75 ನೇ ಸ್ವಾತಂತ್ರ್ಯ ದಿನಾಚರಣೆ: ಕಾಂಗ್ರೆಸ್ನಿಂದ ಭಾರತ್ ಜೋಡೋ ಯಾತ್ರೆ
ನವದೆಹಲಿ, ಜುಲೈ 15: 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ದಿನಾಚರಣೆ ಭಾರತ ಹಾಗೂ ಕಾಂಗ್ರೆಸ್ನ ಆಸ್ತಿಯಾಗಿದೆ. ಮುಂಬರುವ ಆಗಸ್ಟ್ 15ರಂದು ವರಿಷ್ಠರ ಸೂಚನೆ ಮೇರೆಗೆ ಬೆಂಗಳೂರಿನಲ್ಲಿ ಬೃಹತ್ ಕಾರ್ಯಕ್ರಮ ನಡೆಸಲಿದ್ದೇವೆ. ಈ ಪ್ರಯುಕ್ತ ಆಗಸ್ಟ್ 1ರಿಂದ 10ರವರೆಗೆ ಪ್ರತಿ ಜಿಲ್ಲೆಯಲ್ಲಿ 75ಕಿ.ಮೀ. ಪಾದಾಯತ್ರೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಈ ಕುರಿತು ದೆಹಲಿಯಲ್ಲಿ ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ಅಂಧು ಗಾಂಧೀಜಿ ಅವರು ನಾಯಕತ್ವ ವಹಿಸಿದ್ದರು. ಈ ಅಮೃತ ಮಹೋತ್ಸವ ದೇಶ ಹಾಗೂ ಕಾಂಗ್ರೆಸ್ನ ಆಸ್ತಿ ಎಂದರು.
ಪಾದಯಾತ್ರೆ ಜವಾಬ್ದಾರಿಯನ್ನು ಶಾಸಕರು, ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರುಗಳಿಗೆ ವಹಿಸಲಾಗಿದೆ. ಸಾಕಷ್ಟು ದಿನಗಳಿಂದ ಯಾವ ಭಾಗದಿಂದ ರಾಜ್ಯಕ್ಕೆ ಯಾತ್ರೆ ಪ್ರವೇಶಿಸಬೇಕು ಎಂಬ ಚರ್ಚೆ ಇತ್ತು. ಮುಳಬಾಗಿಲು, ಹೊಸೂರು, ಚಾಮರಾಜನಗರ, ಮಂಗಳೂರು ಕಡೆಗಳಿಂದ ಈ ಯಾತ್ರೆ ರಾಜ್ಯ ಪ್ರವೇಶಿಸುವ ಅವಕಾಶ ಇತ್ತು. ಅಂತಿಮವಾಗಿ ಕೇರಳದ ವಯನಾಡು ಮಾರ್ಗವಾಗಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಮೂಲಕ ರಾಜ್ಯ ಪ್ರವೇಶಿಸುವುದು ಎಂದು ತೀರ್ಮಾನವಾಗಿದೆ ಎಂದು ಭಾರತ್ ಜೋಡೋ ಕಾರ್ಯಕ್ರಮ ಕುರಿತ ಪ್ರಶ್ನೆಗೆ ಅವರು ಉತ್ತರಿಸಿದರು.

ಪಾದಯಾತ್ರೆ: ರಾಹುಲ್ ಗಾಂಧಿ 40ಕಿ.ಮೀ. ನಡೆಯಲಿದ್ದಾರೆ
ಕರ್ನಾಟಕ ಕನಿಷ್ಠ 21 ದಿನ ಪಾದಯಾತ್ರೆ ನಡೆಯಲಿದೆ. ಇದಕ್ಕಿಂತಲೂ ಹೆಚ್ಚು ದಿನ ನಡೆಯಬಹುದು. ಕೆಲವು ದಿನ 24-25 ಕಿ.ಮೀ. ನಿಗದಿ ಮಾಡಲಾಗಿದೆ. ನಮ್ಮ ಅನುಭವಗಳ ಮೇಲೆ ಒಂದಷ್ಟು ಸಲಹೆಗಳನ್ನು ನೀಡಿದ್ದೇವೆ. ರಾಹುಲ್ ಗಾಂಧಿ ಅವರು ನಿತ್ಯ 40 ಕಿ.ಮೀ ನಡೆಯಲು ತಯಾರಿದ್ದಾರೆ. ಅಷ್ಟು ನಡೆಯಲು ಇತರರಿಗೆ ಸಾಧ್ಯವಿಲ್ಲ. ಹೀಗಾಗಿ ನಾವು ನಿತ್ಯ 20 ಕಿ.ಮೀ. ನಷ್ಟು ಪಾದಯಾತ್ರೆ ಕೈಗೊಳ್ಳಲಿದ್ದೇವೆ ಎಂದು ವಿವರಿಸಿದರು.
ಭಾರತ್ ಜೋಡೋ ಯಾತ್ರೆಯು ಕರ್ನಾಟಕದ ಬಳ್ಳಾರಿ ಮೂಲಕ ಆಂಧ್ರ ಪ್ರದೇಶಕ್ಕೆ ಹೋಗಿ ರಾಯಚೂರು ಮೂಲಕ ತೆಲಂಗಾಣ ರಾಜ್ಯ ಪ್ರವೇಶ ಮಾಡಲಿದೆ. ಪಾದಯಾತ್ರೆ ನಕ್ಷೆ ವಿಚಾರ ನಮ್ಮ ತೀರ್ಮಾನಕ್ಕೆ ಬಿಟ್ಟಿದ್ದು, ನಮ್ಮ ನಾಯಕರ ಜತೆ ತೀರ್ಮಾನಿಸಿ ನಂತರ ಅದನ್ನು ಬಹಿರಂಗಪಡಿಸುತ್ತೇನೆ. ರಾಜ್ಯದಲ್ಲಿ ಒಟ್ಟು 510 ಕಿ.ಮೀ ಗೂ ಹೆಚ್ಚು ದೂರ ಸಾಗಲಿದೆ.

ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಭಾಗಿ
ಶನಿವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಆನ್ಲೈನ್ ಮೂಲಕ ರಾಜ್ಯ ಕಾಂಗ್ರೆಸ್ ನಾಯಕರ ಜತೆ ಚರ್ಚಿಸಲಿದ್ದಾರೆ. ಜುಲೈ 23ರ ನಂತರ ಒಂದಷ್ಟು ಮಾಹಿತಿ ಬಹಿರಂಗಗೊಳ್ಳಲಿವೆ. ಪಾದಯಾತ್ರೆಯಲ್ಲಿ ಯಾರೆಲ್ಲಾ ಭಾಗವಹಿಸುತ್ತಾರೆ ಎಂಬುದರ ಬಗ್ಗೆ ಎಲ್ಲ ನಾಯಕರು ಕೂತು ಚರ್ಚಿಸುತ್ತೇವೆ. ಎಲ್ಲ ರಾಜ್ಯದಿಂದಲೂ ರಾಹುಲ್ ಗಾಂಧಿ ಅವರ ಜತೆ ಯಾರೆಲ್ಲಾ ಹೆಜ್ಜೆ ಹಾಕಬೇಕು ಎಂಬ ಪಟ್ಟಿ ಸಿದ್ಧಪಡಿಸುತ್ತೇವೆ. ನಾವು ನಮ್ಮ ರಾಜ್ಯದಲ್ಲಿ ನಡೆಯುತ್ತೇವೆ. ಇದು ದೇಶದ ಕಾರ್ಯಕ್ರಮ ಎಂದು ತಿಳಿಸಿದರು.

ಡಿಕೆಶಿ ಕಾರ್ಯಕ್ರಮ ಇಲ್ಲ
ಸಿದ್ದರಾಮೋತ್ಸವ ಕಾರ್ಯಕ್ರಮ ಕುರಿತು ಮಾತನಾಡಿದ ಅವರು, "ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರ ಕಾರ್ಯಕ್ರಮ ಚರ್ಚೆ ಆಗುತ್ತಿದೆ. ನನ್ನದು ಯಾವುದೇ ಕಾರ್ಯಕ್ರಮ ಇಲ್ಲ. ನನಗೆ ಆ.15 ರ ಸ್ವಾತಂತ್ರ್ಯ ನಡಿಗೆ ಹಾಗೂ ಪ್ರತಿ ಜಿಲ್ಲೆಯಲ್ಲಿನ 75 ಕಿ.ಮೀ ಪಾದಯಾತ್ರೆ ಹಾಗೂ ಭಾರತ ಜೋಡೋ ಯಾತ್ರೆ ಮಾತ್ರ ಇದೆ. ಬಿಜೆಪಿಯನ್ನು ಕಿತ್ತೊಗೆಯಲು ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ," ಎಂದರು.

ಪಕ್ಷಕ್ಕೆ ಅಭಿಮಾನ ತೋರಿದರೆ ಸಾಕು
"ನನ್ನ ಕಾರ್ಯಕ್ರಮ ಮಾಡಬೇಕು ಎಂಬುದು ಕಾರ್ಯಕರ್ತನ ಅಭಿಪ್ರಾಯ. ನಾನು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ನನ್ನ ವಿಚಾರಕ್ಕೆ ಯಾರೂ ಬರುವುದು ಬೇಡ. ನೀವು ಬರುವುದಾದರೆ ಪಕ್ಷದ ವಿಚಾರಕ್ಕೆ ಬನ್ನಿ. ನನ್ನ ಬಗ್ಗೆ ಯಾರೂ ಅಭಿಮಾನ ತೋರುವುದು ಬೇಡ. ನೀವು ಕಾಂಗ್ರೆಸ್ಗೆ ಅಭಿಮಾನ ತೋರಿದರೆ ನನಗೆ ಅಭಿಮಾನ ತೋರಿದಂತೆ," ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.












Click it and Unblock the Notifications