ ಚುನಾವಣೆ ಎಂದ ನಿತೀಶ್ ಕುಮಾರ್
ಬಿಸಿರಕ್ತದ ಯುವಕ ತೇಜಸ್ವಿಗೆ ಹೋದಲ್ಲಿ ಬಂದಲೆಲ್ಲಾ ಸಿಗುತ್ತಿದ್ದ ಜನಬೆಂಬಲವನ್ನು ಅರಿತೋ ಏನೋ ಸಿಎಂ ನಿತೀಶ್ ಕುಮಾರ್, ಸಾಮಾನ್ಯವಾಗಿ ಕರ್ನಾಟಕದಲ್ಲಿ ದೇವೇಗೌಡ್ರು ಹೇಳುವಂತೆ, ಇದೇ ನನ್ನ ಕೊನೆಯ ಚುನಾವಣೆ ಎಂದು ಎಮೋಷನಲ್ ಹೇಳಿಕೆಯನ್ನು ಹರಿಯ ಬಿಟ್ಟರು. ಆದರೂ ಇದು ವರ್ಕೌಟ್ ಆಗಿಲ್ಲ ಎನ್ನುವುದಕ್ಕೆ ಚುನಾವಣಾ ಫಲಿತಾಂಶ ಸಾಕ್ಷಿಯಾಗುತ್ತಿದೆ.

ಮೋದಿ ಪ್ರಚಾರಕ್ಕೆ ಹೋದಲೆಲ್ಲಾ ಮೈತ್ರಿಕೂಟಕ್ಕೆ ಜಯ
ಸತತವಾಗಿ ಅಧಿಕಾರದಲ್ಲಿದ್ದ ನಿತೀಶ್ ಕುಮಾರ್ ಅವರ ಕಾರ್ಯವೈಖರಿ ಬಿಹಾರದ ಜನತೆ ತೃಪ್ತಿ ತಂದಿಲ್ಲ. ಬಿಜೆಪಿ ಏನಾದರೂ ನಿತೀಶ್ ಕುಮಾರ್ ಜೊತೆಗೆ ಕೈಜೋಡಿಸದೇ ಇದ್ದಲ್ಲಿ, ಜೆಡಿಯು ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಿತ್ತು. ಪ್ರಧಾನಿ ಮೋದಿ ಪ್ರಚಾರಕ್ಕೆ ಹೋದಲೆಲ್ಲಾ ಮೈತ್ರಿಕೂಟಕ್ಕೆ ಜಯ ಸಿಕ್ಕಿದೆ ಎನ್ನುವುದು ಅವರ ಜನಪ್ರಿಯತೆ ಮಂಕಾಗಿಲ್ಲ ಎನ್ನುವುದಕ್ಕೆ ಸಾಕ್ಷಿ.

ಜಂಗಲ್ ಕಾ ಯುವರಾಜ್ ನೀಡಿದ ಶಾಕ್ ಗೆ ಮೋದಿ ತಬ್ಬಿಬ್ಬು
ಈಗಾಗಲೇ ಹೇಳಿದಂತೆ ಬಿಹಾರ ಅಸೆಂಬ್ಲಿ ಚುನಾವಣೆಯ ಫೈನಲ್ ಫಲಿತಾಂಶ ಏನೇ ಬರಲಿ ತೇಜಸ್ವಿ ಯಾದವ್, ಬಿಹಾರದ ಯುವ ಜನನಾಯಕರಾಗಿ ಹೊರಹೊಮ್ಮಿದ್ದಾರೆ. ಖುದ್ದು ಪ್ರಧಾನಿಯೇ ತೇಜಸ್ವಿ ಅವರನ್ನು 'ಜಂಗಲ್ ಕಾ ಯುವರಾಜ್'ಎಂದು ಲೇವಡಿ ಮಾಡಿದ್ದರು. ಆದರೆ, ತೇಜಸ್ವಿ ಇದಕ್ಕೆ ತಿರುಗೇಟು ನೀಡುವ ಬದಲು ಬಿಹಾರದ ಜ್ವಲಂತ ಸಮಸ್ಯೆಯ ಬಗ್ಗೆ ಮಾತನಾಡಿದರು.

ಬೋರ್ಡಿಗೆ ಇಲ್ಲದ ತೇಜಸ್ವಿ ಯಾದವ್ ಬಿಹಾರದಲ್ಲಿ ಮುಟ್ಟಿಸಿದ ಬಿಸಿಗೆ ಎನ್ಡಿಎ ಕಕ್ಕಾಬಿಕ್ಕಿ
ನಿರುದ್ಯೋಗ ಸಮಸ್ಯೆ, ಕಾಣದ ಅಭಿವೃದ್ದಿ, ಲಾಕ್ ಡೌನ್ ವೇಳೆ ಬಿಹಾರದವರನ್ನು ವಾಪಸ್ ಕರೆಸಿಕೊಳ್ಳುವಲ್ಲಿ ತೋರಿದ ಅಸಡ್ಡೆ, ಆರೋಗ್ಯ, ಶಿಕ್ಷಣ ಮುಂತಾದ ವಿಚಾರಕ್ಕೆ ಪ್ರಚಾರದ ವೇಳೆ ಆದ್ಯತೆ ನೀಡಿದ ತೇಜಸ್ವಿ ಯಾದವ್, ಮೈತ್ರಿಕೂಟಕ್ಕೆ ಸರಿಯಾಗಿ ಬಿಸಿ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಿನವೊಂದಕ್ಕೆ ಹದಿನೈದು ಸಭೆ ನಡೆಸುತ್ತಿದ್ದ ತೇಜಸ್ವಿ, ಪಟ್ಟ ಶ್ರಮ, ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗುತ್ತದಾ ಎನ್ನುವುದಕ್ಕೆ ಕೆಲವೇ ಗಂಟೆಗಳು ಕಾದರೆ ಸಾಕು.












Click it and Unblock the Notifications