Jahangirpuri Violence: ಜಹಾಂಗೀರಪುರಿ ಗಲಭೆ: ಐವರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ ಅಸ್ತ್ರ
ನವದೆಹಲಿ, ಏಪ್ರಿಲ್ 20: ದೆಹಲಿಯ ಜಹಾಂಗೀರಪುರಿಯಲ್ಲಿ ಶನಿವಾರ ನಡೆದ ಘರ್ಷಣೆ ಪ್ರಕರಣದಲ್ಲಿ ಐವರು ಆರೋಪಿಗಳ ವಿರುದ್ಧ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅನ್ನು ಪ್ರಯೋಗ ಮಾಡಲಾಗಿದೆ. ಈ ಕಾಯ್ದೆಯಡಿ ಬಂಧನವಾದರೆ ಯಾವುದೇ ಆರೋಪವಿಲ್ಲದೆ ಒಂದು ವರ್ಷದವರೆಗೆ ಬಂಧನಕ್ಕೆ ಅವಕಾಶವಿದೆ.
ಎನ್ಎಸ್ಎ ಅಡಿಯಲ್ಲಿ ಆರೋಪ ಎದುರಿಸುತ್ತಿರುವವರಲ್ಲಿ ಪ್ರಮುಖ ಆರೋಪಿಗಳಲ್ಲಿ ಅನ್ಸಾರ್ ಸೇರಿದ್ದಂತೆ ಸಲೀಂ, ಇಮಾಮ್ ಶೇಖ್ ಅಥವಾ ಸೋನು, ದಿಲ್ಶಾದ್ ಮತ್ತು ಅಹಿರ್ ಇದ್ದಾರೆ. ಸೋಮವಾರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ತಾನಾ ಅವರಿಗೆ ಕರೆ ಮಾಡಿದ್ದರು. ಈ ಘಟನೆಯಲ್ಲಿ ಕಠಿಣ ಕ್ರಮಕ್ಕೆ ಕರೆ ನೀಡಿದ್ದರು.
ಈ ಹಿಂಸಾಚಾರದಲ್ಲಿ ಮೂವರು ಬಾಲಕರು ಸೇರಿದಂತೆ 24 ಜನರನ್ನು ಇದುವರೆಗೆ ಬಂಧಿಸಲಾಗಿದೆ. ಆ ಪೈಕಿ ಈಗ ಐವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಆರೋಪ ಹೊರಿಸಲಾಗಿದೆ. ಈ ಕಾಯ್ದೆಯು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂಬ ಕಾರಣಕ್ಕೆ ಆರೋಪಿಗಳನ್ನು ವರ್ಷದವರೆಗೂ ಬಂಧನದಲ್ಲಿಡಲು ಅವಕಾಶ ಮಾಡಿಕೊಡುತ್ತದೆ.

ಇನ್ನು ಪೌರತ್ವ ಕಾನೂನು ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಫೆಬ್ರವರಿ 2020 ರ ದೆಹಲಿ ಗಲಭೆಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿ ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು, "ಗೃಹ ಸಚಿವರು ತುಂಬಾ ಸ್ಪಷ್ಟವಾಗಿದ್ದರು ಮತ್ತು ಈ ವಿಷಯವನ್ನು ತನಿಖೆ ಮಾಡುವಾಗ ಯಾವುದೇ ತಪ್ಪು ಮಾಡದಂತೆ ದೆಹಲಿ ಪೊಲೀಸರಿಗೆ ತಿಳಿಸಿದ್ದಾರೆ," ಎಂದು ಹೇಳಿದರು. ಇನ್ನು ದೆಹಲಿಯಲ್ಲಿ ಪೌರತ್ವ ಕಾನೂನು ವಿರೋಧಿ ಪ್ರತಿಭಟನೆಗಳ ಸಂದರ್ಭದ ತನಿಖೆಯಲ್ಲಿನ ಲೋಪದೋಷಗಳ ಕುರಿತು ದೆಹಲಿ ಪೊಲೀಸರು ತೀವ್ರ ಟೀಕೆಗೆ ಗುರಿಯಾಗಿದ್ದರು.
ಇನ್ನು ಜಹಾಂಗೀರಪುರಿ ಹಿಂಸಾಚಾರ ಘಟನೆಯಲ್ಲಿ ಬಂಧಿತರಲ್ಲಿ ಎಂಟು ಮಂದಿ ಹಿಂದೂಗಳು ಮತ್ತು ಉಳಿದವರು ಮುಸ್ಲಿಮರು ಎಂದು ಹಿರಿಯ ಪೊಲೀಸ್ ಅಧಿಕಾರಿ ಡಿಪೇಂದರ್ ಪಾಠಕ್ ಹೇಳಿದ್ದಾರೆ. ಐವರನ್ನು ಹೊರತುಪಡಿಸಿ ಉಳಿದವರ ಮೇಲೆ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 (ಸಾರ್ವಜನಿಕ ಸೇವಕರಿಂದ ಆದೇಶಕ್ಕೆ ಅವಿಧೇಯತೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ, ಇದರಲ್ಲಿ ಜಾಮೀನು ಪಡೆಯಲು ಸಾಧ್ಯವಾಗಲಿದೆ.

