ದೇಶೀಯ ಕಂಪನಿ ಹಾಗೂ ಸೇವೆಗೆ ಆದ್ಯತೆ ನೀಡುವ ನಿಯಮ ಬೇಕು: ವಿನಯ್ ಸಹಸ್ರಬುದ್ಧೆ
ನವದೆಹಲಿ,ಫೆಬ್ರವರಿ 10: ದೇಶೀಯ ಕಂಪನಿ ಹಾಗೂ ಸೇವೆಗೆ ಆದ್ಯತೆ ನೀಡುವ ನಿಯಮ ರೂಪಿಸಬೇಕು ಎಂದು ಸಂಸದ ವಿನಯ್ ಸಹಸ್ರಬುದ್ಧೆ ರಾಜ್ಯಸಭೆಗೆ ಒತ್ತಾಯಿಸಿದ್ದಾರೆ.
ಅಮೆರಿಕದ ಹೊಸ ಸರ್ಕಾರ ದೇಶೀಯ ಕಂಪನಿಯ ಉತ್ಪನ್ನಗಳು ಮತ್ತು ಸೇವೆಗಳಿಗೆ ಆದ್ಯತೆ ನೀಡುತ್ತಿರುವ ರೀತಿಯಲ್ಲಿ ಭಾರತದಲ್ಲೂ ಎಲ್ಲಾ ಒಪ್ಪಂದ, ವ್ಯವಹಾರಗಳಲ್ಲೂ ದೇಶೀಯ ಕಂಪನಿ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು ಎಂದರು.
ಸಾರ್ವಜನಿಕ ನೀತಿ ಎಂಬುದು ಒಂದು ಆಕರ್ಷಕ ಕ್ಷೇತ್ರವಾಗಿದ್ದು,ಆ ಕ್ಷೇತ್ರದ ವ್ಯಾಪ್ತಿಗೆ ಬರುವ ಕನ್ಸಲ್ಟೆನ್ಸಿ ಕಂಪನಿಗಳಲ್ಲಿ ಶೇ.80ರಷ್ಟು ಪದವೀಧರರನ್ನು ಉದ್ಯೋಗಕ್ಕೆ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ,ದೇಶೀಯ ಕನ್ಸಲ್ಟೆನ್ಸಿ ಕಂಪನಿಗೆ ಆದ್ಯತೆ ನೀಡಬೇಕು ಎಂಬ ನಿಯಮವನ್ನು ರೂಪಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ವಿನಯ್ ಸಹಸ್ರಬದ್ಧೆ ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಅವರು, ಅಮೆರಿಕದ ಕಂಪನಿಗಳು ತಯಾರಿಸುವ ಉತ್ಪನ್ನಗಳು ಮತ್ತು ಸೇವೆಗಳಿಗೆ ಆದ್ಯತೆ ನೀಡುವಂತೆ ಸೂಚಿಸಿದ್ದಾರೆ.
ಕೈಗಾರಿಕಾ ಸಂಘಟನೆಯ ಅಸೋಚಾಮ್ ಪ್ರಕಾರ, ಈ ಕನ್ಸಲ್ಟೆನ್ಸಿ ಕಂಪನಿಗಳು 2020ರ ವಾರ್ಷಿಕ ವಹಿವಾಟು ಶೇ.27 ಸಾವಿರ ಕೋಟಿ. ಈ ಹಿನ್ನೆಲೆಯಲ್ಲಿ ದೇಶೀಯ ಕಂಪನಿಗಳಿಗೆ ಆದ್ಯತೆ ನೀಡುವ ಅಗತ್ಯವಿದೆ. ಬೃಹದಾಕಾರವಾಗಿ ಬೆಳೆದಿರುವ ಕನ್ಸಲ್ಟೆನ್ಸಿ ಕ್ಷೇತ್ರದಲ್ಲಿ ವಿದೇಶಿ ಕಂಪನಿಗಳ ಪ್ರಾಬಲ್ಯ ಹೆಚ್ಚಾಗಿದೆ.
ಅನುಭವ ಹಾಗೂ ಇನ್ನಿತರೆ ಅರ್ಹತಾ ಮಾನದಂಡಗಳಿಂದಾಗಿ ಸ್ಥಳೀಯ ಸಲಹಾ ಸಂಸ್ಥೆಗಳಿಗೆ ಸಿಗಬೇಕಾದ ಆದ್ಯತೆ ವಿದೇಶಿ ಸಂಸ್ಥೆಗಳ ಪಾಲಾಗುತ್ತದೆ. ಇದರಿಂದ ಸ್ಥಳೀಯ ಕಂಪನಿಗಳು ನಷ್ಟ ಅನುಭವಿಸುತ್ತಿವೆ ಎಂದು ಹೇಳಿದರು.