ನಟ ವಿನೋದ್ ಪ್ರಭಾಕರ್ಗೆ ಅನಾರೋಗ್ಯ ಪ್ರಚಾರದ ಗಿಮಿಕ್ ಎಂದವರಿಗೆ 'ಬಲರಾಮನ ದಿನಗಳು' ಚಿತ್ರತಂಡ ಹೇಳಿದ್ದೇನು?
ಸ್ಯಾಂಡಲ್ವುಡ್ನ ಮರಿ ಟೈಗರ್ ಖ್ಯಾತಿಯ ನಟ ವಿನೋದ್ ಪ್ರಭಾಕರ್ (Vinod Prabhakar) ಅವರು ಇತ್ತೀಚೆಗೆ ದಿಢೀರ್ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ ಘಟನೆ ಅವರ ಅಭಿಮಾನಿಗಳಲ್ಲಿ ಭಾರಿ ಆತಂಕ ಮೂಡಿಸಿತ್ತು. ಆದರೆ ಅವರ ನಟನೆಯ ಬಹುನಿರೀಕ್ಷಿತ 'ಬಲರಾಮನ ದಿನಗಳು' ಸಿನಿಮಾ ಬಿಡುಗಡೆಯಾಗುವ ಹೊತ್ತಿನಲ್ಲೇ ಈ ಘಟನೆ ನಡೆದಿದ್ದರಿಂದ, ಸಾಮಾಜಿಕ ಜಾಲತಾಣಗಳಲ್ಲಿ ಇದು ಸಿನಿಮಾ ಪ್ರಚಾರದ ಗಿಮಿಕ್ ಇರಬಹುದು ಎಂದು ಕೆಲವರು ಕುಹಕವಾಡಿದ್ದರು. ಈಗ ಈ ಎಲ್ಲ ವದಂತಿಗೆ ಚಿತ್ರದ ನಿರ್ದೇಶಕ ಕೆ.ಎಂ.ಚೈತನ್ಯ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ.
ಅಂದು ವಿನೋದ್ ಪ್ರಭಾಕರ್ಗೆ ಆಗಿದ್ದೇನು?
ತಮ್ಮ ಹೊಸ ಚಿತ್ರ 'ಬಲರಾಮನ ದಿನಗಳು' ಸಿನಿಮಾದ ಬಿರುಸಿನ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ನಟ ವಿನೋದ್ ಪ್ರಭಾಕರ್ ಅವರಿಗೆ ಮನೆಯಲ್ಲಿದ್ದಾಗ ದಿಢೀರ್ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ತೀವ್ರ ಎದೆನೋವು ಹಾಗೂ ಲೋ ಬಿಪಿ (ಕಡಿಮೆ ರಕ್ತದೊತ್ತಡ) ಸಮಸ್ಯೆಯಿಂದಾಗಿ ಅವರು ತೀವ್ರವಾಗಿ ಅಸ್ವಸ್ಥರಾಗಿದ್ದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಕುಟುಂಬಸ್ಥರು ತಕ್ಷಣವೇ ಅವರನ್ನು ಬೆಂಗಳೂರಿನ ನಾಗರಬಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರ ತಂಡ ತಕ್ಷಣವೇ ಸ್ಪಂದಿಸಿ, ಅವರ ಆರೋಗ್ಯದ ಮೇಲೆ ತೀವ್ರ ನಿಗಾ ವಹಿಸಿ ಸೂಕ್ತ ಚಿಕಿತ್ಸೆ ನೀಡಿತ್ತು.

'ಇದು ಸಿನಿಮಾ ಗಿಮಿಕ್' ಎಂದವರಿಗೆ ತಿರುಗೇಟು
ಸಿನಿಮಾ ಬಿಡುಗಡೆಯ ಪ್ರಮುಖ ಸಂದರ್ಭದಲ್ಲೇ ನಾಯಕ ನಟ ಆಸ್ಪತ್ರೆ ಸೇರಿದ್ದನ್ನು ಕಂಡು ಸೋಷಿಯಲ್ ಮೀಡಿಯಾದಲ್ಲಿ ಕೆಲವರು, "ಇದು ಚಿತ್ರದ ಪ್ರಚಾರಕ್ಕಾಗಿ ಮಾಡಿಕೊಂಡಿರುವ ಗಿಮಿಕ್ ಇರಬೇಕು ಎಂದು ಕಮೆಂಟ್ ಮಾಡಿದ್ದರು. ಈ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿರುವ ಚಿತ್ರದ ನಿರ್ದೇಶಕ ಕೆ.