AI, GISಗೆ ಪ್ರಿಯಾಂಕ್ ಖರ್ಗೆ ಒತ್ತು; ಕರ್ನಾಟಕದಲ್ಲಿ ಡಿಜಿಟಲ್ ಆಡಳಿತಕ್ಕೆ ಹೊಸ ವೇಗ ನಿರೀಕ್ಷೆ
ಬೆಂಗಳೂರು: ಕರ್ನಾಟಕ ಗೃಹ ಇಲಾಖೆಯ ಜೊತೆಗೆ ಇ-ಆಡಳಿತ ಇಲಾಖೆಯ ಜವಾಬ್ದಾರಿ ಸಹ ಪ್ರಿಯಾಂಕ್ ಖರ್ಗೆ ಅವರ ಪಾಲಾಗಿದೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಅವರು ಇಲಾಖೆ ವ್ಯಾಪ್ತಿಯ ಸಂಸ್ಥೆಗಳಾದ ಇ-ಆಡಳಿತ ಕೇಂದ್ರ, ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ಹಾಗೂ ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಸೇರಿ ವಿವಿಧ ಕಾರ್ಯ ಚಟುವಟಿಕೆಗಳಲ್ಲಿ ಡಿಜಿಟಲ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI) ಪ್ರರಿಣಾಮಕಾರಿ ಬಳಕೆಗೆ ಆದ್ಯತೆ ನೀಡಿದ್ದಾರೆ.
ಇಂದು ಬುಧವಾರ ಇಲಾಖೆ ವ್ಯಾಪ್ತಿಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಂಬಂಧಿಸಿದ ಅಧಿಕಾರಿಗಳೊಂದಿಗೆ ಅಗತ್ಯ ಸಲಹೆ ಸೂಚನೆ ನೀಡಿದರು. ವಿವಿಧ ಇಲಾಖೆಗಳ ದತ್ತಾಂಶ ಏಕೀಕರಣ, ಕೃತಕ ಬುದ್ಧಿಮತ್ತೆ (AI), ಭೌಗೋಳಿಕ ಮಾಹಿತಿ ವ್ಯವಸ್ಥೆ (GIS) ಹಾಗೂ ಡಿಜಿಟಲ್ ಆಡಳಿತ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸೋರಿಕೆ ರಹಿತ ಮತ್ತು ಗುರಿ-ಆಧಾರಿತ ಸೇವಾ ವಿತರಣೆಗೆ ಆದ್ಯತೆ ನೀಡಬೇಕೆಂದು ತಿಳಿಸಿದರು.

ಡಿಜಿಟಲ್ ತಂತ್ರಜ್ಞಾನಗಳ ಬಳಕೆ ವಿಸ್ತರಣೆ
ರಾಜ್ಯದಲ್ಲಿ ಡಿಜಿಟಲ್ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು CeG, KSRSAC ಹಾಗೂ CSG ಸಂಸ್ಥೆಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕಿದೆ. ಸಾರ್ವಜನಿಕ ಸೇವೆಗಳ ಗುಣಮಟ್ಟ ಮತ್ತು ವೇಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನವೀನ ತಂತ್ರಜ್ಞಾನ ಪರಿಹಾರ ಅಭಿವೃದ್ಧಿಗೊಳಿಸಬೇಕು. ಸಾರ್ವಜನಿಕರ ಜೀವನಮಟ್ಟ ಸುಧಾರಣೆ, ಆಡಳಿತದ ಪಾರದರ್ಶಕತೆ ಹಾಗೂ ಸರ್ಕಾರಿ ಸೇವೆಗಳ ಪರಿಣಾಮಕಾರಿ ಅನುಷ್ಠಾನವೇ ಸರ್ಕಾರದ ಪ್ರಮುಖ ಗುರಿ ಆಗಿದೆ. ಇದರ ಈಡೇರಿಕೆಗಾಗಿ ಡಿಜಿಟಲ್ ತಂತ್ರಜ್ಞಾನಗಳ ಬಳಕೆ ವಿಸ್ತರಿಸಲಾಗುವುದು ಎಂದರು.
ಸರ್ಕಾರದ ವಿವಿಧ ಇಲಾಖೆಗಳ ಬಳಿ ಈಗಾಗಲೇ ಸಾರ್ವಜನಿಕರ ಕುರಿತು ಅಪಾರ ಪ್ರಮಾಣದ ಡಿಜಿಟಲ್ ಮಾಹಿತಿ ಲಭ್ಯವಿದೆ. ಈ ಮಾಹಿತಿಯನ್ನು ಪ್ರತ್ಯೇಕವಾಗಿ ಸಂಗ್ರಹಿಸಿಡುವುದಕ್ಕಿಂತ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಬಳಸಿಕೊಳ್ಳುವ ವ್ಯವಸ್ಥೆ ರೂಪಿಸಬೇಕು.
ಫಲಾನುಭವಿಗಳ ಗುರುತಿಸುವಿಕೆ ಸುಲಭ
ರಾಜ್ಯದ ವಿವಿಧ ಇಲಾಖೆಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮೂಲಕ ಸಾರ್ವಜನಿಕರಿಗೆ ಇನ್ನಷ್ಟು ವೇಗವಾಗಿ, ಪಾರದರ್ಶಕವಾಗಿ ಹಾಗೂ ಪರಿಣಾಮಕಾರಿಯಾಗಿ ಸೇವೆಗಳನ್ನು ಒದಗಿಸಬೇಕು. ಸರ್ಕಾರ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಒದಗಿಸುವಾಗ ಇಲಾಖೆಗಳಲ್ಲಿರುವ ಡಿಜಿಟಲ್ ದತ್ತಾಂಶವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಇದರಿಂದ ಅರ್ಹ ಫಲಾನುಭವಿಗಳನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಇದರಿಂದ ಸಾರ್ವಜನಿಕರು ಒಂದೇ ಮಾಹಿತಿಯನ್ನು ಹಲವು ಬಾರಿ ಸಲ್ಲಿಸುವ ಅನಿವಾರ್ಯತೆ ತಪ್ಪುತ್ತದೆ ಎಂದು ತಿಳಿಸಿದರು.
ಸರ್ಕಾರದ ಯೋಜನೆಗಳಿಗೆ ಮೀಸಲಿಡುವ ಪ್ರತಿಯೊಂದು ರೂಪಾಯಿಯೂ ನಿಜವಾದ ಅರ್ಹ ಫಲಾನುಭವಿಗೆ ತಲುಪಬೇಕು. ಯಾವುದೇ ಕಾರಣಕ್ಕೂ ಸರ್ಕಾರದ ಹಣ ಅನರ್ಹ ಅಥವಾ ತಪ್ಪು ಫಲಾನುಭವಿಗಳಿಗೆ ಹೋಗದಂತೆ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳನ್ನು ರೂಪಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ನಿರ್ದೇಶಿಸಿದ್ದಾರೆ. ಈ ಮೂಲಕ ಇಲಾಖೆಯಲ್ಲಿ ನವೀನ ತಂತ್ರಜ್ಞಾನ ಬಳಕೆ, ವೇಗದ ಮತ್ತು ಪಾರದರ್ಶಕ ಸೇವೆಗೆ ಸಚಿವರು ಮುಂದಾಗಿದ್ದಾರೆ.













Click it and Unblock the Notifications