ಕಾಂಗ್ರೆಸ್ ಟಿಕೆಟ್ ಹಂಚಿಕೆ ಕಸರತ್ತು ಎಲ್ಲಿಗೆ ಬಂತು?
ನವದೆಹಲಿ, ಫೆ.18 : ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್ ಕರ್ನಾಟಕದ 13 ಕ್ಷೇತ್ರಗಳ ಅಭ್ಯರ್ಥಿಗಳನ್ನು ಸೋಮವಾರ ಬಹುತೇಕ ಅಂತಿಮಗೊಳಿಸಿದೆ. ಎರಡು ಕ್ಷೇತ್ರಗಳಲ್ಲಿ ಅಮೆರಿಕಾ ಮಾದರಿಯಲ್ಲಿ ಆಂತರಿಕ ಚುನಾವಣೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕುರಿತು ಮರು ಪರಿಶೀಲಿಸಲು ನಿರ್ಧರಿಸಲಾಗಿದೆ.
ಸೋಮವಾರ ನವದೆಹಲಿಯಲ್ಲಿರುವ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಕೇಂದ್ರ ಚುನಾವಣಾ ಸಮತಿ ಸಭೆ ನಡೆಯಿತು. ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯಲ್ಲಿ 9 ಮಂದಿ ಹಾಲಿ ಸಂಸದರು ಸೇರಿದಂತೆ 13 ಜನರಿಗೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಲು ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ಆದರೆ, ಸಂಸತ್ ಅಧಿವೇಶನದ ಬಳಿಕ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಆದರೆ, ಹೆಚ್ಚು ಆಕಾಂಕ್ಷಿಗಳಿರುವ ಕ್ಷೇತ್ರಗಳ ಅಭ್ಯರ್ಥಿಗಳನ್ನು ಇನ್ನೂ ಪಕ್ಷ ಅಂತಿಮಗೊಳಿಸಿಲ್ಲ. [ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ]
ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿರುವ ಬೆಂಗಳೂರು ಉತ್ತರ ಹಾಗೂ ಮಂಗಳೂರು ಲೋಕಸಭಾ ಕ್ಷೇತ್ರಗಳಿಗೆ ಅಮೆರಿಕ ಮಾದರಿಯಲ್ಲಿ ಆಂತರಿಕ ಚುನಾವಣೆ ನಡೆಸುವ ವಿಷಯದ ಕುರಿತು ಹೈಕಮಾಂಡ್ ಮರುಚಿಂತನೆ ಆರಂಭಿಸಿದೆ. ಆದ್ದರಿಂದ ಆಂತರಿಕ ಚುನಾವಣೆ ನಡೆಯುವ ಕುರಿತು ಶೀಘ್ರದಲ್ಲೇ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ. [ಕಾಂಗ್ರೆಸ್ ಪಾಲಿಗೆ ಕಗ್ಗಂಟಾದ ಕ್ಷೇತ್ರಗಳು]
ಸಭೆಯಲ್ಲಿ ಒಂಬತ್ತು ಮಂದಿ ಹಾಲಿ ಸಂಸದರು ಹಾಗೂ ಹೆಚ್ಚು ಪೈಪೋಟಿಯಿಲ್ಲದ ನಾಲ್ಕು ಕ್ಷೇತ್ರಗಳಾದ ಬೆಂಗಳೂರು ದಕ್ಷಿಣ (ನಂದನ್ ನಿಲೇಕಣಿ), ಬಳ್ಳಾರಿ ( ಎನ್.ವೈ.ಹನುಮಂತಪ್ಪ) ದಾವಣಗೆರೆ (ಎಸ್.ಎಸ್.ಮಲ್ಲಿಕಾರ್ಜುನ್) ಹಾಗೂ ಬೆಳಗಾವಿ (ಲಕ್ಷ್ಮೀ ಹೆಬ್ಬಾಳಕರ್) ಅವರಿಗೆ ಟಿಕೆಟ್ ನೀಡುವ ಕುರಿತು ಚರ್ಚೆ ನಡೆಸಲಾಗಿದ್ದು, ಇವರಿಗೆ ಟಿಕೆಟ್ ದೊರೆಯುವುದು ಬಹುತೇಕ ಖಚಿತವಾಗಿದೆ.
