ನಿರ್ಭಯಾ ದೌರ್ಜನ್ಯಕ್ಕೆ 4 ವರ್ಷ, ಎಲ್ಲಿದೆಯೋ ನ್ಯಾಯ?
ಬೆಂಗಳೂರು, ಡಿಸೆಂಬರ್ 16 : ಭೋಪಾಲ್ ದುರಂತ ಎಂದು ಸಂಭವಿಸಿತ್ತು, ಬಾಬ್ರಿ ಮಸೀದಿ ಧ್ವಂಸ ಎಂದಾಗಿತ್ತು ಎಂಬುದನ್ನು ಮರೆಯಬಹುದು, ಆದರೆ ಡಿಸೆಂಬರ್ 16ರ ದಿನವನ್ನು ಕನಿಷ್ಠ ಮಾನವೀಯತೆ ಇರುವವರು ಬಹುಶಃ ಯಾರೂ ಮರೆಯಲು ಸಾಧ್ಯವಿಲ್ಲ.
ಅಸಲಿಗೆ ಆ ದಿನ ನೆನಪಿನಲ್ಲಿಟ್ಟುಕೊಳ್ಳುವ, ಮತ್ತೆ ಮತ್ತೆ ನೆನಪಿಸಿಕೊಳ್ಳುವ ದಿನವೂ ಅಲ್ಲ. ಯಾಕೆಂದರೆ, ಅದೇ ದಿನ ನಿರ್ಭಯಾಳನ್ನು ಆರು ದುರುಳರು ಚಲಿಸುತ್ತಿರುವ ಬಸ್ಸಿನಲ್ಲಿ ಸಾಮೂಹಿಕವಾಗಿ ಅತ್ಯಾಚಾರ ಗೈದಿದ್ದರು, ಮಾನವೀಯತೆ ಮರೆತು ಮೃಗಗಳಂತೆ ದಾಳಿ ನಡೆಸಿದ್ದರು.[ಗೂಳೂರಿನ ತೋಪಿನಲ್ಲಿ 34 ವರ್ಷದ ವಿಧವೆ ಮೇಲೆ ಗ್ಯಾಂಗ್ ರೇಪ್]
ಇಡೀ ದೇಶವನ್ನೇ ತಲ್ಲಣಗೊಳಿಸಿದ ಘಟನೆಯದು. ಇಂಥ ಹೀನಾಯ ಕೃತ್ಯವನ್ನು ನಾವು ವೃತ್ತಿಜೀವನದಲ್ಲಿ ಕಂಡೇ ಇಲ್ಲ ಎಂದು ಏಮ್ಸ್ ವೈದ್ಯರು ದಂಗು ಬಡಿದಿದ್ದರು. ದುರಾದೃಷ್ಟದ ಸಂಗತಿಯೆಂದರೆ, ನಿರ್ಭಯಾಳ ಕುಟುಂಬಕ್ಕೆ ಇನ್ನೂ ಪೂರ್ತಿಯಾದ ನ್ಯಾಯ ಸಿಕ್ಕಿಲ್ಲ, ನಿರ್ಭಯಾಳ ಆತ್ಮಕ್ಕೆ ಇನ್ನೂ ಶಾಂತಿ ದಕ್ಕಿಲ್ಲ.
ಆ ಆರು ದುರುಳರಲ್ಲಿ ಇಬ್ಬರು ಅಸುನೀಗಿದ್ದರೆ, ಅಪ್ರಾಪ್ತ ಎಂಬ ಕಾರಣಕ್ಕೆ ಒಬ್ಬನಿಗೆ ಜಾಮೀನು ದೊರೆತಿದೆ, ಇನ್ನು ಮೂವರು ಮರಣ ದಂಡನೆ ಶಿಕ್ಷೆಯನ್ನು ಎದುರಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ಮುಂದೆ ಆ ಕೇಸು ಇನ್ನೂ ಪೆಂಡಿಂಗ್. ಎಂದು ಸಿಗುವುದೋ ನ್ಯಾಯ? ಎಂದು ಮಾಯುವುದೋ ಆದ ಗಾಯ? [ಚಲಿಸುತ್ತಿದ್ದ ವಾಹನದಲ್ಲಿ ನಡೆದ ಹತ್ತು ಅತ್ಯಾಚಾರಗಳು]
ಆ ಕರಾಳ ರಾತ್ರಿ
ರಾತ್ರಿ ಸಿನೆಮಾ ನೋಡಿಕೊಂಡು ಸ್ನೇಹಿತನೊಂದಿಗೆ ಮನೆಗೆ ಮರಳುತ್ತಿದ್ದ ನತದೃಷ್ಟ ನಿರ್ಭಯಾ ದುರಾದೃಷ್ಟವಶಾತ್ ಆ ಖಾಲಿ ಬಸ್ಸನ್ನೇರಿದ್ದಳು. ಒಬ್ಬೊಬ್ಬರಾಗಿ ಮುಗಿಬಿದ್ದ ಆ ಜನರು ಆಕೆಯನ್ನು ಹುರಿದು ಮುಕ್ಕಿಬಿಟ್ಟರು, ಕರುಳೆಲ್ಲ ಕಿತ್ತು ಬಿಸಾಡಿದ್ದರು. ಸಾಲದೆಂಬಂತೆ, ಬೆತ್ತಲಾಗಿದ್ದ ಆಕೆಯನ್ನು ಕತ್ತಲಲ್ಲಿ ಬಿಸಾಕಿ ಹೋಗಿದ್ದರು.
