Breaking: ನ್ಯಾಷನಲ್ ಹೆರಾಲ್ಡ್ ಕಚೇರಿ ಮೇಲೆ ಇಡಿ ದಾಳಿ
ನವದೆಹಲಿ, ಆ.02: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿಯನ್ನು ಜಾರಿ ನಿರ್ದೇಶನಾಲಯ ಪ್ರಶ್ನಿಸಿದ ಕೆಲವೇ ದಿನಗಳ ನಂತರ, ತನಿಖಾ ಸಂಸ್ಥೆ ಮಂಗಳವಾರ ಪತ್ರಿಕೆಯ ಕಚೇರಿಗಳು ಸೇರಿದಂತೆ ಸುಮಾರು 10 ಸ್ಥಳಗಳಲ್ಲಿ ದಾಳಿ ನಡೆಸಿದೆ.
ಸೋನಿಯಾ ಗಾಂಧಿ ಕಳೆದ ತಿಂಗಳು ಮೂರು ದಿನಗಳಲ್ಲಿ 12 ಗಂಟೆಗಳ ಕಾಲ ಸುಮಾರು 100 ಪ್ರಶ್ನೆಗಳಿಗೆ ಉತ್ತರಿಸಿದ್ದರು. ಆಕೆಯ ಪುತ್ರ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯನ್ನು ಈ ಹಿಂದೆ ಐದು ದಿನಗಳ ಕಾಲ ವಿಚಾರಣೆ ನಡೆಸಲಾಗಿದ್ದು, ಸುಮಾರು 150 ಪ್ರಶ್ನೆಗಳನ್ನು ಕೇಳಲಾಗಿತ್ತು.
ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ ಗಾಂಧಿ ಮೂರನೇ ಸುತ್ತಿನ ವಿಚಾರಣೆ ಮುಗಿಸಿದ ಜಾರಿ ನಿರ್ದೇಶನಾಲಯ
ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಸ್ಥಾಪಿಸಿದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ನಡೆಸುತ್ತಿರುವ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಅನ್ನು ಯಂಗ್ ಇಂಡಿಯನ್ಸ್ ಸ್ವಾಧೀನಪಡಿಸಿಕೊಂಡಿದೆ. ಇದರಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಆರೋಪಿಸಲಾಗಿದ್ದು, ಇದನ್ನು ನ್ಯಾಷನಲ್ ಹೆರಾಲ್ಡ್ ಪ್ರಕರಣ ಎಂದು ಕರೆಯಲಾಗಿದೆ.
ಎಜೆಎಲ್ನ ಆಸ್ತಿಯಲ್ಲಿ ಯಂಗ್ ಇಂಡಿಯನ್ 800 ಕೋಟಿಗೂ ಹೆಚ್ಚು ಹಣವನ್ನು ತೆಗೆದುಕೊಂಡಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ಇದನ್ನು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಷೇರುದಾರರ ಆಸ್ತಿ ಎಂದು ಪರಿಗಣಿಸಬೇಕು, ಇದಕ್ಕಾಗಿ ಅವರು ತೆರಿಗೆ ಪಾವತಿಸಬೇಕು ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
Recommended Video
ಯಂಗ್ ಇಂಡಿಯನ್ ಲಾಭಕ್ಕಾಗಿ ಇರುವ ಕಂಪನಿಯಲ್ಲ ಎಂದು ಕಾಂಗ್ರೆಸ್ ಪ್ರತಿಪಾದಿಸುತ್ತದೆ. ಇದರಿಂದಾಗಿ ಅಕ್ರಮ ಹಣ ವರ್ಗಾವಣೆ ಪ್ರಶ್ನೆಯೇ ಇಲ್ಲ ಎಂದಿದೆ.
ದಾಳಿ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಹೆರಾಲ್ಡ್ ಕಚೇರಿ ಮುಂದೆ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ಇದನ್ನು ಸೇಡಿನ ರಾಜಕಾರಣ ಎಂದು ಕರೆದಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, "ಹೆರಾಲ್ಡ್ ಹೌಸ್, ಬಹದ್ದೂರ್ ಷಾ ಜಾಫರ್ ಮಾರ್ಗದ ಮೇಲಿನ ದಾಳಿಗಳು ಭಾರತದ ಪ್ರಮುಖ ವಿರೋಧ ಪಕ್ಷವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವಿರುದ್ಧದ ನಿರಂತರ ದಾಳಿಯ ಒಂದು ಭಾಗವಾಗಿದೆ' ಎಂದಿದ್ದಾರೆ.
ಮುಂದುವರೆದು 'ಮೋದಿ ಸರ್ಕಾರದ ವಿರುದ್ಧ ಮಾತನಾಡುವವರ ವಿರುದ್ಧ ಈ ಸೇಡಿನ ರಾಜಕಾರಣವನ್ನು ನಾವು ಬಲವಾಗಿ ಖಂಡಿಸುತ್ತೇವೆ. ನೀವು ನಮ್ಮನ್ನು ಮೌನಗೊಳಿಸಲು ಸಾಧ್ಯವಿಲ್ಲ!' ಎಂದು ಕಿಡಿಕಾರಿದ್ದಾರೆ.