₹370 ಬಿರಿಯಾನಿ ಕೊಡಿಸಿ ಯುವತಿ ಬಗ್ಗೆ ಅಶ್ಲೀಲ ಜೋಕ್: ಆ ಒಂದೇ ಮಾತಿಗೆ ಕೆಲಸ ಕಳೆದುಕೊಂಡ ಯುವಕ
ಸ್ಟ್ಯಾಂಡ್ಅಪ್ ಕಾಮಿಡಿ ಶೋ ಒಂದರಲ್ಲಿ ಯುವಕನೊಬ್ಬ ತಮಾಷೆಗೆಂದು ಹೆಣ್ಣುಮಕ್ಕಳ ಬಗ್ಗೆ ಹೇಳಿದ ಮಾತುಗಳು ಆತನ ಉದ್ಯೋಗಕ್ಕೆ ಕುತ್ತು ತಂದಿಟ್ಟಿದೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಡೇಟಿಂಗ್ ಸಂಸ್ಕೃತಿ ಮತ್ತು ನೈತಿಕತೆಯ ಕುರಿತು ಭಾರಿ ಚರ್ಚೆಗೆ ಗ್ರಾಸವಾಗಿದೆ. ₹370 ಚಿಕನ್ ಬಿರಿಯಾನಿ ಬಿಲ್ನಿಂದ ಆರಂಭವಾದ ಈ ವಿವಾದ, ಈಗ ಆತನ ಕಂಪನಿಯ ಮಾಲೀಕ ಕೂಡ ಸಾರ್ವಜನಿಕರ ಆಕ್ರೋಶ ಎದುರಿಸುವಂತೆ ಮಾಡಿದೆ.
ಏನಿದು ಬಿರಿಯಾನಿ ವಿವಾದ?
ಕೆಲ ದಿನಗಳ ಹಿಂದೆ ಪ್ರಸಿದ್ಧ ಹಾಸ್ಯ ಕಲಾವಿದ ಪ್ರಣೀತ್ ಮೋರ್ ಅವರ ಲೈವ್ ಶೋನಲ್ಲಿ ಗುರುಗ್ರಾಮ್ ಮೂಲದ ವೆಬ್ ಡೆವಲಪರ್ ಹಿಮಾಂಶು ಜಾಂಗ್ರಾ ಪ್ರೇಕ್ಷಕನಾಗಿ ಭಾಗವಹಿಸಿದ್ದನು. ಸಂವಾದದ ವೇಳೆ ಆತ, "ನಾನು ಡೇಟಿಂಗ್ಗೆ ಹೋದಾಗ ಯುವತಿಗೆ ₹370 ಖರ್ಚು ಮಾಡಿ ಚಿಕನ್ ಬಿರಿಯಾನಿ ಕೊಡಿಸಿದ್ದೆ. ನಾನು ಹಣ ಖರ್ಚು ಮಾಡಿರುವುದರಿಂದ ಆಕೆಯಿಂದ ಪ್ರತಿಯಾಗಿ ಬೇಕಾದ್ದನ್ನು ನಿರೀಕ್ಷಿಸುವುದು ತಪ್ಪಲ್ಲ" ಎಂಬ ಧಾಟಿಯಲ್ಲಿ ಮಾತನಾಡಿದ್ದನು. ಈ ವಿಡಿಯೋ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. "ಹಣ ಖರ್ಚು ಮಾಡಿದ ತಕ್ಷಣ ಮಹಿಳೆಯರ ಮೇಲೆ ಹಕ್ಕು ಸ್ಥಾಪಿಸಲು ಸಾಧ್ಯವಿಲ್ಲ, ಇದು ವಿಕೃತ ಮನಸ್ಥಿತಿ" ಎಂದು ನೆಟ್ಟಿಗರು ಹಿಮಾಂಶು ವಿರುದ್ಧ ತಿರುಗಿಬಿದ್ದಿದ್ದರು.

ಉದ್ಯೋಗಿ ವಜಾ ಮಾಡಿದ ಕಂಪನಿ
ಹಿಮಾಂಶು ವಿರುದ್ಧದ ಆಕ್ರೋಶ ಹೆಚ್ಚಾಗುತ್ತಿದ್ದಂತೆ, ಆತ ಕೆಲಸ ಮಾಡುತ್ತಿದ್ದ ಗುರುಗ್ರಾಮ್ನ ಪ್ರಸಿದ್ಧ ಬ್ರ್ಯಾಂಡಿಂಗ್ ಸಂಸ್ಥೆ 'ಸ್ಟಾರ್ವಿಕ್ ಡಿಸೈನ್' (Starvik Design) ಕಡೆಗೆ ಸಾರ್ವಜನಿಕರ ಗಮನ ಹೊರಳಿತು. ಕಂಪನಿಗೆ ಸಾಲು ಸಾಲು ಇಮೇಲ್ ಹಾಗೂ ಕರೆಗಳು ಬರಲಾರಂಭಿಸಿದವು. ಪರಿಸ್ಥಿತಿಯನ್ನು ನಿಯಂತ್ರಿಸಲು ಕಂಪನಿಯ ಸಂಸ್ಥಾಪಕ ವಿವೇಕ್ ವಿಶ್ವಕರ್ಮ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದರು.
