ಸೇವೆಯ ಕೊನೆಯ ದಿನ ಭಾವುಕ ಮಾತುಗಳನ್ನಾಡಿದ ನ್ಯಾಯಮೂರ್ತಿ ದೀಪಕ್ ಮಿಶ್ರಾ
ನವದೆಹಲಿ, ಅಕ್ಟೋಬರ್ 01: ತಮ್ಮ ಅಧಿಕಾರವಧಿಯಲ್ಲಿ ಕಠಿಣ ತೀರ್ಪುಗಳನ್ನು ನೀಡಿ ಖ್ಯಾತರಾಗಿದ್ದ ಸುಪ್ರಿಂಕೋರ್ಟ್ ಮುಖ್ಯ ನ್ಯಾಯ ಮೂರ್ತಿ ದೀಪಕ್ ಮಿಶ್ರಾ ಅವರು ಅಧಿಕಾರದ ಕೊನೆಯ ದಿನ ಬಹಳ ಭಾವುಕರಾಗಿದ್ದರು.
ಕೊನೆಯ ದಿನ 24 ನಿಮಿಷಗಳ ವಿಶೇಷ ಕಲಾಪ ನಡೆಸಿದ ಅವರು, ಕಲಾಪ ಉದ್ದೇಶಿಸಿ ಮಾತನಾಡುತ್ತಾ ಹಲವು ಬಾರಿ ಹನಿಗಣ್ಣಾದರು. ಅವರ ಸಹೋದ್ಯೋಗಿಗಳು ಸಹ ಕಣ್ಣೀರು ಹಾಕಿ ದೀಪಕ್ ಮಿಶ್ರಾ ಅವರಿಗೆ ಶುಭ ಹಾರೈಸಿದರು.
ದೀಪಕ್ ಅವರ ಸಹೋದ್ಯೋಗಿ ಒಬ್ಬರು 'ಜಿಯೋ ಹಜಾರ್ ಸಾಲ್, ಸಾಲ್ ಕೆ ದಿನ್ ಹೋ ಪಚಾಸ್ ಹಜಾರ್' ಹಾಡನ್ನು ಅಳುತ್ತಲೇ ಹಾಡಿದರು. ಇದು ದೀಪಕ್ ಅವರ ಭಾವುಕತೆಯ ಕಟ್ಟೆ ಒಡೆಯುವಂತೆ ಮಾಡಿತು. ದೀಪಕ್ ಮಿಶ್ರಾ ಅವರು ಕಣ್ಣೀರು ಒರೆಸಿಕೊಂಡರು.

ಭಾರತದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಗೌರವದ ಮಾತುಗಳನ್ನಾಡಿದ ದೀಪಕ್ ಮಿಶ್ರಾ, 'ನ್ಯಾಯಕ್ಕೆ ಯಾವುದೇ ಬಣ್ಣಗಳಿಲ್ಲ' ಎಂದರು. ಭಾರತದ ನ್ಯಾಯಾಂಗ ವ್ಯವಸ್ಥೆ ಬಹಳ ಗಟ್ಟಿಯಾಗಿದೆ, ಅದು ಹಾಗೆಯೇ ಇರುವಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯ ಎಂದು ಗಂಭೀರವಾಗಿ ನುಡಿದರು.
ದೀಪಕ್ ಮಿಶ್ರಾ ಅವರು ಸಲಿಂಗಕಾಮ, ಅಯೋಧ್ಯೆ, ಶಬರಿಮಲೆ, ಆಧಾರ್, ಐಚ್ಛಿಕ ಮರಣ ಇನ್ನೂ ಹಲವು ಬಹಳ ಪ್ರಮುಖವಾದ ತೀರ್ಪುಗಳನ್ನು ತಮ್ಮ ಅಧಿಕಾರಾವಧಿಯಲ್ಲಿ ನೀಡಿದ್ದಾರೆ. ಸುಪ್ರೀಂ ಹಿರಿಯ ನ್ಯಾಯಾಧೀಶರಾದ ರಂಜನ್ ಗೋಗಾಯ್ ಅವರು ಅಕ್ಟೋಬರ್ 3 ರಂದು ಮುಖ್ಯನ್ಯಾಯಮೂರ್ತಿಯಾಗಿ ಪದಗ್ರಹಣ ಮಾಡಲಿದ್ದಾರೆ.












Click it and Unblock the Notifications