ಡಿಕೆ ಶಿವಕುಮಾರ್ಗೆ ಸೆಪ್ಟೆಂಬರ್ 25ರವರೆಗೂ ಜೈಲು ವಾಸ
ನವದೆಹಲಿ, ಸೆಪ್ಟೆಂಬರ್ 21: ಅಕ್ರಮ ಹಣ ವರ್ಗಾವಣೆ, ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿಕೆ ಶಿವಕುಮಾರ್ ಸಲ್ಲಿಸಿರುವ ಜಾಮೀನು ಅರ್ಜಿ ಕುರಿತ ತೀರ್ಪು ಸೆ.25ರಂದು ಹೊರಬೀಳಲಿದೆ.
ಅಂದು ಮಧ್ಯಾಹ್ನ 3.30ಕ್ಕೆ ತೀರ್ಪು ಹೊರಬೀಳಲಿದೆ, ಅಲ್ಲಿಯವರೆಗೂ ಡಿ.ಕೆ.ಶಿವಕುಮಾರ್ ಜೈಲುವಾಸ ಅನುಭವಿಸಲಿದ್ದಾರೆ.
ಮೂರು ದಿನಗಳ ಕಾಲ ನಡೆದ ವಾದ-ಪ್ರತಿವಾದ ಅಂತ್ಯಗೊಂಡ ನಂತರ ನ್ಯಾಯಾಧೀಶರು ಈ ಆದೇಶ ನೀಡಿದ್ದಾರೆ. ಭೋಜನ ವಿರಾಮದ ನಂತರ ತೀರ್ಪು ಪ್ರಕಟಣೆಯ ದಿನಾಂಕ ಪ್ರಕಟಿಸಲಾಗುವುದು ಎಂದು ನ್ಯಾಯಾಧೀಶರು ತಿಳಿಸಿದರು. ಅದರಂತೆ ಭೋಜನ ವಿರಾಮದ ನಂತರ ಬಂದ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್, ಸೆಪ್ಟೆಂಬರ್ 25 ತೀರ್ಪು ಪ್ರಕಟಿಸಲಾಗುವುದು ಎಂದರು.

ಸೆಪ್ಟೆಂಬರ್ 3ರಂದು ಡಿಕೆಶಿ ಬಂಧನವಾಗಿತ್ತು
ಡಿಕೆ ಶಿವಕುಮಾರ್ ಅವರನ್ನು ಸೆಪ್ಟೆಂಬರ್ 3ರಂದು ಇ.ಡಿ. ಅಧಿಕಾರಿಗಳು ಬಂಧಿಸಿದ್ದರು, ಅದಾದ ಬಳಿಕ ಅನಾರೋಗ್ಯವಿದ್ದ ಕಾರಣ ಅವರು ಆಸ್ಪತ್ರೆ ದಾಖಲಾಗಿದ್ದರು. ಅಧಿಕಾರಿಗಳಿಗೆ ಯಾವುದೇ ಉತ್ತರ ಸಿಕ್ಕಿರಲಿಲ್ಲ. ಬಳಿಕ ಸೆ.13ರಂದು ಮತ್ತೆ ಐದು ದಿನಗಳ ಕಾಲ ಇಡಿ ವಶಕ್ಕೆ ನೀಡಲಾಗಿತ್ತು. ಆಗಲೂ ಅವರು ಬಂಧನದ ದಿನಗಳನ್ನು ಆಸ್ಪತ್ರೆಯಲ್ಲೇ ಕಳೆಯುವಂತಾಯಿತು.
ಬಳಿಕ ಕೋರ್ಟ್ ಅವರನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಿ ತಿಹಾರ್ ಜೈಲಿಗೆ ಕಳುಹಿಸಿತು.
ಡಿಕೆ ಶಿವಕುಮಾರ್ ಅವರ ಜಾರಿ ನಿರ್ದೇಶನಾಲಯ ಕಸ್ಟಡಿ ಅವಧಿ ಮುಗಿದ ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ಕಳೆದ ಮಂಗಳವಾರ ಡಿಕೆ 14 ದಿನಗಳ ಕಾಲ (ಅಕ್ಟೋಬರ್ 1ರವರೆಗೆ) ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿತ್ತು.