"ಹಿಮಾಂಶು ಹೇಳಿಕೆಗಳು ನಮ್ಮ ಕಂಪನಿಯ ಮೌಲ್ಯಗಳಿಗೆ ವಿರುದ್ಧವಾಗಿವೆ. ಕಚೇರಿಯ ಹೊರಗೆ ನಡೆದ ಘಟನೆಯಾದರೂ, ಇದು ನಮ್ಮ ಮಹಿಳಾ ಉದ್ಯೋಗಿಗಳು ಮತ್ತು ಗ್ರಾಹಕರ ಮೇಲೆ ಪ್ರಭಾವ ಬೀರುತ್ತಿದೆ. ಆದ್ದರಿಂದ ಆತನನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೆಲಸದಿಂದ ವಜಾಗೊಳಿಸಲಾಗಿದೆ" ಎಂದು ವಿವೇಕ್ ಪ್ರಕಟಿಸಿದರು. ಹಿಮಾಂಶುನನ್ನು ಕೆಲಸದಿಂದ ತೆಗೆದುಹಾಕಿದ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾದರೂ, ವಿವೇಕ್ ವಿಶ್ವಕರ್ಮ ಅವರ ಮುಂದಿನ ಮಾತುಗಳು ಹೊಸ ವಿವಾದಕ್ಕೆ ಕಾರಣವಾದವು. ಹಿಮಾಂಶುಗೆ ಕೇವಲ 22 ವರ್ಷ ವಯಸ್ಸು, ಕಚೇರಿಯಲ್ಲಿ ಆತ ಎಲ್ಲರೊಂದಿಗೆ ಗೌರವದಿಂದ ನಡೆದುಕೊಳ್ಳುತ್ತಿದ್ದ ಎಂದು ಸಮರ್ಥಿಸಿಕೊಂಡ ವಿವೇಕ್, "ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ನಿಜ, ಆದರೆ ಸಮಾಜವು ಅವರು ತಿದ್ದಿಕೊಳ್ಳಲು ಒಂದು ಅವಕಾಶ ನೀಡಬೇಕು" ಎಂದರು.
The issue isn’t ₹370 spent on a plate of Biryani. It’s about the mindset of some men who believe that spending money entitles them to a woman’s dignity, choices or decisions.
— Aditya Goswami (@AdityaGoswami_) June 8, 2026
Respect and consent are not transactional in a relationship where every expense creates an obligation.… pic.twitter.com/NShSzalyHg
ಈ ಮಾತು ನೆಟ್ಟಿಗರನ್ನು ಮತ್ತಷ್ಟು ಕೆರಳಿಸಿದೆ. "ಸಾರ್ವಜನಿಕರ ಒತ್ತಡ ಇಲ್ಲದಿದ್ದರೆ ಕಂಪನಿ ಕ್ರಮ ಕೈಗೊಳ್ಳುತ್ತಿರಲಿಲ್ಲ, ಈಗ ಮಾಲೀಕರು ಆತನ ತಪ್ಪನ್ನು ಹಗುರಗೊಳಿಸಲು ಯತ್ನಿಸುತ್ತಿದ್ದಾರೆ" ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಘಟನೆ ಇಂಟರ್ನೆಟ್ನಲ್ಲಿ ಮಹಿಳಾ ಸಮ್ಮತಿ, ತಪ್ಪು ಮಾಡಿದವರಿಗೆ ಸಿಗಬೇಕಾದ 'ಎರಡನೇ ಅವಕಾಶ'ಗಳ ಕುರಿತು ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿದೆ. ವಿವಾದ ಬೆಳೆಯುತ್ತಿದ್ದಂತೆ ಹಿಮಾಂಶು ಜಾಂಗ್ರಾ ತನ್ನ ಎಲ್ಲ ಸೋಷಿಯಲ್ ಮೀಡಿಯಾ ಖಾತೆಗಳನ್ನು ಡಿಲೀಟ್ ಮಾಡಿಕೊಂಡಿದ್ದಾನೆ.












Click it and Unblock the Notifications