ಮೋದಿಜಿಗೆ ಸ್ಕಿಜೊಫ್ರೇನಿಯಾ ಇದೆಯೇ? ರಾಹುಲ್ ಗಾಂಧಿ ವ್ಯಂಗ್ಯದ ಪ್ರಶ್ನೆ
ನವದೆಹಲಿ, ಫೆಬ್ರವರಿ 8: ಸಂಸತ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಮಾಡಿದ ಭಾಷಣದಲ್ಲಿ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ರಾಹುಲ್ ಗಾಂಧಿ ಅವರು ಮೋದಿ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿದ್ದಾರೆ.
ನರೇಂದ್ರ ಮೋದಿ ಅವರು ಮಾತನಾಡುವಾಗ 'ಉಲ್ಟಾ ಚೋರ್, ಚೌಕಿದಾರ್ ಕೋ ದಾಂತೆ' ಎಂದು ಹೇಳಿದ್ದಾರೆ. ಅವರು ತಮ್ಮ ಬಗ್ಗೆಯೇ ಮಾತನಾಡಿಕೊಳ್ಳುತ್ತಿದ್ದಾರೆಯೇ? ಅವರಿಗೆ ದ್ವಿಮುಖಿ ವ್ಯಕ್ತಿತ್ವವಿದೆಯೇ? ಅವರು ತಮ್ಮನ್ನು ತಾವು ಚೌಕಿದಾರನಾಗಿ ಮತ್ತು ಕಳ್ಳನಾಗಿ ನೋಡುತ್ತಿದ್ದಾರೆಯೇ? ಅವರು ರಾತ್ರಿ ತಮ್ಮೊಂದಿಗೇ ಮಾತನಾಡಿಕೊಂಡರು. ಒಂದು ದಿನ ಅವರು 'ಚೌಕಿದಾರ'ನಾಗುತ್ತಾರೆ ಮತ್ತು ಒಂದು ದಿನ ಅವರು 'ಕಳ್ಳ'ನಾಗುತ್ತಾರೆ. ಅವರಿಗೆ ಸ್ಕಿಜೊಫ್ರೇನಿಯಾ ಇದೆಯೇ?' ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
ಭಾರತೀಯ ವಾಯುಪಡೆಯನ್ನು ಕಾಂಗ್ರೆಸ್ ದುರ್ಬಲಗೊಳಿಸುತ್ತಿದೆ ಎಂಬ ಮೋದಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ರಾಹುಲ್, ಮೋದಿಜಿ 30, 000 ಕೋಟಿ ರೂಪಾಯಿಯನ್ನು ಕದ್ದಿದ್ದಾರೆ. ಪ್ರಧಾನಿ ಎರಡು ವ್ಯವಹಾರಗಳನ್ನು ನಡೆಸಿದ್ದಾರೆ ಎಂದು ರಕ್ಷಣಾ ಸಚಿವಾಲಯದ ವರದಿ ಸ್ಪಷ್ಟವಾಗಿ ಹೇಳಿದೆ, ಸತ್ಯ ಹೊರಬಿದ್ದಿದೆ ಎಂದು ಪ್ರತ್ಯಾರೋಪ ಮಾಡಿದರು.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಸುಳ್ಳು ಹೇಳಿದ್ದಾರೆ. ಅನಿಲ್ ಅಂಬಾನಿ ಅವರನ್ನು ಪ್ರಧಾನಿ ಮೋದಿ ಅವರೇ ಆಯ್ಕೆ ಮಾಡಿದ್ದರು ಎಂದು ಫ್ರಾನ್ಸ್ ಮಾಜಿ ಅಧ್ಯಕ್ಷರು ಒಪ್ಪಿಕೊಂಡಿದ್ದಾರೆ. ನಾನು ಮನೋಹರ್ ಪರಿಕ್ಕರ್ ಅವರನ್ನು ಭೇಟಿ ಮಾಡಿದ್ದೆ. ರಫೇಲ್ ಬಗ್ಗೆ ಯಾವುದೇ ಚರ್ಚೆ ಆಗಿರಲಿಲ್ಲ. ಅದು ಅವರ ಆರೋಗ್ಯದ ಬಗ್ಗೆ ಕೇಳುವ ಕಾಳಜಿಯ ಭೇಟಿಯಾಗಿತ್ತಷ್ಟೇ.
ನಾನು ಈ ದೇಶದ ಜನತೆಗೆ ಮನವಿ ಮಾಡುತ್ತೇನೆ. ಪ್ರಧಾನಿ ನಿಮ್ಮ 30,000 ಕೋಟಿ ರೂ. ಹಣವನ್ನು ಕದ್ದಿದ್ದಾರೆ. ಪ್ರಕ್ರಿಯೆಯನ್ನು ಬದಲಿಸಿ ತಮ್ಮ ಸ್ನೇಹಿತನಿಗೆ ನೀಡಿದ್ದಾರೆ. ಈ ಸಂಬಂಧ ಜೆಪಿಸಿ ತನಿಖೆಗೆ ನಾವು ಒತ್ತಾಯಿಸುತ್ತಿದ್ದೇವೆ. ಪ್ರಧಾನಿ ಅನಿಲ್ ಅಂಬಾನಿ ಅವರ ಹೆಸರು ಸೂಚಿಸಿದ್ದರು ಎಂಬುದಾಗಿ ಅಧ್ಯಕ್ಷ ಹೊಲಾಂಡ್ ತಿಳಿಸಿದ್ದರು.