ಡಿಕೆ ನಿವಾಸ, ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ
ಡಿಕೆ ಶಿವಕುಮಾರ್ ಅವರ ನಿವಾಸ, ಕಚೇರಿಗಳ ಮೇಲೆ ಆಗಸ್ಟ್ 1, 2017ರಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಡಿಕೆಶಿಗೆ ಸೇರಿದ್ದ ಒಟ್ಟು 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಹೊಸದಿಲ್ಲಿಯ ಡಿಕೆಶಿ ನಿವಾಸದ ಮೇಲೂ ದಾಳಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ 8.9 ಕೋಟಿ ರೂ. ನಗದು ಪತ್ತೆಯಾಗಿತ್ತು.

ಪ್ರತಿ ದಿನ 8-9 ತಾಸುಗಳ ಕಾಲ ಶಿವಕುಮಾರ್ ವಿಚಾರಣೆ
ಪ್ರತಿ ದಿನ 8-9 ಗಂಟೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ, ಆದರೆ 4 ಗಂಟೆ ಮಾತ್ರ ಡಿಕೆಶಿ ಉತ್ತರ ಕೊಟ್ಟಿದ್ದಾರೆ. ವೈಟ್ ಯಾವಾಗಲೂ ವೈಟ್, ಬ್ಲಾಕ್ ಯಾವಾಗಲೂ ಬ್ಲಾಕ್ , ಪಿಎಂಎಲ್ ಕಾಯ್ದೆಯಡಿ ಕೆಲವು ವಿಷಯಗಳು ನಿಮ್ಮ ಗಮನಕ್ಕೆ ಇರುತ್ತವೆ. ಸೆಕ್ಷನ್ 53ರ ಪ್ರಕಾರ ಆರೋಪಿ ಉತ್ತರ ನೀಡುವುದರಿಂದ ತಪ್ಪಿಸಿಕೊಳ್ಳುವ ಹಾಗಿಲ್ಲ ಎಂದು ಇಡಿ ಪರ ವಕೀಲ ನಟರಾಜ್ ಹೇಳಿದ್ದಾರೆ.

ಯಾರದ್ದೋ ಅಕೌಂಟ್ ಡಿಕೆಶಿಯದ್ದು ಎಂದರೆ ಹೇಗೆ?
ಅಧಿಕಾರಿಗಳೇ ಊಹೆಯಿಂದ ಹೊರಬನ್ನಿ, ಬೇರೆಯವರ ಅಕೌಂಟ್ನ್ನು ಡಿಕೆಶಿ ಅಕೌಂಟ್ ಎಂದರೆ ಹೇಗೆ, ಭಯೋತ್ಪಾದನೆ, ಅತ್ಯಾಚಾರ ಕೇಸುಗಳಲ್ಲಿ ಜಾಮೀನು ಸಿಗದಿದ್ದರೆ ಓಕೆ ಆದರೆ ಇದು ಅಂತಹ ಪ್ರಕರಣವಲ್ಲ, ಸಾಕ್ಷ್ಯನಾಶ ಆರೋಪ ಹೊರಿಸಿ ಅವರೇ ಸಾಕ್ಷ್ಯವನ್ನು ತಿರುಚುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ಅಧಿಕಾರಿಗಳು ಎಲ್ಲಾ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ಇನ್ಯಾವ ಸಾಕ್ಷ್ಯಗಳನ್ನು ನಾವು ತಿರುಚಲು ಸಾಧ್ಯ ಅಥವಾ ಪ್ರಭಾವ ಬೀರಲು ಸಾಧ್ಯ ಎಂದು ಡಿಕೆಶಿ ಪರ ವಕೀಲ ಅಭಿಷೇಕ ಮನುಸಿಂಘ್ವಿ ಪ್ರಶ್ನಿಸಿದ್ದಾರೆ.












Click it and Unblock the Notifications