ಮತ್ತೆ ದೆಹಲಿ ಪೊಲೀಸ್ ಠಾಣೆಗೆ ಹೋದ ಡಿ.ಕೆ.ಶಿವಕುಮಾರ್!
ನವದೆಹಲಿ, ಜನವರಿ 26: ಕೆಲವೇ ತಿಂಗಳುಗಳ ಹಿಂದೆ ಇಡಿ ಯಿಂದ ಬಂಧಿತರಾಗಿ ತಿಹಾರ್ ಜೈಲಿನ ವಾಸ ಅನುಭವಿಸಿ ಬಂದಿರುವ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಮತ್ತೆ ಪೊಲೀಸ್ ಠಾಣೆಗೆ ಹೋಗಿದ್ದಾರೆ.
ಹೌದು, ದೆಹಲಿಯ ಪೊಲೀಸ್ ಠಾಣೆಗೆ ಹೋಗಿರುವ ಡಿ.ಕೆ.ಶಿವಕುಮಾರ್ ಅಲ್ಲಿ ಪೊಲೀಸರೊಂದಿಗೆ ಚಿತ್ರ ತೆಗೆಸಿಕೊಂಡಿದ್ದಾರೆ. ಆದರೆ ಆತಂಕ ಪಡುವ ಅವಶ್ಯಕತೆಯಿಲ್ಲ, ಡಿಕೆಶಿ ಪೊಲೀಸ್ ಠಾಣೆಗೆ ಹೋಗಿರುವುದು 'ಹಾಗೆ ಸುಮ್ಮನೆ' ಅಷ್ಟೆ.
ಕಳೆದ ಸೆಪ್ಟೆಂಬರ್ ನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿದ್ದರು. ಆ ವೇಳೆ ಕೆಲವು ಪೊಲೀಸ್ ಠಾಣೆಗಳಲ್ಲಿ ಡಿ.ಕೆ.ಶಿವಕುಮಾರ್ ಇರಬೇಕಾಗಿತ್ತು. ಆ ಪೊಲೀಸ್ ಠಾಣೆಗಳಿಗೆ ಈಗ ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ್ದಾರೆ.

ತುಘಲಕ್ ರಸ್ತೆ ಹಾಗೂ ಖಾನ್ ಮಾರ್ಕೆಟ್ ಠಾಣೆಗಳಿಗೆ ಇಂದು ಭೇಟಿ ನೀಡಿದ ಡಿ.ಕೆ.ಶಿವಕುಮಾರ್, ಬಂಧನದ ವೇಳೆ ತಮ್ಮೊಂದಿಗೆ ವಿನಯದಿಂದ ನಡೆದುಕೊಂಡ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.
ಸೆಪ್ಟೆಂಬರ್ ಮೂರರಂದು ದೆಹಲಿಯಲ್ಲಿ ಬಂಧನಕ್ಕೆ ಒಳಗಾಗಿದ್ದ ಡಿ.ಕೆ.ಶಿವಕುಮಾರ್ ಅವರು ನೂರು ದಿನಗಳ ಕಾಲ ತಿಹಾರ್ ಜೈಲಿನಲ್ಲಿ ಸೆರೆವಾಸ ಅನುಭವಿಸಿ ನಂತರ ಜಾಮೀನಿನ ಮೇಲೆ ಹೊರಗೆ ಬಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಮುಖ ಅಭ್ಯರ್ಥಿ ಆಗಿರುವ ಡಿ.ಕೆ.ಶಿವಕುಮಾರ್ ಹೈಕಮಾಂಡ್ ನ ನಾಯಕರನ್ನು ಭೇಟಿ ಆಗುವ ಸಲುವಾಗಿ ಕೆಲ ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.












Click it and Unblock the Notifications