ಗೌರಮ್ಮಜ್ಜಿಯ ಕೊನೆಗಾಲದಲ್ಲಿ ಸಿಕ್ಕಿತು ಬೆಚ್ಚಗಿನ ಸೂರು: ಕಾಡಂಚಿನಲ್ಲಿ ಮಾನವೀಯತೆ ಮೆರೆದ ಪೊಲೀಸ್ ಪಡೆ
ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು 'ಶಿವಮೊಗ್ಗ' ಜಿಲ್ಲೆಯ ವ್ಯಾಪ್ತಿಯಲ್ಲಿ ಪ್ರತಿ ವರ್ಷ ಅಬ್ಬರ ಮಳೆ, ವನ್ಯ ಮೃಗಗಳ ಹಾವಳಿ ನೋಡುತ್ತಲೇ ಇರುತ್ತವೆ. ಮಳೆಗಾಲದಲ್ಲಿ ಇಂತಹ ಪ್ರದೇಶದಲ್ಲಿ ಕಾಡಿಗೆ ಸಮೀಪ ಪ್ಲಾಸ್ಟಿಕ್ ಹೊದಿಕೆಯ ಆಸರೆಯನ್ನೇ ನಂಬಿ 70 ವರ್ಷದ ಗೌರಮ್ಮಜ್ಜಿ ಬದುಕುತ್ತಿದ್ದರು. ಇವರು ಈ ಜನ್ಮದಲ್ಲಿ ಸೂರಿನಲ್ಲಿ ವಾಸಿಸುತ್ತೇನೆ ಎಂದುಕೊಂಡಿರಲಿಲ್ಲ. ಆದರೆ ಅಜ್ಜಿಯ ಸೂರಿನ ಕನಸನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಲಯನ್ಸ್ ಕ್ಲಬ್ ಸಂಸ್ಥೆಗಳು ಜಂಟಿಯಾಗಿ ನೆರವೇರಿಸಿವೆ.
ಹೌದು, ಮಳೆ, ಬೀಸಿಲಿನಲ್ಲಿ ಸೂರಿಲ್ಲದೇ ಜೀವಿಸಲು ಪರದಾಡುತ್ತಿದ್ದ ಗೌರಮ್ಮಜ್ಜಿ ಗೆ ಕೊನೆಗೂ ಸುಸಜ್ಜಿತವಾದ ಸ್ವಂತ ಮನೆ ಕಟ್ಟಿಸಿಕೊಡಲಾಗಿದೆ. ವರ್ಷದ ಬಹುತೇಕ ಅವಧಿಯಲ್ಲಿ ತೀವ್ರ ಪ್ರವಾಹ ಹಾಗೂ ಮಳೆಯಿಂದ ತತ್ತರಿಸುವ ಶಿವಮೊಗ್ಗ, ಆಗುಂಬೆ ವ್ಯಾಪ್ತಿಯಲ್ಲಿ ಆಸರೆಯಿಲ್ಲದೆ ಕಣ್ಣೀರಿಡುತ್ತಿದ್ದ ವೃದ್ಧೆಗೆ ಪೊಲೀಸ್ ಇಲಾಖೆ, ಸ್ಥಳೀಯ ಲಯನ್ಸ್ ಕ್ಲಬ್ ಸಂಸ್ಥೆಗಳು ಧಾವಿಸಿ ಸಮಾಜಕ್ಕೆ ಮಾದರಿಯಾಗಿವೆ.

ಜಿಲ್ಲೆಯ ಆಗುಂಬೆ ಸುತ್ತಮುತ್ತಲಿನ ಪ್ರದೇಶ ಕೇವಲ ಭಾರೀ ಮಳೆಗೆ ಮಾತ್ರವಲ್ಲದೆ ಕಾಡಾನೆಗಳ ದಂಡಿನ ನಿರಂತರ ಸಂಚಾರಕ್ಕೂ ನಡುಕ ಹುಟ್ಟಿಸುವ ಪ್ರಾಂತ್ಯವಾಗಿದೆ. ಇಂತಹ ಅಪಾಯಕಾರಿ ಕಾಡಿನ ಅಂಚಿನಲ್ಲಿ ಯಾವುದೇ ಕನಿಷ್ಠ ಭದ್ರತೆಯೂ ಇಲ್ಲದೆ, ಕೇವಲ ಬಿದಿರಿನ ಕಡ್ಡಿ ಹಾಗೂ ಹರಿದ ಪ್ಲಾಸ್ಟಿಕ್ ಶೀಟ್ಗಳಿಂದ ನಿರ್ಮಿತವಾಗಿದ್ದ ತಾತ್ಕಾಲಿಕ ಶೆಡ್ನಲ್ಲಿ ಗೌರಮ್ಮಜ್ಜಿ ವರ್ಷಗಳಿಂದ ವಾಸಿಸುತ್ತಿದ್ದರು. ಈಚೆಗೆ ಸ್ಥಳೀಯ ಪೊಲೀಸ್ ಸಿಬ್ಬಂದಿ ನಡೆಸಿದ ಮನೆ-ಮನೆ ಜನಸಂಪರ್ಕ ಮತ್ತು ಸುರಕ್ಷತಾ ಸಮೀಕ್ಷೆಯ ಸಂದರ್ಭದಲ್ಲಿ ವೃದ್ಧೆಯ ಈ ದಯನೀಯ ಬದುಕು ಮೊದಲ ಬಾರಿಗೆ ಬೆಳಕಿಗೆ ಬಂದಿತ್ತು.
