ಬಿಸಿಯೇರಿದ 'ಚಹಾ ರಾಜಕೀಯ': ಟೀ ಅಂಗಡಿ ಆರಂಭ
ನವದೆಹಲಿ, ಜ.20- ರಾಜಕೀಯ ಚಹಾ ಕಪ್ ನಲ್ಲಿ ಕೋಲಾಹಲ! ಕಾಂಗ್ರೆಸ್ಸಿನ ರಾಜ್ಯಸಭೆ ಸದಸ್ಯ ಮಣಿಶಂಕರ್ ಅಯ್ಯರ್ AICC ಸಮಾವೇಶದಲ್ಲಿ 'ಮೋದಿ ಕಾಂಗ್ರೆಸ್ ಕಚೇರಿಯಲ್ಲಿ ಚಹಾ ಮಾರೋಕ್ಕೆ ಲಾಯಕ್ಕು' ಎಂದು ಜರಿದಿರುವುದು ಬಿಜೆಪಿ ಪಕ್ಷದಲ್ಲಿ ಹೊಸ ಸಂಚಲವನ್ನುಂಟುಮಾಡಿದೆ. ಭಿನ್ನ ಹಾದಿಯಲ್ಲಿ ಮಣಿಶಂಕರ್ ಗೆ ಬುದ್ಧಿ ಕಲಿಸಲು ನಿರ್ಧರಿಸಿದೆ. ಕರ್ನಾಟಕದಲ್ಲಿ ಮೋದಿ ಅಭಿಮಾನಿಗಳು ಸಾರ್ವಜನಿಕ ಸ್ಥಳಗಳಲ್ಲಿ ಚಹಾ ಮಾರಾಟ ಮಾಡುವ ಮೂಲಕ ಮೋದಿ ಬೆಂಬಲಕ್ಕೆ ನಿಂತಿದ್ದಾರೆ.
ಈ ಮಧ್ಯೆ, ಮೋದಿ ಒಬ್ಬ 'ವಿಷಕಾರಿ ಚಹಾದ ಮಾರಾಟಗಾರ' ಎಂದು ಜೆಡಿಯು ಮುಖಂಡ ಕೆಸಿ ತ್ಯಾಗಿ ಕುಟುಕಿದ್ದಾರೆ. ಚಹಾ ಮಾರುವ ವ್ಯಕ್ತಿ ಪ್ರಧಾನಿಯಾಗಲಿ. ಆದರೆ ವಿಷಕಾರಿ ಚಹಾ ಮಾರುವವರು ಈ ದೇಶದ ಪ್ರಧಾನಿಯಾಗಬಾರದು. ಮೋದಿ ಗುಜರಾತ್ ಮೂಲಕ ವಿಷಕಾರಿ ಚಹಾ ಮಾರಾಟ ಮಾಡುತ್ತಿದ್ದಾರೆ' ಎಂದು ತ್ಯಾಗಿ ಟೀಕಿಸಿದ್ದಾರೆ.
ಗಾಂಧಿನಗರ ವರದಿ: ಮಣಿಶಂಕರ್ ಅಯ್ಯರರ 'ಮೋದಿ ಕಾಂಗ್ರೆಸ್ ಸಭೆಯಲ್ಲಿ ಚಹಾ ಮಾರಲಿಕ್ಕೆ ಲಾಯಕ್ಕು' ಎಂದು ಟೀಕಿಸಿದ್ದನ್ನು ಚುನಾವಣಾ ಪ್ರಚಾರದ ಪ್ರಮುಖ ಸಾಧನವಾಗಿ ವಿಭಿನ್ನ ರೀತಿಯಲ್ಲಿ ಬಳಸಿಕೊಳ್ಳಲು ಮೋದಿ ಮುಂದಾಗಿದ್ದಾರೆ. ಇದರಿಂದ 'ಚಹಾ ರಾಜಕೀಯ' ಬಿಸಿಯೇರಿದೆ.
ಮೋದಿ ಚುನಾವಣಾ ಪ್ರಚಾರದ ಉಸ್ತುವಾರಿ ಹೊತ್ತಿರುವ 'ಥಿಂಕ್ ಟ್ಯಾಂಕ್' ಮುಂದಿನ ತಿಂಗಳು ಫೆ 1 ರಿಂದ ಹೊಸ ಚಹಾ ಅಂಗಡಿಗಳನ್ನು ತೆರೆಯಲು ಸಿದ್ಧತೆ ನಡೆಸಿದ್ದಾರೆ. ಪ್ರಚಾರದ ಅಂಗವಾಗಿ ಮೋದಿ ಅವರು ಗುಜರಾತ್ ರಾಜಧಾನಿ ಗಾಂಧಿನಗರದ ಚಹಾ ಅಂಗಡಿಯೊಂದಕ್ಕೆ ಭೇಟಿ ನೀಡಿ ಅದರ ಮಾಲೀಕರೊಂದಿಗೆ ಸಂವಾದ ನಡೆಸಲಿದ್ದಾರೆ.