ಜಹಾಂಗೀರಪುರಿ ಹಿಂಸಾಚಾರ ಘಟನೆ ಏನು?
ದೆಹಲಿಯ ಜಹಾಂಗೀರ್ಪುರಿಯಲ್ಲಿ ಆಯೋಜಿಸಿದ್ದ ಶೋಭಾ ಯಾತ್ರೆ ನಂತರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ಸಂಭವಿಸಿದೆ. ಅನುಮತಿಯಿಲ್ಲದೆ ಹನುಮ ಜಯಂತಿ ಮೆರವಣಿಗೆ ವೇಳೆ ಶನಿವಾರ ಘರ್ಷಣೆ ನಡೆದಿದೆ.
ಕೇಸರಿ ಧ್ವಜಗಳನ್ನು ಹಿಡಿದುಕೊಂಡು ಮೆರವಣಿಗೆಯು ಮಸೀದಿಯಿಂದ ಹಾದುಹೋದಾಗ, ಧಾರ್ಮಿಕ ಘೋಷಣೆಗಳು ಜೋರಾದ ಸಂದರ್ಭದಲ್ಲಿ ಮುಸ್ಲಿಂ ಪ್ರಾರ್ಥನೆಯು ಜೋರಾಗಿತ್ತು. ಈ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ವಾಗ್ವಾದವಾಗಿದೆ. ಕೋಮು ಘರ್ಷಣೆ ನಡೆದಿದೆ.
ವಾಯವ್ಯ ದೆಹಲಿಯ ಜಹಾಂಗೀರ್ಪುರಿಯಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ಹೆಚ್ಚುತ್ತಿದ್ದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ಪರಿಸ್ಥಿತಿ ನಿಯಂತ್ರಿಸುವ ನಿಟ್ಟಿನಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನೂ ಕರೆಸಲಾಯಿತು. ಘರ್ಷಣೆಯಲ್ಲಿ ಪೊಲೀಸರ ಮೇಲೆಯೂ ದಾಳಿ ನಡೆದಿದೆ. ಈ ಘಟನೆಗೆ ಸಂಬಂಧಿಸಿ ಮೂವರು ಬಾಲಕರು ಸೇರಿದಂತೆ 24 ಜನರನ್ನು ಇದುವರೆಗೆ ಬಂಧಿಸಲಾಗಿದೆ.
ಯೋಜಿತ ಷಡ್ಯಂತ್ರವೇ?
ನವದೆಹಲಿಯ ಜಹಾಂಗಿರ್ಪುರಿಯಲ್ಲಿ ನಡೆದ ಗಲಭೆ ಬಗ್ಗೆ ಪ್ರಾಥಮಿಕ ವರದಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಗೆ ಸಲ್ಲಿಕೆ ಮಾಡಲಾಗಿದೆ. ಇದೊಂದು ವ್ಯವಸ್ಥಿತ ಷಡ್ಯಂತ್ರ ಎಂದು ದೆಹಲಿ ಪೊಲೀಸರು ವರದಿಯಲ್ಲಿ ಹೇಳಿದ್ದಾರೆ. ಹನುಮ ಜಯಂತಿ ಮೆರವಣಿಗೆ ವೇಳೆ ಜಹಾಂಗಿರ್ಪುರಿಯಲ್ಲಿ ಗಲಭೆ ನಡೆದಿತ್ತು. ದೆಹಲಿ ಪೊಲೀಸರು ಗಲಭೆ ಕುರಿತು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಪ್ರಾಥಮಿಕ ವರದಿಯನ್ನು ಅಮಿತ್ ಶಾಗೆ ಸಲ್ಲಿಸಿದ್ದಾರೆ.
ಶನಿವಾರ ಹನುಮ ಜಯಂತಿ ಮೆರವಣಿಗೆ ವೇಳೆ ಹಿಂಸಚಾರ ನಡೆದಿತ್ತು. ಪೊಲೀಸರ ಮೇಲೆ ಸಹ ಕಲ್ಲು ತೂರಾಟ ನಡೆದಿತ್ತು. ಕಲ್ಲು ತೂರಾಟದ ವೇಳೆ ವ್ಯಕ್ತಿಯೊಬ್ಬ ಪಿಸ್ತೂಲ್ನಿಂದ ಗುಂಡು ಹಾರಿಸಿದ್ದ. ಸೋಮವಾರ ಈ ವ್ಯಕ್ತಿಯನ್ನು ಪೊಲೀಸರು ಬಂಧಿಸಲು ಹೋದಾಗ ಮತ್ತೆ ಕಲ್ಲು ತೂರಾಟ ನಡೆಸಲಾಗಿತ್ತು. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.












Click it and Unblock the Notifications