ಪೊಲೀಸ್, ಲಯನ್ಸ್ ಕ್ಲಬ್ ಜಂಟಿ ಆಸರೆ
ಅಜ್ಜಿ ಇದ್ದ ಗುಡಿಸಲಿನ ಸುತ್ತಮುತ್ತ ವನ್ಯಮೃಗಗಳ ಮತ್ತು ಆನೆಗಳ ದಾಳಿಯ ಭೀತಿ ತೀವ್ರವಾಗಿತ್ತು. ಇದನ್ನು ಅರಿತ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಅವರು, ವೃದ್ಧೆಗೆ ತಕ್ಷಣವೇ ಸುಭದ್ರವಾದ ಆಶ್ರಯ ಒದಗಿಸಲು ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಗೌರಮ್ಮಜ್ಜಿಗೆ ಸ್ವಂತ ಪುಟ್ಟ ನಿವೇಶನವಿದ್ದರೂ, ಯಾವುದೇ ಆದಾಯದ ಮೂಲ ಮತ್ತು ಆರ್ಥಿಕ ಶಕ್ತಿ ಇಲ್ಲದ ಕಾರಣ ಹೊಸ ಆಶ್ರಯ ತಾಣ ನಿರ್ಮಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಪೊಲೀಸರು, ಲಯನ್ಸ್ ಕ್ಲಬ್ ಸದಸ್ಯರನ್ನು ಮತ್ತು ದಾನಿಗಳನ್ನು ಸಹಕಾರದಲ್ಲಿ ಮನೆ ಕಟ್ಟಿಸಿಕೊಡುವಲ್ಲಿ ನಿರತರಾದರು. ಎಲ್ಲವು ಅಂದುಕೊಂಡಂತಾಗಿ ಅಜ್ಜಿಗೆ ಸುಂದರ ಮನೆ ನಿರ್ಮಿಸಿಕೊಡಲಾಗಿದೆ.
ಅಜ್ಜಿ ಕಷ್ಟದ ನೋಡಿದ ಪೊಲೀಸರು, ಲಯನ್ಸ್ ಕ್ಲಬ್ ಸದಸ್ಯರು, ದಾನಿಗಳ ಕೂಡಿ ಕೇವಲ ಮೂರೇ ತಿಂಗಳಲ್ಲಿ ಸುಮಾರು 1.9 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಾಣವನ್ನು ಯಶಸ್ವಿಯಾಗಿ ಮಾಡಿದ್ದಾರೆ. ಮಳೆಗಾಲ ಪ್ರಾರಂಭವಾಗುವ ಮುನ್ನವೇ ಈ ಕಾಮಗಾರಿಯನ್ನು ಅತ್ಯಂತ ವೇಗವಾಗಿ ಪೂರ್ಣಗೊಳಿಸಲಾಗಿದೆ. ಅದೃಷ್ಟವಶಾತ್ ಈ ವರ್ಷ ಮುಂಗಾರು ಪ್ರವೇಶ ಕೊಂಚ ವಿಳಂಬವಾಗಿದ್ದು ಯೋಜನೆ ಪೂರ್ಣಕ್ಕೆ ಸಹಾಯವಾಗಿದೆ. ಸದ್ಯ ಅಜ್ಜಿ ಹೊಸ ಮನೆ ಕಂಡು ಸಂತಗೊಂಡಿದ್ದಾರೆ. ಅಧಿಕಾರಿಗಳ ಸಹಾಯಕ್ಕೆ ಕೈ ಮುಗಿದಿದ್ದಾರೆ.
ಗೃಹ ಪ್ರವೇಶ; ಮನೆ ಹಸ್ತಾಂತರ
2026 ರಂದು ಜೂನ್ 21ರಂದು ಗೌರಮ್ಮಜ್ಜಿಯ ನೂತನ ಮನೆಯ ಗೃಹ ಪ್ರವೇಶ ತುಂಬಾ ಸರಳ ಜರುಗಿತು. ಹೊಸ ಮನೆಗೆ 'ಲಯನ್ಸ್ ಡ್ರೀಮ್ ಕುಟೀರ' ಎಂದು ಹೆಸರಿಡಲಾಗಿದೆ. ಅಂದೇ ಬಾಗಿಲಿನ ಕೀಲಿಕೈಯನ್ನು ಗೌರಮ್ಮಜ್ಜಿಗೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು. ಎಸ್ಪಿ ಬಿ. ನಿಖಿಲ್, ಆಗುಂಬೆ ಸಬ್ ಇನ್ಸ್ಪೆಕ್ಟರ್ ಶಿವನಗೌಡ ಪಾಟೀಲ್ ಹಾಗೂ ಲಯನ್ಸ್ ಕ್ಲಬ್ನ ಹಿರಿಯ ಪದಾಧಿಕಾರಿಗಳು ಗೃಹ ಪ್ರವೇಶದ ದಿನ ಉಪಸ್ಥಿತರಿದ್ದರು. ಮನೆ ಹಸ್ತಾಂತರಿಸುವ ಮೂಲಕ ವೃದ್ಧೆಯ ಮುಖದಲ್ಲಿ ಧನ್ಯತೆಯ ಭಾವ ಮೂಡಿಸಿದರು. ಈ ಮೂಲಕ ವೃದ್ಧಿಗೆ ಕೊನೆಗಾಲದಲ್ಲಿ ಬೆಚ್ಚಗಿನ ಸೂರು ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.













Click it and Unblock the Notifications