TTD Darshan Ticket Rules Changed: TTD ದರ್ಶನ ಟಿಕೆಟ್ ನಿಯಮಗಲ್ಲಿ ಮಹತ್ವದ ಬದಲಾವಣೆ: ಇನ್ನು ದರ್ಶನ ಮಾಡೋದು ಸುಲಭನಾ?
ತಿರುಪತಿ ತಿರುಮಲ ಶ್ರೀವಾರಿ ದರ್ಶನಕ್ಕೆ ಹೋಗುವ ಭಕ್ತರಿಗೆ ಟಿಟಿಡಿ (TTD) ಮಹತ್ವದ ಬದಲಾವಣೆಗಳನ್ನು ಮಾಡಿದೆ. ಶ್ರೀವಾರಿ ದರ್ಶನ ಟಿಕೆಟ್ಗಳ ವಿತರಣಾ ವ್ಯವಸ್ಥೆಯಲ್ಲಿ ಜೂನ್ 10ರಿಂದ ಹೊಸ ನಿಯಮಗಳು ಜಾರಿಗೆ ಬರಲಿದ್ದು, ಇದರಿಂದ ಕೆಲವರಿಗೆ ದರ್ಶನ ಮತ್ತಷ್ಟು ಸುಲಭವಾಗುವ ಸಾಧ್ಯತೆ ಇದ್ದರೆ, ಇನ್ನೂ ಕೆಲವರಿಗೆ ಟಿಕೆಟ್ ಪಡೆಯುವುದೇ ಸವಾಲಾಗಬಹುದು. ಮುಂಗಡ ಆನ್ಲೈನ್ ಬುಕ್ಕಿಂಗ್, ವಿಮಾನ ನಿಲ್ದಾಣ ಕೋಟಾ ಮತ್ತು ಬ್ಯಾಕ್ಲಾಗ್ ದಾನಿಗಳಿಗೆ ಪ್ರತ್ಯೇಕ ಮೀಸಲಾತಿ ಸೇರಿದಂತೆ ಹಲವು ಹೊಸ ಕ್ರಮಗಳನ್ನು ಟಿಟಿಡಿ ಪರಿಚಯಿಸುತ್ತಿದೆ. ಹಾಗಾದರೆ ಈ ಹೊಸ ವ್ಯವಸ್ಥೆಯಿಂದ ಯಾರಿಗೆ ಲಾಭ, ಯಾರಿಗೆ ಕಷ್ಟ? ಇಲ್ಲಿದೆ ಸಂಪೂರ್ಣ ಮಾಹಿತಿ.
ಪ್ರಸ್ತುತ ಪ್ರತಿದಿನ ವಿತರಿಸಲಾಗುತ್ತಿರುವ 1,500 ಶ್ರೀವಾಣಿ ದರ್ಶನ ಟಿಕೆಟ್ಗಳ ಕೋಟಾವನ್ನು ಟಿಟಿಡಿ ಮರುವಿಂಗಡಿಸಿದೆ. ಹೊಸ ವ್ಯವಸ್ಥೆಯ ಪ್ರಕಾರ, ಪ್ರತಿದಿನದ 500 ರೂ. ಬೆಲೆಯ ಟಿಕೆಟ್ಗಳನ್ನು ಮೂರು ತಿಂಗಳ ಮುಂಚಿತವಾಗಿಯೇ ಆನ್ಲೈನ್ ಮೂಲಕ ಬುಕ್ ಮಾಡಿಕೊಳ್ಳುವ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದ ಭಕ್ತರು ಮುಂಚಿತವಾಗಿ ದರ್ಶನ ಯೋಜನೆ ರೂಪಿಸಿಕೊಳ್ಳಬಹುದು.

ಈ ವೇಳೆ, ತಿರುಪತಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗಾಗಿ ಪ್ರತಿದಿನ 200 ಟಿಕೆಟ್ಗಳನ್ನು ಕರೆಂಟ್ ಬುಕ್ಕಿಂಗ್ ವ್ಯವಸ್ಥೆಯಡಿಯಲ್ಲಿ ಮೀಸಲಿಡಲಾಗುತ್ತದೆ. ಉಳಿದ ಕೋಟಾದಲ್ಲಿ, ದೇಣಿಗೆ ನೀಡಿ ದರ್ಶನಕ್ಕಾಗಿ ಕಾಯುತ್ತಿರುವ ಸುಮಾರು 41 ಸಾವಿರ ಬ್ಯಾಕ್ಲಾಗ್ ದಾನಿಗಳಿಗಾಗಿ ಪ್ರತಿದಿನ 300 ಟಿಕೆಟ್ಗಳನ್ನು ಪ್ರತ್ಯೇಕವಾಗಿ ಮೀಸಲಿಡಲು ಟಿಟಿಡಿ ನಿರ್ಧರಿಸಿದೆ.
