Breaking: ಪ್ರತಿಭಟನೆಗಳ ಕೇಂದ್ರವಾದ ಬಿಹಾರ ವಿಧಾನಸಭೆ ಆವರಣ
ಪಾಟ್ನಾ, ಆಗಸ್ಟ್ 24: ಬುಧವಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರಕಾರದ ವಿಶ್ವಾಸಮತ ಯಾಚಿಸಲಿದ್ದು, ಇದಕ್ಕೂ ಮುನ್ನ ಬಿಜೆಪಿ ಶಾಸಕರು ಬಿಹಾರ ವಿಧಾನಸಭೆಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.
ಇತ್ತ, ಬಿಜೆಪಿ, ಅತ್ತ ಆಡಳಿತ ಪಕ್ಷದ ನಾಯಕರು ಪ್ರತಿಭಟನೆಗಳನ್ನು ನಡೆಸುತ್ತಿದ್ದು ವಿಧಾನಸಭೆ ಆವರಣ ಪ್ರತಿಭಟನೆಗಳ ಕೇಂದ್ರವಾಗಿದೆ.
ಬಿಹಾರದಲ್ಲಿ ವಿಶ್ವಾಸಮತ: ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ ಎಂದ ಬಿಜೆಪಿ ನಾಯಕ
ಅಧಿಕಾರದಿಂದ ವಂಚಿತವಾಗಿರುವ ಮತ್ತು ರಾಜಕೀಯವಾಗಿ ಒಂಟಿಯಾಗಿರುವ ಬಿಜೆಪಿಯು ಪ್ರಬಲ ಏಳು ಪಕ್ಷಗಳ ಆಡಳಿತ 'ಮಹಾಘಟಬಂಧನ್' ವಿರುದ್ಧ ಬುಧವಾರ ಬಿಹಾರ ವಿಧಾನಸಭೆಯಲ್ಲಿ ಕಿಡಿ ಹಾರಿಸಲು ಸಜ್ಜಾಗಿದೆ.
ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ಅವರ ವಿರುದ್ಧ ಅವಿಶ್ವಾಸ ನಿರ್ಣಯದ ಹೊರತಾಗಿಯೂ ರಾಜೀನಾಮೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನವು ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಸಿಪಿಐ-ಎಂಎಲ್ ಶಾಸಕರು ಬಿಹಾರ ವಿಧಾನಸಭೆಯ ಹೊರಗೆ ಜಮಾಯಿಸಿದ್ದು, ಸ್ಪೀಕರ್ ವಿಕೆ ಸಿನ್ಹಾ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. "ಸಿಬಿಐ ದಾಳಿಗಳ ಮೂಲಕ ನಮ್ಮನ್ನು ಹೆದರಿಸುವ ಪಿತೂರಿ ಕೆಲಸ ಬಿಡಬೇಕು. ಇದು ನಮ್ಮ ಸರ್ಕಾರವನ್ನು ಉರುಳಿಸುವ ಪಿತೂರಿಯಾಗಿದೆ. ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯದ ನಮ್ಮ ಪ್ರಸ್ತಾಪವನ್ನು ಪರಿಗಣಿಸಬೇಕು ಮತ್ತು ಚರ್ಚಿಸಬೇಕು" ಎಂದಿದ್ದಾರೆ.
