'ಆರ್ ಬಿಐ ಮಂಡಳಿ ಒಪ್ಪುವ ಮುಂಚೆಯೇ ಅಪನಗದೀಕರಣ ಘೋಷಣೆ'
ನವದೆಹಲಿ, ಮಾರ್ಚ್ 11: ಪ್ರಧಾನಿ ನರೇಂದ್ರ ಮೋದಿ ಅವರು ಅಪನಗದೀಕರಣ ಘೋಷಣೆ ಮಾಡುವ ಮುನ್ನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಂಡಳಿ ನಾಲ್ಕು ಆಕ್ಷೇಪಗಳನ್ನು ಎತ್ತಿತ್ತು. ಸಾರ್ವಜನಿಕರ ಹಿತದೃಷ್ಟಿಯಿಂದ ಒಪ್ಪಿಗೆ ಸೂಚಿಸುವ ಮುನ್ನ ಈ ರೀತಿ ಆಕ್ಷೇಪ ವ್ಯಕ್ತಪಡಿಸಲಾಗಿತ್ತು ಎಂಬ ಸಂಗತಿ ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಲಾದ ಪ್ರಶ್ನೆಗೆ ನೀಡಿದ ಉತ್ತರದಿಂದ ತಿಳಿದುಬಂದಿದೆ.
ಕೇಂದ್ರ ಬ್ಯಾಂಕ್ ನ ಮಂಡಳಿಯು ಪ್ರಧಾನಮಂತ್ರಿ ಅಪನಗದೀಕರಣ ಘೋಷಣೆ ಮಾಡುವ ಎರಡೂವರೆ ಗಂಟೆ ಮುಂಚೆ ಸಭೆ ನಡೆಸಿತ್ತು. ಚಲಾವಣೆಯಲ್ಲಿದ್ದ ಶೇಕಡಾ ಎಂಬತ್ತರಷ್ಟು ಐನೂರು, ಸಾವಿರ ರುಪಾಯಿ ನೋಟುಗಳನ್ನು ಹಿಂಪಡೆಯುವ ನಿರ್ಧಾರವನ್ನು ಆರ್ ಬಿಐ ಮಂಡಳಿ ಒಪ್ಪಿಗೆ ಸೂಚಿಸುವ ಮುನ್ನವೇ ಘೋಷಿಸಲಾಗಿದೆ.
ವಾರಗಳ ನಂತರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಒಪ್ಪಿಗೆಯನ್ನು ಸೂಚೊಸಲಾಗಿದೆ. ನೋಟು ನಿಷೇಧದ ಪರವಾಗಿ ಇದ್ದ ಸರಕಾರದ ಹಲವು ಅರ್ಜಿಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಸಮ್ಮತಿ ಸೂಚಿಸಿತ್ತು. ಆರ್ ಬಿಐನ ಸಭೆಯಲ್ಲಿ ಭಾಗವಹಿಸಿದ್ದ ನಿರ್ದೇಶಕರು ಅಪನಗದೀಕರಣವನ್ನು 'ಶ್ಲಾಘನೀಯ ಕ್ರಮ' ಎಂದಿದ್ದರು. ಆದರೆ ಪ್ರಸಕ್ತ ವರ್ಷದ ಜಿಡಿಪಿ ಮೇಲೆ ಅದರ ನಕಾರಾತ್ಮಕ ಪರಿಣಾಮ ಆಗುತ್ತದೆ ಎಂದು ಕೂಡ ಅಭಿಪ್ರಾಯ ಪಟ್ಟಿದ್ದರು.

ಕೇಂದ್ರ ಬ್ಯಾಂಕ್ ನ ನಿರ್ದೇಶಕರು ನೋಟು ನಿಷೇಧದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ದೇಶದಲ್ಲಿ ಒಟ್ಟಾರೆ ಚಲಾವಣೆಯಲ್ಲಿರುವ ಮೊತ್ತದಲ್ಲಿ ನಾನೂರು ಕೋಟಿ ರುಪಾಯಿಯನ್ನು ಪರ್ಸೆಂಟ್ ಗೆ ಬದಲಾಯಿಸಿ ನೋಡಿದರೆ ಅಂಥ ಮಹತ್ತರ ಮೊತ್ತ ಅಲ್ಲ ಎಂದಿದ್ದರು.
ಬಹುತೇಕ ಕಪ್ಪು ಹಣ ನಗದು ರೂಪದಲ್ಲೇ ಇರುತ್ತದೆ ಎಂದಲ್ಲ. ಅದು ಚಿನ್ನ ಅಥವಾ ರಿಯಲ್ ಎಸ್ಟೇಟ್ ಯಾವ ರೂಪದಲ್ಲಿ ಬೇಕಾದರೂ ಇರಬಹುದು. ಅಪನಗದೀಕರಣದಿಂದ ಅಂಥ ಆಸ್ತಿ ಮೇಲೆ ಯಾವ ಪರಿಣಾಮವೂ ಆಗಲ್ಲ ಎಂಬುದು ಆರ್ ಬಿಐ ಮಂಡಳಿ ಅಭಿಪ್ರಾಯ ಆಗಿತ್ತು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕೇಂದ್ರ ಸರಕಾರದ ಮಧ್ಯೆ ಆರು ತಿಂಗಳಿಂದ ಈ ವಿಚಾರದ ಚರ್ಚೆ ನಡೆಯುತ್ತಿತ್ತು ಎಂದು ಹೇಳಲಾಗಿದೆ.












Click it and Unblock the Notifications