ಪೂಜಾರಿ ಅಸಮಾಧಾನ ಗೊಂಡಿದ್ದಾರೆ : ಮಂಗಳೂರು ಕ್ಷೇತ್ರದ ಸ್ಥಿತಿಯನ್ನು ಸಿಎಂ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಅವರು ಸೋನಿಯಾ ಗಾಂಧಿ ಅವರ ಗಮನಕ್ಕೆ ತಂದಿದ್ದಾರೆ. ಕ್ಷೇತ್ರದಲ್ಲಿ ಜರ್ನಾದನ ಪೂಜಾರಿ ಅವರ ಒಂದೇ ಹೆಸರು ಪ್ರಸ್ತಾಪಗೊಂಡಿತ್ತು. ಅಂತಿಮ ಹಂತದಲ್ಲಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರ ಪುತ್ರ ಹರ್ಷ ಮೊಯ್ಲಿ ಟಿಕೆಟ್ಗಾಗಿ ಪೈಪೋಟಿಗೆ ಇಳಿದರು. ಆದ್ದರಿಂದ ಕ್ಷೇತ್ರದಲ್ಲಿ ಆಂತರಿಕ ಚುನಾವಣೆ ನಡೆಸಲು ನಿರ್ಧರಿಸಲಾಯಿತು ಎಂದು ಹೇಳಿದ್ದಾರೆ.
ಪಕ್ಷದ ಹಿರಿಯ ನಾಯಕ ಜನಾರ್ದನ ಪೂಜಾರಿ ಈ ಬೆಳವಣಿಗೆಗಳಿಂದ ಅಸಮಾಧಾನಗೊಂಡಿದ್ದಾರೆ. ಆದ್ದರಿಂದ, ಹೈಕಮಾಂಡ್ ಪೂಜಾರಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮನವೊಲಿಸಬೇಕು ಎಂದು ಮಾಹಿತಿ ನೀಡಿದ್ದಾರೆ. ಕ್ಷೇತ್ರದಲ್ಲಿ ಆಂತರಿಕ ಚುನಾವಣೆ ನಡೆಸುವ ಕುರಿತು ಮತ್ತೊಮ್ಮೆ ಆಲೋಚನೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. [ಜನಾರ್ದನ ಪೂಜಾರಿ ಪರ ಬ್ಯಾಟಿಂಗ್]
ಮಾರ್ಚ್ 3 ರಂದು ಪಟ್ಟಿ ನಿರೀಕ್ಷೆ : ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಮಾರ್ಚ್ 3ರಂದು ಹೈಕಮಾಂಡ್ನ ಹಿರಿಯ ನಾಯಕರ 2ನೇ ಸಭೆ ನಡೆಯಲಿದ್ದು, ನಂತರ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಚುನಾವಣಾ ಸಮಿತಿ ಸಭೆಯ ಬಳಿಕ ಹೇಳಿದ್ದಾರೆ. [ಕರ್ನಾಟಕದಲ್ಲಿ ರಾಹುಲ್ ಗಾಂಧಿ ರೋಡ್ ಶೋ]
ಅಭ್ಯರ್ಥಿಗಳ ಪಟ್ಟಿ : ಹಾಲಿ 9 ಮಂದಿ ಸಂಸದರಿಗೆ ಟಿಕೆಟ್ ನೀಡಲು ಹೈಕಮಾಂಡ್ ಒಪ್ಪಿಗೆ ನೀಡಿದೆ ಎಂದು ತಿಳಿದುಬಂದಿದೆ. ಅಭ್ಯರ್ಥಿಗಳ ಪಟ್ಟಿ ಹೀಗಿದೆ. ಗುಲ್ಬರ್ಗ (ಮಲ್ಲಿಕಾರ್ಜುನ ಖರ್ಗೆ) ಬೀದರ್ (ಧರ್ಮಸಿಂಗ್ ) ಚಿಕ್ಕಬಳ್ಳಾಪುರ (ವೀರಪ್ಪ ಮೊಯ್ಲಿ) ಕೋಲಾರ (ಕೆ.ಎಚ್.ಮುನಿಯಪ್ಪ), ಮೈಸೂರು ( ಎಚ್.ವಿಶ್ವನಾಥ್), ಚಾಮರಾಜನಗರ (ಧ್ರುವನಾರಾಯಣ) ಉಡುಪಿ-ಚಿಕ್ಕಮಗಳೂರು (ಕೆ.ಜಯಪ್ರಕಾಶ್ ಹೆಗ್ಡೆ ) ಬೆಂಗಳೂರು ಗ್ರಾಮಾಂತರ (ಡಿಕೆ ಸುರೇಶ್) ಮಂಡ್ಯ ರಮ್ಯಾ.












Click it and Unblock the Notifications