ಎಂ. ಚೈತನ್ಯಬೇಸರ ವ್ಯಕ್ತಪಡಿಸಿದ್ದಾರೆ. "ವಿನೋದ್ ಪ್ರಭಾಕರ್ ಅವರು ದೇಹದಾರ್ಢ್ಯತೆ ಹೊಂದಿರುವ ಅತ್ಯಂತ ಗಟ್ಟಿಮುಟ್ಟಾದ ನಟ. ಅಂತವರ ಆರೋಗ್ಯ ಹದಗೆಟ್ಟರೆ ಅದು ಚಿತ್ರದ ಪ್ರಚಾರಕ್ಕೆ ಹೇಗೆ ತಾನೇ ಪ್ಲಸ್ ಪಾಯಿಂಟ್ ಆಗಲು ಸಾಧ್ಯ? ಮುಖ್ಯ ನಟನೇ ಆಸ್ಪತ್ರೆಯಲ್ಲಿದ್ದರೆ ಪ್ರಚಾರದ ಕೆಲಸಗಳು ಸಂಪೂರ್ಣ ನಿಂತುಹೋಗುತ್ತವೆ. ಇಂತಹ ಸೂಕ್ಷ್ಮ ವಿಷಯದಲ್ಲಿ ನಾವು ಯಾವುದೇ ರೀತಿಯ ಗಿಮಿಕ್ ಮಾಡಿಲ್ಲ, ಮಾಡುವ ಅಗತ್ಯವೂ ನಮಗಿಲ್ಲ" ಎಂದು ವದಂತಿ ಹರಡುತ್ತಿದ್ದವರಿಗೆ ಚೈತನ್ಯ ಖಡಕ್ ಉತ್ತರ ನೀಡಿದ್ದಾರೆ. ಸದ್ಯ ವಿನೋದ್ ಪ್ರಭಾಕರ್ ಅವರು ಚಿಕಿತ್ಸೆ ಮುಗಿಸಿ ಗುಣಮುಖರಾಗುತ್ತಿದ್ದು, ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ವಿನೋದ್ ಪತ್ನಿ ಸ್ಪಷ್ಟನೆ
ನಟ ವಿನೋದ್ ಪ್ರಭಾಕರ್ ಅವರ ದಿಢೀರ್ ಅನಾರೋಗ್ಯದ ಬಗ್ಗೆ ಹರಡಿದ್ದ ಎಲ್ಲ ವದಂತಿಗೆ ಅವರ ಪತ್ನಿ ನಿಶಾ ವಿನೋದ್ ಪ್ರಭಾಕರ್ ತೆರೆ ಎಳೆದಿದ್ದಾರೆ. ತಮ್ಮ ಪತಿಯ ಆರೋಗ್ಯ ಸ್ಥಿತಿಯ ಕುರಿತು ಮಾಧ್ಯಮಗಳಿಗೆ ಅಧಿಕೃತ ಮಾಹಿತಿ ನೀಡಿರುವ ಅವರು, ಆಸ್ಪತ್ರೆಗೆ ದಾಖಲಾಗಲು ಪ್ರಮುಖ ಕಾರಣವೇನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. "ವಿನೋದ್ ಅವರಿಗೆ ಯಾವುದೇ ರೀತಿಯ ಗಂಭೀರವಾದ ಆರೋಗ್ಯ ಸಮಸ್ಯೆಗಳಿಲ್ಲ. ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ" ಎಂದು ನಿಶಾ ಸ್ಪಷ್ಟನೆ ನೀಡಿದ್ದಾರೆ.
"ಕಳೆದ ಕೆಲವು ದಿನಗಳಿಂದ 'ಬಲರಾಮನ ದಿನಗಳು' ಸಿನಿಮಾದ ಪ್ರಚಾರ ಕಾರ್ಯಗಳಿಗಾಗಿ ಅವರು ಹಗಲಿರುಳು ಸತತವಾಗಿ ಶ್ರಮಿಸುತ್ತಿದ್ದರು. ಸಾಲು ಸಾಲು ಇಂಟರ್ವ್ಯೂಗಳು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಕಾರಣ, ಕಳೆದ 15 ದಿನಗಳಿಂದ ಅವರಿಗೆ ದಿನಕ್ಕೆ ಕೇವಲ 3ರಿಂದ 4 ಗಂಟೆಗಳ ಕಾಲ ಮಾತ್ರ ನಿದ್ದೆ ಮಾಡಲು ಸಾಧ್ಯವಾಗಿತ್ತು. ಈ ಸತತ ಓಡಾಟ ಮತ್ತು ತೀವ್ರ ಆಯಾಸವೇ ಅವರ ದೇಹದ ಮೇಲೆ ಪರಿಣಾಮ ಬೀರಿದೆ" ಎಂದು ಪತ್ನಿ ತಿಳಿಸಿದ್ದಾರೆ.
ಸಿನಿಮಾ ಶೂಟಿಂಗ್ಗಳ ಸಮಯದಲ್ಲಿ ವಿನೋದ್ ಅವರು ಶಿಸ್ತಿನಿಂದ ಸರಿಯಾದ ಸಮಯಕ್ಕೆ ಊಟ ಮಾಡುತ್ತಿದ್ದರು. ಆದರೆ ಚಿತ್ರದ ಪ್ರಮೋಷನ್ ಒತ್ತಡದಿಂದಾಗಿ ಅವರ ಊಟದ ಸಮಯ ಸಂಪೂರ್ಣವಾಗಿ ಏರುಪೇರಾಗಿತ್ತು. ನಿದ್ದೆಯಿಲ್ಲದ ಆಯಾಸ ಮತ್ತು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದ ಕಾರಣದಿಂದಾಗಿ ಅವರ ದೇಹದಲ್ಲಿ ಸುಸ್ತು ಕಾಣಿಸಿಕೊಂಡು, ಲೋ ಬಿಪಿ ಸಮಸ್ಯೆ ಎದುರಾಗಿತ್ತು ಎಂದು ನಿಶಾ ಅವರು ವಿವರಿಸಿದ್ದಾರೆ. ಸದ್ಯ ವೈದ್ಯರ ಆರೈಕೆಯಲ್ಲಿರುವ ವಿನೋದ್ ಪ್ರಭಾಕರ್ ಅವರು ಸಂಪೂರ್ಣ ವಿಶ್ರಾಂತಿ ಪಡೆಯುತ್ತಿದ್ದು, ಶೀಘ್ರದಲ್ಲೇ ಮತ್ತೆ ಎಂದಿನಂತೆ ಸಕ್ರಿಯರಾಗಲಿದ್ದಾರೆ ಎಂದು ತಿಳಿಸಿದ್ದಾರೆ.













Click it and Unblock the Notifications