ವಾಯುಪಡೆಯಲ್ಲಿರುವ ನನ್ನ ಸ್ನೇಹಿತರೇ ಈ ಹಣವನ್ನು ನಿಮ್ಮ ರಕ್ಷಣೆಗೆ ಬಳಸಿಕೊಳ್ಳಬಹುದಾಗಿತ್ತು. ಅಥವಾ ನಿಮ್ಮ ಕುಟುಂಬಗಳಿಗೆ ನೀಡಲು ಬಳಸಿಕೊಳ್ಳಬಹುದಾಗಿತ್ತು. ಒಬ್ಬ ಅಧಿಕಾರಿ (ಟಿಪ್ಪಣಿ ಬರೆದ ರಕ್ಷಣಾ ಸಚಿವಾಲಯದ ಅಧಿಕಾರಿ) ಅಂತಹ ಸಂಗತಿಗಳನ್ನು ಚಿಕ್ಕ ಕಾಗದದ ತುಂಡಿನಲ್ಲಿ ಬರೆದುಕೊಳ್ಳುತ್ತಾನೆ ಎಂದರೆ, ಆತ ಯಾವುದೇ ಕಾರಣಕ್ಕೆ ಹಾಗೆ ಮಾಡುತ್ತಾನೆ ಎಂದರ್ಥ. ಪ್ರಧಾನಿ ಅನಿಲ್ ಅಂಬಾನಿಯ ಪ್ರತಿನಿಧಿ ಎಂದು ರಾಹುಲ್ ಆರೋಪಿಸಿದರು.
#WATCH: Rahul Gandhi on PM saying 'Ulta Chor, Chowkidaar ko daante': He's talking about himself?He has got a dual personality?He's now viewing himself as 'Chowkidaar & 'Chor'? He talks to himself at night,one day he becomes 'Chowkidaar' & one day he becomes 'Chor'? Schizophrenia? pic.twitter.com/yhb0GSh4HH
— ANI (@ANI) 8 February 2019
ಸುಪ್ರೀಂಕೋರ್ಟ್ಗೆ ಈ ದಾಖಲೆಗಳು ಸಿಗದ ಕಾರಣ ಅದರ ಇಡೀ ತೀರ್ಪು ಪ್ರಶ್ನಾರ್ಹ. ಅವರು ನ್ಯಾಯಾಲಯಕ್ಕೆ ಸುಳ್ಳು ಹೇಳಿದ್ದಾರೆ. ಸುಪ್ರೀಂಕೋರ್ಟ್ಗೆ ಈ ಕಾಗದಗಳು ದೊರಕಿದ್ದರೆ ಹೀಗೆ ತೀರ್ಪು ನೀಡುತ್ತಿತ್ತೆಂದು ನೀವು ಭಾವಿಸುತ್ತೀರಾ?
ನಾನು ಏನೇನೋ ಬಡಬಡಿಸುವವನಂತೆ ನಿಮಗೆ ಕಾಣಿಸುತ್ತೀನಾ? ಅನಿಲ್ ಅಂಬಾನಿ ಅವರ ಹೆಸರನ್ನು ನಮಗೆ ಸೂಚಿಸಿದ ಪ್ರಧಾನಿ ಕಳ್ಳ ಎಂದು ಹೊಲಾಂಡ್ ಸ್ಪಷ್ಟವಾಗಿ ತಿಳಿಸಿದ್ದಾರೆ. ರಕ್ಷಣಾ ಸಚಿವಾಲಯವೂ ಪ್ರಧಾನಿ ಒಬ್ಬ ಕಳ್ಳ ಎಂದು ಹೇಳುತ್ತಿದೆ. ನಿಮಗೆ ಬಯಸಿದ್ದವರನ್ನು ನೀವು ತನಿಖೆ ಮಾಡಬಹುದು. ತೊಂದರೆಯಿಲ್ಲ. ಆದರೆ, ಇದರ ಬಗ್ಗೆಯೂ ತನಿಖೆ ಮಾಡಿಸಿ. ರಾಬರ್ಟ್ ವಾದ್ರಾ, ಚಿದಂಬರಂ ಅವರ ತನಿಖೆಗೆ ನಿಮ್ಮ ಕಾನೂನು ಅನುವು ಮಾಡಿಕೊಡುತ್ತದೆ. ತೊಂದರೆಯಿಲ್ಲ. ಆದರೆ, ರಫೇಲ್ ಬಗ್ಗೆಯೂ ಉತ್ತರ ನೀಡಿ ಎಂದು ರಾಹುಲ್ ಆಗ್ರಹಿಸಿದ್ದಾರೆ.












Click it and Unblock the Notifications