ದೆಹಲಿ ಶಾಲೆಯಲ್ಲಿ ಹಿಜಾಬ್ ತೆಗೆಯುವಂತೆ ಒತ್ತಾಯ: ಸರ್ಕಾರ ಹೇಳಿದ್ದೇನು?
ನವದೆಹಲಿ, ಫೆಬ್ರವರಿ 25: ಕರ್ನಾಟಕದಲ್ಲಿ ಶುರುವಾದ ಹಿಜಾಬ್ ವಿವಾದ ಇಡೀ ದೇಶವನ್ನೇ ಆವರಿಸಿದೆ. ದೆಹಲಿಯ ಸರ್ಕಾರಿ ಶಾಲೆಯಲ್ಲಿ ಹಿಜಬ್ ತೆಗೆಯುವಂತೆ ಶಿಕ್ಷಕರು ಹೇಳಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬರು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು, ಅಂತಹ ಯಾವುದೇ ನಿರ್ಬಂಧಗಳನ್ನು ನಾವು ವಿಧಿಸಿಲ್ಲ. ಕೆಲವರು ಈ ವಿಚಾರವನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ದೆಹಲಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕಲಿಸಲು ಅತ್ಯುತ್ತಮ ವ್ಯವಸ್ಥೆ ಇದೆ. ಈ ಸಮಸ್ಯೆಯನ್ನು ರಾಜಕೀಯಗೊಳಿಸಲು ಪ್ರಯತ್ನಿಸಲಾಗುತ್ತಿದೆ. ನಮ್ಮ ಶಾಲೆಗಳಲ್ಲಿ ಎಲ್ಲಾ ಧರ್ಮ ಮತ್ತು ಜಾತಿಯ ವಿದ್ಯಾರ್ಥಿಗಳನ್ನು ಗೌರವದಿಂದ ನಡೆಸಿಕೊಳ್ಳಲಾಗುತ್ತದೆ. ನಮ್ಮ ಕಡೆಯಿಂದ ಅವರ ಸಂಪ್ರದಾಯಗಳಿಗೆ ಯಾವುದೇ ನಿರ್ಬಂಧಗಳಿಲ್ಲ. ಈ ಘಟನೆ ಹೇಗೆ ಸಂಭವಿಸಿತು ಎಂದು ನಾನು ಸಹ ವಿಚಾರಿಸಿದೆ. ಆದರೆ ಇಲ್ಲಿಯವರೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಸದ್ಯ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಹಿಜಬ್ ಧರಿಸಿರುವ ಬಾಲಕಿ, ಶಿಕ್ಷಕರು ಈ ಸ್ಕಾರ್ಫ್ ಧರಿಸಿ ತರಗತಿಗೆ ಬರಬೇಡಿ ಎಂದಿದ್ದಾರೆ. ನಿಮ್ಮ ತಾಯಿಯಂತೆ ನೀವು ಆಗಬೇಡಿ. ಸ್ಕಾರ್ಫ್ ಧರಿಸಿ ಶಾಲೆಗೆ ಬರಬೇಡಿ ಎಂದರು.

ಅಲ್ಲದೇ ಇಬ್ಬರು-ಮೂವರು ಹುಡುಗಿಯರಿಗೆ ತಮ್ಮ ತಲೆಯ ಮೇಲಿನ ಸ್ಕಾರ್ಫ್ ತೆಗೆಯುವಂತೆ ತಿಳಿಸಿದ್ದರು ಎಂದು ಆರೋಪಿಸಿದ್ದಾಳೆ. ಆದರೆ ಈ ಕುರಿತಂತೆ ಶಾಲಾ ಅಧಿಕಾರಿಗಳು ವಿದ್ಯಾರ್ಥಿನಿಯ ಪೋಷಕರೊಂದಿಗೆ ಚರ್ಚಿಸಿದ್ದು, ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ತಿಳಿಸಿದ್ದಾರೆ.
ಜನವರಿ 1 ರಂದು ಕರ್ನಾಟಕದ ಉಡುಪಿ ಕಾಲೇಜಿಗೆ ಹಿಜಬ್ ಧರಿಸಿ ಬಂದ ಆರು ವಿದ್ಯಾರ್ಥಿನಿಯರಿಗೆ ಅಧಿಕಾರಿಗಳು ಪ್ರವೇಶವನ್ನು ನಿರಾಕರಿಸಿದರು. ಈ ವೇಳೆ ತರಗತಿಗೆ ಹಿಜಬ್ ಧರಿಸಿ ಹಾಜರಾಗಲು ಪ್ರಾಂಶುಪಾಲರಿಗೆ ವಿದ್ಯಾರ್ಥಿನಿಯರು ಮನವಿ ಮಾಡಿದರು. ಇದಾದ ಬಳಿಕ ರಾಜ್ಯದಲ್ಲಿ ಕೇಸರಿ ಶಾಲು ಹಾಗೂ ಹಿಜಬ್ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿತು.
ಮುಸ್ತಫಾಬಾದ್ನಲ್ಲಿರುವ ದೆಹಲಿಯ ಸರ್ಕಾರಿ ಶಾಲೆಯ ಅಪ್ರಾಪ್ತ ಬಾಲಕಿಯೊಬ್ಬಳು ಶಾಲೆಯಲ್ಲಿ ತನ್ನ ಸ್ಕಾರ್ಫ್ ಅನ್ನು ತೆಗೆದುಹಾಕುವಂತೆ ಶಿಕ್ಷಕರು ಹೇಳಿದ್ದಾರೆ ಎಂದು ಆರೋಪಿಸಿದ್ದಳು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಸದ್ಯ ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮನೀಶ್ ಸಿಸೋಡಿಯಾ ಅವರು, ಎಎಪಿ ಸರ್ಕಾರವು ಎಲ್ಲಾ ಸಂಪ್ರದಾಯಗಳನ್ನು ಗೌರವಿಸುತ್ತದೆ. ಎಲ್ಲಾ ಧರ್ಮಗಳು ಮತ್ತು ಜಾತಿಗಳ ವಿದ್ಯಾರ್ಥಿಗಳನ್ನು ಶಾಲೆಗಳಲ್ಲಿ ಗೌರವದಿಂದ ನಡೆಸಿಕೊಳ್ಳಲಾಗುತ್ತಿದೆ ಎಂದಿದ್ದಾರೆ.












Click it and Unblock the Notifications