ಹಿರಿಯ ನಾಯಕರ ಕೈಯಲ್ಲಿ ಅಭ್ಯರ್ಥಿಗಳ ಪಟ್ಟಿ, ರಾಹುಲ್ ಗೆ ತಲೆನೋವು?!
ನವದೆಹಲಿ, ಅಕ್ಟೋಬರ್ 22: 'ಈ ಬಾರಿ ಟಿಕೆಟ್ ಹಂಚಿಕೆಯ ವಿಷಯದಲ್ಲಿ ಎಂದಿಗಿಂತಲೂ ಹೆಚ್ಚು ಪಾರದರ್ಶಕತೆಯನ್ನು ಪಾಲಿಸಲಾಗುವುದು' ಎಂದು ಪಂಚ ರಾಜ್ಯಗಳ ಚುನಾವಣೆಯ ವಿಷಯದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದೇನೋ ಸತ್ಯ.
ಆದರೆ ಇದೀಗ ಕಾಂಗ್ರೆಸ್ಸಿನ ಹಿರಿಯ ನಾಯಕರು ತಮ್ಮ ಬೆಂಬಲಿಗ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಅವರಿಗೇ ಟಿಕೆಟ್ ನೀಡುವಂತೆ ಒತ್ತಡ ಹೇರತ್ತಿರುವುದು ರಾಹುಲ್ ಗಾಂಧಿಗೆ ಬಹುದೊಡ್ಡ ತಲೆನೋವೆನ್ನಿಸಿದೆ.
ಇದೇ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಛತ್ತೀಸ್ ಗಡ, ಮಧ್ಯಪ್ರದೇಶ, ಮಿಜೋರಾಂ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
ಈಗಾಗಲೇ ಅಭ್ಯರ್ಥಿಗಳ ಆಯ್ಕೆಯ ಕುರಿತು ಕಾಂಗ್ರೆಸ್ಸಿನಲ್ಲಿ ಸಾಕಷ್ಟು ಕೂಗುಗಳು ಕೇಳಿಬರುತ್ತಿದ್ದುಹ, ಟಿಕೆಟ್ ಆಕಾಂಕ್ಷಿಗಳು ಈ ಬಾರಿ ಟಿಕೆಟ್ ದೊರೆಯದೆ ಇದ್ದಲ್ಲಿ ಬಂಡಾಯ ಏಳುವುದು ಖಂಡಿತ.

ಟಿಕೆಟ್ ಹಂಚಿಕೆಗೂ ಮೊದಲೇ ಭಿನ್ನಾಭಿಪ್ರಾಯ?
ರಾಜಸ್ಥಾನ ಮತ್ತು ಮಧ್ಯಪ್ರದೇಶ, ಮಿಜೋರಾಂ ರಾಜ್ಯಗಳಲ್ಲಿ ಕಾಂಗ್ರೆಸ್ ಪರವಾದ ವಾತಾವರಣವಿರುವುದರಿಂದ ಗೆಲ್ಲುವ ಮತ್ತು ಬಿಜೆಪಿಗೆ ಪ್ರಬಲ ಸ್ಪರ್ಧೆ ನೀಡುವ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕಿದೆ. ಆದರೆ ಟಿಕೆಟ್ ಹಂಚಿಕೆಗೂ ಮೊದಲೇ ಕಾಂಗ್ರೆಸ್ಸಿನಲ್ಲಿ ಭಿನ್ನಾಭಿಪ್ರಾಯ ಆರಂಭವಾಗುವ ಎಲ್ಲಾ ಲಕ್ಷಣಗಳೂ ಇದೀಗ ಕಾಣಿಸುತ್ತಿದೆ.

ಬೆಂಬಲಿಗರಿಗೆ ಟಿಕೆಟ್ ನೀಡುವಂತೆ ಒತ್ತಾಯ
ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಮತ್ತು ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಈಗಾಗಲೇ ತಮಗೆ ಬೇಕಾದ ಅಭ್ಯರ್ಥಿಗಳ ಹೆಸರನ್ನು ಶಿಫಾರಸ್ಸು ಮಾಡುತ್ತಿದ್ದಾರೆ. ಇತ್ತ ರಾಜಸ್ಥಾನದಲ್ಲಿ ಕಾಂಗ್ರೆಸ್ ಮುಖಂಡರಾದ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲೆಟ್ ನಡುವೆ ತಮ್ಮ ತಮ್ಮ ಬೆಂಬಲಿಗರಿಗೆ ಟಿಕೆಟ್ ಹಂಚುವ ಕೆಲಸವೂ ನಡೆಯುತ್ತಿದೆ.

ರಾಹುಲ್ ಕಚೇರಿಗೆ ಎಡತಾಕುತ್ತಿರುವ ಹಿರಿಯ ನಾಯಕರು
'ಈ ಬಾರಿ ಕೇವಲ ಗೆಲ್ಲುವ ಅಭ್ಯರ್ಥಿಗಳಿಗಷ್ಟೇ ಟಿಕೆಟ್ ನೀಡಲಾಗುವುದು. ಅರ್ಹತೆಯ ಆಧಾರದ ಮೇಲೆ ಟಿಕೆಟ್' ಎಂದು ರಾಹುಲ್ ಗಾಂಧಿ ಸ್ಪಷ್ಟವಾಗಿ ಹೇಳಿದ್ದರೂ, ಟಿಕೆಟ್ ಗಾಗಿ ಹಿರಿಯ ನಾಯಕರು ರಾಹುಲ್ ಗಾಂಧಿ ಅವರ ಕಚೇರಿಯನ್ನು ಎಡತಾಕುವುದು ನಿಂತಿಲ್ಲ!

ಯಾವ್ಯಾವತ್ತು ಚುನಾವಣೆ?
ಛತ್ತೀಸ್ ಗಢ: ನವೆಂಬರ್ 12, 2018(ಮೊದಲ ಹಂತ), 20 ನವೆಂಬರ್ 2018(ಎರಡನೇ ಹಂತ)
ಮಧ್ಯಪ್ರದೇಶ ಮತ್ತು ಮಿಜೋರಾಂ: 28, ನವೆಂಬರ್ 2018
ರಾಜಸ್ಥಾನ ಮತ್ತು ತೆಲಂಗಾಣ: ಡಿಸೆಂಬರ್ 7, 2018
ಫಲಿತಾಂಶ: ಈ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಡಿಸೆಂಬರ್ 11 ರಂದು ಹೊರಬೀಳಲಿದೆ.












Click it and Unblock the Notifications