ಸೋನಿಯಾರನ್ನು ಬಂಧಿಸಲು ಮೋದಿಗೆ ಧೈರ್ಯವಿಲ್ಲ : ಕೇಜ್ರಿ
ನವದೆಹಲಿ, ಮೇ 07 : ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣದಲ್ಲಿ 'ಆರೋಪಿ' ಸ್ಥಾನದಲ್ಲಿರುವ ಸೋನಿಯಾ ಗಾಂಧಿಯನ್ನು ಬಂಧಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ 'ಧೈರ್ಯವಿಲ್ಲ' ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮೋದಿ ಮೇಲೆ ಮಾತಿನ ಚಾಟಿ ಬೀಸಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡು ಭ್ರಷ್ಟಾಚಾರಕ್ಕಾಗಿ ಮೈತ್ರಿ ಮಾಡಿಕೊಂಡಿವೆ. ಹೆಲಿಕಾಪ್ಟರ್ ಹಗರಣದಲ್ಲಿ ಸೋನಿಯಾರನ್ನು ಬಿಜೆಪಿ ಬಂಧಿಸುವುದಿಲ್ಲ, ಮೋದಿಯವರ ಶಿಕ್ಷಣಾರ್ಹತೆಯನ್ನು ಕಾಂಗ್ರೆಸ್ ಪ್ರಶ್ನಿಸುವುದಿಲ್ಲ ಎಂದು ಅರವಿಂದ್ ಕೇಜ್ರಿವಾಲ್ ಶನಿವಾರ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡರ ಮೇಲೆ ವಾಗ್ದಾಳಿ ನಡೆಸಿದರು.
"ಇಟಲಿ ಕೋರ್ಟ್ ನೀಡಿದ ತೀರ್ಪಿನಲ್ಲಿ ಸೋನಿಯಾ ಗಾಂಧಿ, ಅಹ್ಮದ್ ಪಟೇಲ್, ಕೆಲ ಕಾಂಗ್ರೆಸ್ಸಿಗರು ಮತ್ತಿತರ ಅಧಿಕಾರಿಗಳ ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ. ಆದರೆ, ಸೋನಿಯಾ ಅವರನ್ನು ಬಂಧಿಸಲು ಮೋದಿಗೆ ಧೈರ್ಯವಿಲ್ಲ, ಎರಡು ಪ್ರಶ್ನೆ ಕೇಳಲೂ ಅವರಿಂದ ಸಾಧ್ಯವಾಗುತ್ತಿಲ್ಲ" ಎಂದು ಕೇಜ್ರಿವಾಲ್ ಕಾಲೆಳೆದಿದರು. [ಪ್ರಧಾನಿ ಮೋದಿ ವಿದ್ಯಾರ್ಹತೆ: ಕೇಜ್ರಿವಾಲ್ ಸಿಡಿಸಿದ ಬಾಂಬ್]
"ಮೋದಿಜಿ ನಿಮ್ಮನ್ನು ಇಂಥ ವಿಷಯಗಳಲ್ಲಿ ಕ್ರಮ ತೆಗೆದುಕೊಳ್ಳಲೆಂದು ಪ್ರಧಾನಿ ಮಾಡಲಾಗಿದೆ, ಇಟಲಿ ಕೋರ್ಟಿಗೆ ಬಿಡಲಿಕ್ಕಲ್ಲ. ನೀವು ಅವರನ್ನು ಬಂಧಿಸಿದ್ದರೆ ನಮ್ಮ ಎದೆ ಕೂಡ 56 ಇಂಚು ಉಬ್ಬುತ್ತದೆ" ಎಂದು ವ್ಯಂಗ್ಯವಾಡಿರುವ ಅವರು, "ಸೋನಿಯಾರನ್ನು ಬಂಧಿಸಲು ಹೆದರಿಕೆಯೇಕೆ?" ಎಂದು ಪ್ರಶ್ನಿಸಿದರು.
ಎಲ್ಲ ಭ್ರಷ್ಟರನ್ನು ಮಟ್ಟ ಹಾಕುತ್ತೇವೆ ಎಂದು ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದ ಮೋದಿ ಸರಕಾರದಿಂದ, ಅಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಹಗರಣದಲ್ಲಿ ಒಂದು ಇಂಚಿನಷ್ಟೂ ತನಿಖೆ ಪ್ರಗತಿ ಹೊಂದಿಲ್ಲ. ಆದರೆ, ಅದೇ ಇಟಲಿ ಸರಕಾರ ತನಿಖೆ ನಡೆಸಿ, ವಿಚಾರಣೆ ಮುಗಿಸಿ, ಲಂಚ ನೀಡಲು ಬಂದವರನ್ನು ಜೈಲಿಗಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಹಿಂದೆ ಅಣ್ಣಾ ಹಜಾರೆ ಹೋರಾಟ ನಡೆಸಿದಾಗ ಕೇಂದ್ರದಲ್ಲಿ ಜನರು ಸರಕಾರದ ಬದಲಾವಣೆ ಬಯಸಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ನಾಣ್ಯದ ಎರಡು ಮುಖ್ಯಗಳು ಎಂದು ಅವರಿಗೆ ಗೊತ್ತಿತ್ತು. ಆದರೂ, ಮೋದಿಜಿ ಮಾಡಿದ ಅತ್ಯದ್ಭುತ ಭಾಷಣಗಳಿಗೆ ಮರುಳಾಗಿ, ಭ್ರಷ್ಟಾಚಾರ ಕೊನೆಗೊಳ್ಳುತ್ತದೆಂದು ಆರಿಸಿ ಕಳಿಸಿದರು" ಎಂದು ಕೇಜ್ರಿವಾಲ್ ವಾಗ್ಬಾಣ ಎಸೆದಿದ್ದಾರೆ. [ಭೀಕರ ಬರ : ಸಿದ್ದರಾಮಯ್ಯ ಜೊತೆ ಮೋದಿ ಸಭೆ]