ದೆಹಲಿ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರದ ನೀತಿಯೇ ಕಾರಣ: ದೀದಿ
ನವದೆಹಲಿ, ಜನವರಿ.26: ಕೃಷಿ ಕಾಯ್ದೆಗಳ ವಿರುದ್ಧದದ ರೈತರ ಹೋರಾಟ ಹಿಂಸಾತ್ಮಕ ರೂಪ ಪಡೆದುಕೊಳ್ಳುವುದಕ್ಕೆ ಕೇಂದ್ರ ಸರ್ಕಾರದ ವರ್ತನೆಯೇ ನೇರ ಕಾರಣ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ದೆಹಲಿಯ ರಸ್ತೆಗಳಲ್ಲಿ ರೈತರ ಹೋರಾಟವು ಹಿಂಸೆಗೆ ತಿರುಗಿದ್ದು ತೀರಾ ನೋವಿನ ಸಂಗತಿಯಾಗಿದೆ. ರೈತರ ಬಗ್ಗೆ ಸೂಕ್ಷ್ಮವಲ್ಲದ ರೀತಿಯಲ್ಲಿ ಕೇಂದ್ರ ಸರ್ಕಾರ ವರ್ತಿಸಿರುವುದೇ ಇಂದಿನ ಘಟನೆಗೆ ಕಾರಣವಾಗಿದೆ. ಅದಕ್ಕಾಗಿ ರೈತರ ವಿರುದ್ಧ ಕೇಂದ್ರ ಸರ್ಕಾರ ಬೊಟ್ಟು ಮಾಡುವುದು ಸರಿಯಲ್ಲ ಎಂದರು.
ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುವ ಮೊದಲು ರೈತರಲ್ಲಿ ವಿಶ್ವಾಸ ಮೂಡಿಸುವ ಕಾರ್ಯವನ್ನು ಮಾಡಲಿಲ್ಲ. ವಿವಾದಿತ ಕಾಯ್ದೆಗಳ ವಿರುದ್ಧ ರೈತರು ಹೋರಾಟ ಆರಂಭಿಸಿದರು. ಕಳೆದ ಎರಡು ತಿಂಗಳಿನಿಂದ ದೆಹಲಿಯಲ್ಲೇ ರೈತರು ಪ್ರತಿಭಟನೆ ನಡೆಸಿದರೂ ಕೂಡಾ ಕೇಂದ್ರದ ನಾಯಕರು ರೈತರ ಮನವೊಲಿಕೆಗೆ ಯತ್ನಿಸಲಿಲ್ಲ. ಈಗಲಾದರೂ ಕೇಂದ್ರ ಸರ್ಕಾರ ರೈತರೊಂದಿಗೆ ಈ ಬಗ್ಗೆ ಚರ್ಚಿಸಿ ವಿವಾದಿತ ಕಾಯ್ದೆಗಳನ್ನು ರದ್ದುಗೊಳಿಸಬೇಕಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗ್ರಹಿಸಿದರು.

18 ಆರಕ್ಷಕರು ಆಸ್ಪತ್ರೆಗೆ ದಾಖಲು:
ಭಾರತದ 72ನೇ ಗಣರಾಜ್ಯೋತ್ಸವ ದಿನದಂದೇ ರಾಷ್ಟ್ರ ರಾಜಧಾನಿ ರಣರಂಗವಾಯಿತು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಸಂಬಂಧಿತ ಕಾಯ್ದೆಗಳ ವಿರುದ್ಧ ರೈತರ ಆಕ್ರೋಶದ ಕಿಚ್ಚಿಗೆ ನವದೆಹಲಿ ಹೊತ್ತಿ ಉರಿಯಿತು. ರೈತರು ಮತ್ತು ಪೊಲೀಸರ ನಡುವಿನ ಸಂಘರ್ಷದಲ್ಲಿ 18 ಮಂದಿ ಆರಕ್ಷಕರು ಗಾಯಗೊಂಡಿದ್ದು, ದೆಹಲಿಯ ಲೋಕನಾಥ ಜಯಪ್ರಕಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೆಹಲಿಯಲ್ಲಿ ಹೆಚ್ಚಿದ ಭದ್ರತೆ:
ರೈತರ ಹೋರಾಟ ಹಿಂಸಾತ್ಮಕ ರೂಪಕ್ಕೆ ತಿರುಗುತ್ತಿದ್ದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತುರ್ತು ಸಭೆ ನಡೆಸಿದರು. ದೆಹಲಿಯಲ್ಲಿ ಪರಿಸ್ಥಿತಿ ನಿಯಂತ್ರಿಸುವುದು ಹಾಗೂ ನಿರ್ವಹಿಸುವ ಉದ್ದೇಶದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸುವಂತೆ ಸೂಚನೆ ನೀಡಿದರು. ದೆಹಲಿಯಲ್ಲಿ 15 ಕಂಪನಿಗಳ ಪ್ಯಾರಾ ಮಿಲಿಟರಿ ಪಡೆಯನ್ನು ನಿಯೋಜಿಸಲು ಸೋಮವಾರವೇ ಕಳುಹಿಸಿ ಕೊಡಲಾಗಿತ್ತು. 5 ಕಂಪನಿಯ ಹೆಚ್ಚುವರಿ ಪಡೆಯನ್ನು ಮಂಗಳವಾರ ನಿಯೋಜಿಸುವುದಕ್ಕೆ ಸೂಚಿಸಲಾಗಿದೆ.












Click it and Unblock the Notifications