ಈ ಸಂವಾದವನ್ನು ದೇಶಾದ್ಯಂತ 300 ನಗರಗಳ 1000 ಕ್ಕೂ ಹೆಚ್ಚು ಪ್ರಮುಖ ಚಹಾ ಅಂಗಡಿಗಳಲ್ಲಿ ನೇರ ಪ್ರಸಾರ ಮಾಡಲಾಗುವುದು. ಅಲ್ಲದೆ ಇದೇ ವೇಳೆ ಬೇರೆ ಬೇರೆ ನಗರಗಳ ಚಹಾ ಅಂಗಡಿಗಳ ಮಾಲೀಕರೊಂದಿಗೂ ಮೋದಿ ಸಂವಾದ ( Direct To Home ) ನಡೆಸಲಿದ್ದಾರೆ.
ಇತ್ತ ಮೋದಿ ಚಹಾ ಅಂಗಡಿ ಮಾಲೀಕರೊಂದಿಗೆ ಸಂವಾದ ನಡೆಸಿದರೆ ಉಳಿದ 300 ನಗರಗಳಲ್ಲಿ ಆಯಾ ಪ್ರದೇಶದ ಬಿಜೆಪಿ ನಾಯಕರು ಸ್ಥಳೀಯ ಚಹಾ ಅಂಗಡಿಗಳ ಮಾಲೀಕರೊಂದಿಗೆ ಸಂವಾದ ನಡೆಸುವ ಮೂಲಕ ಟೀಕೆಯನ್ನೇ ಜನಪ್ರಿಯತೆಗೆ ಬಳಸಿಕೊಳ್ಳುವ ಯತ್ನ ಮಾಡಲಿದ್ದಾರೆ.
ಮೋದಿ ಅವರು 5 ಚಾಯ್ ( nukkad ) ಅಡ್ಡಾಗಳಲ್ಲಿ Chai pe charcha with NaMo ಅಂದರೆ 'ಚಹಾ ಮಾರಾಟಗಾರರ ಜತೆ ಮೋದಿ' ಒಂದು ದಿನ ಸಂವಾದವನ್ನೂ ನಡೆಸಲಿದ್ದಾರೆ.
ಗಮನಾರ್ಹವೆಂದರೆ ಎಐಸಿಸಿ ಸಮಾವೇಶ ನಡೆಯುತ್ತಿದ್ದಾಗ ಶುಕ್ರವಾರ ಬೆಳಗ್ಗೆ ಅಯ್ಯರ್ 'ಮೋದಿ ಕಾಂಗ್ರೆಸ್ ಕಚೇರಿಯಲ್ಲಿ ಚಹಾ ಮಾರೋಕ್ಕೆ ಲಾಯಕ್ಕು' ಎಂದಿದ್ದರು.
ಇದಕ್ಕೆ ಕಂಗ್ರೆಸ್ಸಿನ ಯುವನಾಯಕ, ಶೆಹಜಾದೆ ರಾಹುಲ್ ಗಾಂಧಿ ಪ್ರತಿಕ್ರಿಯೆ ಯಾವಾಗ/ ಹೇಗಿತ್ತು ಗೊತ್ತೇ? ಸಂಜೆ ವೇಳೆಗೆ ಬೆಂಕಿ-ಬಿರುಗಾಳಿ ಭಾಷಣಕ್ಕಿಳಿಸಿದ ರಾಹುಲ್ ತಮ್ಮ ಭಾಷಣದ ಮಧ್ಯೆ, 'ಅರೇ ಮಣಿಶಂಕರ್ ಅಯ್ಯರ್ ಸಾಬ್ ಕಹಾ ಹೈ' ಎಂದು ಜೋರಾಗಿ ಕೂಗಿಕರೆದಿದ್ದರು. ಇದು ಸ್ಪಷ್ಟವಾಗಿ 'ಮೋದಿಯನ್ನು ಜರಿದಿದ್ದ ಅಯ್ಯರ್' ಗೆ ಶಹಬ್ಬಾಸ್ ಅನ್ನುವ ಪ್ರಯತ್ನವಾಗಿತ್ತು.
ಇದನ್ನು ಕೇಳಿಸಿಕೊಂಡ ಮಣಿಶಂಕರ್ ಅಯ್ಯರ್ ಆನಂದತುಂದಿಲಿತರಾಗಿದ್ದರು. ಅಕ್ಕಪಕ್ಕದ ಇತರೆ ನಾಯಕರು ರಾಹುಲ್ ರಿಂದ ಶಹಬ್ಬಾಸ್ ಅನ್ನಿಸಿಕೊಂಡ ಅಯ್ಯರ್ ಅವರ ಕೈಕುಲುಕಿ, ಭುಜ ತಟ್ಟಿ ತಾವೂ ಶಹಬ್ಬಾಸ್ ಎಂದಿದ್ದರು!