ಸಿಕ್ಕಿಬಿದ್ದಿದ್ದರು ಕಾಮಪಿಶಾಚಿಗಳು
ಆ ಘಟನೆ ನಡೆದು ನಾಲ್ಕು ದಿನದಲ್ಲಿ ಪ್ರಮುಖ ಆರೋಪಿ ರಾಮ್ ಸಿಂಗ್, ವಿನಯ್ ಶರ್ಮಾ, ಮುಕೇಶ್ ಮತ್ತು ಪವನ್ ಗುಪ್ತಾ ಬಂಧಿತರಾದರು. ಹದಿನೇಳು ವರ್ಷದ ದುರುಳ ಮೊಹಮ್ಮದ್ ಅಫ್ರೋಜ್ ಮತ್ತು 6ನೇ ಆರೋಪಿ ಅಕ್ಷಯ್ ಮರುದಿನ ಅಂದರೆ ಡಿಸೆಂಬರ್ 21ರಂದು ಸಿಕ್ಕಿಬಿದ್ದರು.
ಸಿಂಗಪುರದಲ್ಲಿ ಆರಿದ 'ಜ್ಯೋತಿ'
ನುರಿತ ವೈದ್ಯರ ದಂಡೇ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ನಿರ್ಭಯಾಳನ್ನು ಉಳಿಸಲು ಶ್ರಮಿಸುತ್ತಿತ್ತು. ಕೊನೆಗೆ ಗತ್ಯಂತರವಿಲ್ಲದೆ ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ಆಕೆಯನ್ನು ದಾಖಲಿಸಲಾಯಿತು. ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 29ರಂದು 'ಜ್ಯೋತಿ' ಆರಿಹೋಯಿತು.
ಆತ್ಮಹತ್ಯೆ ಮಾಡಿಕೊಂಡ ಆರೋಪಿ
ಜನವರಿ 3ರಂದು ಚಾರ್ಜ್ ಶೀಟ್ ಸಲ್ಲಿಸಿ, ಫೆಬ್ರವರಿ 2ರಂದು ಆರೋಪಿಗಳ ಮೇಲೆ ಚಾರ್ಜ್ ಫ್ರೇಂ ಮಾಡಲಾಯಿತು. ಪ್ರಮುಖ ಆರೋಪಿ ರಾಮ್ ಸಿಂಗ್ ಜೈಲಿನಲ್ಲಿಯೇ ಟವೆಲ್ಲಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡ. ಉಳಿದವರಿಗೆ ಸೆಪ್ಟೆಂಬರ್ 23ರಂದು ಮರಣದಂಡನೆ ವಿಧಿಸಲಾಯಿತು.
ಇಷ್ಟೆಲ್ಲ ಆದರೂ ಮಹಿಳೆಯರು ಸುರಕ್ಷಿತವಲ್ಲ
ಭಾರತದಲ್ಲಿ ನಿರ್ಭಯಾಳಂಥ ಘಟನೆ ನಂತರ ಸಾಕಷ್ಟು ನಡೆದಿವೆ. ಮಹಿಳೆಯರ ಮೇಲೆ ಎರಗಲು ಮೃಗಗಳು ಹೊಂಚು ಹಾಕಿ ಕುಳಿತಿವೆ. ಪುಟಾಣಿ ಶಾಲಾ ಮಕ್ಕಳು ಬಲಿಯಾಗುತ್ತಿವೆ. ಏಕೆಂದರೆ, ಕಾನೂನಿನ ಪ್ರಕ್ರಿಯೆ ಅಷ್ಟು ಸಂಕೀರ್ಣವಾಗಿದೆ. ಕಾನೂನಿನ ಹೆದರಿಕೆ ದುರುಳರಿಗೆ ಇಲ್ಲವಾಗಿದೆ. ಎಲ್ಲಿದೆಯೋ ನ್ಯಾಯ ಅಣ್ಣ, ಎಲ್ಲಿದೆಯೋ ನ್ಯಾಯ?