ಈ ವಿಶೇಷ ಟಿಕೆಟ್ಗಳನ್ನು ಪ್ರತಿದಿನ ಬೆಳಗ್ಗೆ 9 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ. ಮಧ್ಯಾಹ್ನ 1 ಗಂಟೆಯೊಳಗೆ ಬುಕ್ಕಿಂಗ್ ಮಾಡಿಕೊಂಡ ಭಕ್ತರಿಗೆ ಅದೇ ದಿನ ಸಂಜೆ 4 ಗಂಟೆಗೆ ಶ್ರೀವಾರಿ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಉಳಿದ ಟಿಕೆಟ್ಗಳನ್ನು ನಂತರ ಕರಂಟ್ ಬುಕ್ಕಿಂಗ್ ಕೋಟಾಕ್ಕೆ ವರ್ಗಾಯಿಸಲಾಗುತ್ತದೆ. ಈ ವ್ಯವಸ್ಥೆ 2027ರ ಮಾರ್ಚ್ 31ರವರೆಗೆ ಜಾರಿಯಲ್ಲಿರಲಿದೆ ಎಂದು ಟಿಟಿಡಿ ತಿಳಿಸಿದೆ.
ಭವಿಷ್ಯದಲ್ಲಿ ಶ್ರೀವಾರಿ ದರ್ಶನ ಟಿಕೆಟ್ಗಳ ವಿತರಣೆಗೆ 'ಲಕ್ಕಿ ಡಿಪ್' ಪದ್ಧತಿಯೂ ಜಾರಿಗೆ ತರಲು ಟಿಟಿಡಿ ಯೋಜನೆ ರೂಪಿಸುತ್ತಿದೆ. ಜೊತೆಗೆ ವಿಜಯವಾಡ, ವಿಶಾಖಪಟ್ಟಣಂ ಹಾಗೂ ರಾಜಮಹೇಂದ್ರವರಂ ವಿಮಾನ ನಿಲ್ದಾಣಗಳಲ್ಲಿಯೂ ಟಿಕೆಟ್ ಕೌಂಟರ್ಗಳನ್ನು ತೆರೆಯುವ ಸಾಧ್ಯತೆಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ತಿರುಮಲದಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ವೈಕುಂಠಂ ಕ್ಯೂ ಕಾಂಪ್ಲೆಕ್ಸ್ ನಿರಂತರವಾಗಿ ಭರ್ತಿಯಾಗುತ್ತಿವೆ. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದರ್ಶನಕ್ಕಾಗಿ 12 ರಿಂದ 24 ಗಂಟೆಗಳವರೆಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಕ್ತರಿಗೆ ಸುಗಮ ದರ್ಶನ ವ್ಯವಸ್ಥೆ ಕಲ್ಪಿಸಲು ಟಿಟಿಡಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸುವುದು, ಕುಡಿಯುವ ನೀರು, ಅನ್ನಪ್ರಸಾದ ಮತ್ತು ವಸತಿ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸುವಂತಹ ಕ್ರಮಗಳನ್ನು ಕೈಗೊಂಡಿದೆ. ಈ ಕುರಿತು ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಅಲ್ಲದೆ, ಎನ್ಆರ್ಐ ದರ್ಶನ ಕೋಟಾದ ಅವಧಿಯನ್ನು 90 ದಿನಗಳಿಗೆ ವಿಸ್ತರಿಸುವ ನಿರ್ಧಾರವನ್ನೂ ಟಿಟಿಡಿ ಕೈಗೊಂಡಿದೆ.
ಆಂಧ್ರಪ್ರದೇಶದ ತಿರುಪತಿಯಲ್ಲಿರುವ ತಿಮ್ಮಪ್ಪನ ದರ್ಶನ ಪಡೆಯಲು ಹಲವು ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ದಿನಗಟ್ಟಲೇ, ಗಂಟೆಗಟ್ಟಲೇ ಕಾದು ದರ್ಶನ ಪಡೆಯುವ ಸೌಭಾಗ್ಯ ಪಡೆಯುವ ಭಕ್ತರು, ಮುಂಚಿತವಾಗಿಯೇ ಪ್ಲ್ಯಾನ್ ಮಾಡಿ, ಟಿಕೆಟ್ ಖರೀದಿಸಲು ಈ ವ್ಯವಸ್ಥೆ ಅನುವು ಮಾಡಿಕೊಡುತ್ತದೆ.














Click it and Unblock the Notifications