ಎಚ್ಚೆತ್ತುಕೊಳ್ಳದಿದ್ದರೆ ಬಿಜೆಪಿ ಮುಕ್ತ ಭಾರತ: ಸುಬ್ರಮಣಿಯನ್ ಸ್ವಾಮಿ
ನವದೆಹಲಿ, ಡಿಸೆಂಬರ್ 25: ಒಂದೇ ವರ್ಷದಲ್ಲಿ 5 ರಾಜ್ಯಗಳನ್ನು ಕಳೆದುಕೊಂಡಿರುವ ಬಿಜೆಪಿ ಪಕ್ಷ ಹಾಗೂ ಉನ್ನತ ನಾಯಕರು ಎಚ್ಚೆತ್ತುಕೊಳ್ಳದಿದ್ದರೆ ಬಿಜೆಪಿ ಮುಕ್ತ ಭಾರತವಾಗುವುದರಲ್ಲಿ ಸಂಶಯವಿಲ್ಲ ಎಂದು ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಜಾರ್ಖಂಡ್ ವಿಧಾನಸಭಾ ಸೋಲಿನ ನಂತರ ಮಾತನಾಡಿರುವ ಸ್ವಾಮಿ, ದೇಶದ ಆರ್ಥಿಕತೆಯನ್ನು ಸರಿದಾರಿಗೆ ತರದಿದ್ದಲ್ಲಿ, ಆರ್ಥಿಕ ಕುಸಿತವನ್ನು ತಡೆಯದಿದ್ದಲ್ಲಿ ದೇಶದಲ್ಲಿ ಬಿಜೆಪಿ ಮುಕ್ತ ಭಾರತಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಈಗಿನಿಂದಲೇ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು, ಅಭಿವೃದ್ದಿಯ ಕಡೆ ಗಮನ ಹರಿಸಬೇಕು ಎಂದು ಕಿವಿ ಮಾತು ಹೇಳಿದ್ದಾರೆ. ವಿರೋಧಿಗಳಿಗೆ ಅಸ್ತ್ರವಾಗಬಾರದು, ಈ ಬಗ್ಗೆ ಪ್ರಧಾನಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ.

ಇನ್ನು ಪ್ರಧಾನಮಂತ್ರಿ ಆರ್ಥಿಕ ಸಲಹೆಗಾರರ ಬಗ್ಗೆ ಕೆಂಡಕಾರಿರುವ ಸ್ವಾಮಿ, ಪ್ರಧಾನಿ ಮೋದಿ ಆರ್ಥಿಕ ಸಲಹೆಗಾರರ ಬಗ್ಗೆ ನನಗೆ ಅಷ್ಟೊಂದು ತಿಳಿದಿಲ್ಲ. ಅವರು ದೇಶದ ಆರ್ಥಿಕ ಪರಿಸ್ಥಿತಿಯನ್ನು ಸರಿಯಾಗಿ ವಿವರಿಸದೆ ಕತ್ತಲೆಯಲ್ಲಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ,
ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತು ಅಧಿಕಾರ ಕಳೆದುಕೊಂಡಿದೆ. 2018 ಕ್ಕೆ ಹೋಲಿಸಿದರೆ 2019 ರಲ್ಲಿ ಬಿಜೆಪಿ ದೇಶದಲ್ಲಿ ಶೇ.31 ರಷ್ಟು ಪ್ರದೇಶದಲ್ಲಿ ಅಧಿಕಾರ ಕಳೆದುಕೊಂಡಿದೆ.












Click it and Unblock the Notifications