ಇತ್ತ, ಆರ್ಜೆಡಿ ಎಂಎಲ್ಸಿ ಮತ್ತು ಬಿಸ್ಕೊಮಾನ್ ಪಾಟ್ನಾ ಅಧ್ಯಕ್ಷ ಸುನಿಲ್ ಸಿಂಗ್ ಅವರ ಬೆಂಬಲಿಗರು ಇಲ್ಲಿ ಸಿಬಿಐ ದಾಳಿಯನ್ನು ವಿರೋಧಿಸಿ ಪಾಟ್ನಾದ ಅವರ ನಿವಾಸದ ಹೊರಗೆ ಭಾರಿ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ರೈಲ್ವೆ ಉದ್ಯೋಗಕ್ಕಾಗಿ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ ಆರ್ಜೆಡಿಯ ರಾಜ್ಯಸಭಾ ಸಂಸದ ಅಹ್ಮದ್ ಅಶ್ಫಾಕ್ ಕರೀಂ ಮತ್ತು ಬಿಹಾರದ ವಿಧಾನ ಪರಿಷತ್ ಸದಸ್ಯ ಸುನಿಲ್ ಸಿಂಗ್ಅವರ ನಿವಾಸದ ಮೇಲೆ ಕೇಂದ್ರೀಯ ತನಿಖಾ ದಳ ಬುಧವಾರ ದಾಳಿ ನಡೆಸಿದೆ.
ವಿಧಾನಸಭೆ ಹೊರಗೆ ಪ್ರತಿಭಟನೆ ನಡೆಡಸುತ್ತಿರುವ ಮಾಜಿ ಡಿಸಿಎಂ ತಾರಕಿಶೋರ್ ಪ್ರಸಾದ್ ನಾವು ವಿಧಾನಸಭೆ ಅಧಿವೇಶನಕ್ಕಾಗಿ ಇಲ್ಲಿಗೆ ಬಂದಿದ್ದೇವೆ. ಸಿಬಿಐ ಸ್ವತಂತ್ರ ಸಂಸ್ಥೆ ತನ್ನ ಕೆಲಸವನ್ನು ಮಾಡುತ್ತಿದೆ. ಅವರು ಮಾಡಿರುವ ಕೆಲಸಕ್ಕೆ ಅವರು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ದಾಳಿ ಮಾಡಲು ಈ ದಿನವನ್ನು ಏಕೆ ಆಯ್ಕೆ ಮಾಡಲಾಗಿದೆ ಎಂಬುದನ್ನು ಸಿಬಿಐ ನಿಮಗೆ ತಿಳಿಸುತ್ತದೆ. ಬಿಹಾರ ಅಸೆಂಬ್ಲಿ ಒಂದು ಸಾಂವಿಧಾನಿಕ ಸಂಸ್ಥೆ, ದೇವಸ್ಥಾನ. ಇಲ್ಲಿ ಏನೇ ಮಾಡಿದರೂ ನಿಯಮಾನುಸಾರ ನಡೆಯುತ್ತದೆ" ಎಂದರು.
ಬಿಹಾರ ವಿಧಾನಸಭೆಯಲ್ಲಿ ಜೆಡಿಯು ಆರ್ಜೆಡಿ ಕಾಂಗ್ರೆಸ್ ಎಡಪಕ್ಷಗಳ ಮಹಾಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಇದೆ. 243 ಸದಸ್ಯರಿರುವ ವಿಧಾನಸಭೆಯಲ್ಲಿ ಸರಕಾರದ ಪರವಾಗಿ 164 ಶಾಸಕರಿದ್ದಾರೆ. ಹೀಗಾಗಿ, ಸಿಎಂ ನಿತೀಶ್ ಕುಮಾರ್ ಬಹುಮತ ಸಾಬೀತುಪಡಿಸುವುದರಲ್ಲಿ ಅನುಮಾನ ಇಲ್ಲ. ಸ್ಪೀಕರ್ ಯಾರೇ ಇದ್ದರೂ ವ್ಯತ್ಯಾಸ ಆಗದು.
ಇದರ ನಡುವೆಯೇ ಬಿಹಾರ ವಿಧಾನ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಜೆಡಿಯು ಎಂಎಲ್ಸಿ ದೇವೇಶ್ ಚಂದ್ರ ಠಾಕೂರ್ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಸಿಎಂ ನಿತೀಶ್ ಕುಮಾರ್, ಆರ್ಜೆಡಿ ನಾಯಕಿ ರಾಬ್ರಿ ದೇವಿ ಮತ್ತಿತರರು ಉಪಸ್ಥಿತರಿದ್ದರು.