ಸೌದಿಯಲ್ಲಿ ಹಿಂದೂವನ್ನು ಮುಸ್ಲಿಂ ಎಂದು ಅಂತ್ಯಕ್ರಿಯೆ: ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಪತ್ನಿ
ನವದೆಹಲಿ, ಮಾರ್ಚ್ 16: ಸೌದಿ ಅರೇಬಿಯಾದಲ್ಲಿ ಭಾರತೀಯ ಹಿಂದೂವನ್ನು ಮುಸ್ಲಿಂ ಎಂದು ಪರಿಗಣಿಸಿ ಅಂತ್ಯಕ್ರಿಯೆ ನಡೆಸಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಸೌದಿಯಲ್ಲಿನ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳ ಪ್ರಮಾದದಿಂದ ಹಿಂದೂ ಪ್ರಜೆಯೊಬ್ಬರನ್ನು ಮುಸ್ಲಿಂ ಎಂದು ಪರಿಗಣಿಸಿ ಮುಸ್ಲಿಮರ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಿರುವುದು ಗಮನಕ್ಕೆ ಬಂದಿದೆ.
ದೆಹಲಿ ಮೂಲದ ಸಂಜೀವ್ ಕುಮಾರ್ ಎನ್ನುವವರು ಕಳೆದ ಜನವರಿಯಲ್ಲಿ ಸೌದಿಯಲ್ಲಿ ಮೃತಪಟ್ಟಿದ್ದರು. ಅಂದಿನಿಂದ ಇವತ್ತಿನವರೆಗೆ ಸಂಜೀವ್ ಅವರ ಪಾರ್ಥಿವ ಶರೀರಕ್ಕಾಗಿ ಅವರ ಪತ್ನಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ.

ವಿದೇಶಾಂಗ ಇಲಾಖೆಯಿಂದ ಸಮಪರ್ಕಕ ಉತ್ತರ ಬಾರದ ಹಿನ್ನೆಲೆಯಲ್ಲಿ ಅಂತಿಮವಾಗಿ ದೆಹಲಿ ಹೈಕೋರ್ಟ್ನಲ್ಲಿ ಅವರು ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಕೋರ್ಟ್ಗೆ ಅರ್ಜಿ ಸಲ್ಲಿಸಿದ ಮೇಲೆ ಆಘಾತಕಾರಿ ವಿಚಾರ ತಿಳಿದುಬಂದಿದ್ದು, ಸೌದಿಯಲ್ಲಿನ ರಾಯಭಾರಿ ಅಧಿಕಾರಿಯೊಬ್ಬರು ಸಂಜೀವ್ ಕುಮಾರ್ ಅವರನ್ನು ಮುಸ್ಲಿಂ ಎಂದು ಪರಿಗಣಿಸಿ ಅಲ್ಲಿಯೇ ಇಸ್ಲಾಂ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಿದ್ದರು. ಆ ಬಳಿಕ ಸಂಜೀವ್ ಕುಮಾರ್ ಅವರ ಮರಣೋತ್ತರ ಪರೀಕ್ಷೆ ವರದಿ ಹಾಗೂ ಮಣ್ಣಿನಲ್ಲಿ ಹೂತಿರುವ ಶವವನ್ನು ವಾಪಸ್ ನೀಡಬೇಕೆಂದು ಮನವಿ ಮಾಡಲಾಗಿತ್ತು.
ಆದರೆ ಇದಕ್ಕೂ ಯಾವುದೇ ಸ್ಪಂದನೆ ದೊರೆತಿರಲಿಲ್ಲ. ಇದನ್ನು ದುರಾದೃಷ್ಟಕರ ಎಂದಿರುವ ದೆಹಲಿ ಹೈಕೋರ್ಟ್ ಮಾರ್ಚ್ 18ರ ವಿಚಾರಣೆಗೆ ವಿದೇಶಾಂಗ ಇಲಾಖೆಯ ಉಪ ಕಾರ್ಯದರ್ಶಿಗಿಂತ ಉನ್ನತ ಹುದ್ದೆಯಲ್ಲಿರುವ ಅಧಿಕಾರಿ ಹಾಜರಿರುವಂತೆ ಸೂಚಿಸಿದೆ. ಹಾಗೆಯೇ ಈ ಪ್ರಮಾದಕ್ಕೆ ಕಾರಣರಾಗಿರುವ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದೆ.












Click it and Unblock the Notifications