ಸುಪ್ರೀಂ ಮೆಟ್ಟಿಲೇರದಿರಲು ಸಿಬಿಎಸ್ ಇ ನಿರ್ಧಾರ?
ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಮಾತುಕತೆಯ ಪರಿಣಾಮವಾಗಿ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರದಿರಲು ಸಿಬಿಎಸ್ ಇ ನಿರ್ಧಾರ ಮಾಡಿದೆ ಎನ್ನಲಾಗಿದೆ.
ನವದೆಹಲಿ, ಮೇ 26: ತಾನು ಕೈ ಬಿಟ್ಟಿದ್ದ ಅಂಕ ಮಿತಿ ನಿಯಮವನ್ನು ಪುನಃ ಅಳವಡಿಸಿಕೊಳ್ಳಬೇಕೆಂದು ದೆಹಲಿ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದ ಕೇಂದ್ರೀಯ ಪ್ರೌಢ ಶಿಕ್ಷಣಾ ಮಂಡಳಿ (ಸಿಬಿಎಸ್ ಇ) ತನ್ನ ನಿರ್ಧಾರದಿಂದ ಹಿಂದೆ ಸರಿಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಸಿಬಿಎಸ್ ಇ ಅಡಿಯಲ್ಲಿ 12ನೇ ತರಗತಿ ಪರೀಕ್ಷೆ ತೆಗೆದುಕೊಂಡಿರುವ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ತುದಿಗಾಲಲ್ಲಿ ನಿಂತಿದ್ದಾರೆ. ಇಡೀ ಫಲಿತಾಂಶವೇ ಆ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ದಿಕ್ಸೂಚಿಯಾಗಿರುವ ಹಿನ್ನೆಲೆಯಲ್ಲಿ ಫಲಿತಾಂಶವನ್ನು ಯಾವುದೇ ಕಾರಣಕ್ಕೂ ಮುಂದೂಡಬಾರದು ಹಾಗೂ ನಿಗದಿತ ಸಮಯದಲ್ಲೇ ಫಲಿತಾಂಶ ಪ್ರಕಟಿಸಬೇಕೆಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ಈಗಾಗಲೇ ಮಂಡಳಿಗೆ ತಾಕೀತು ಮಾಡಿದೆ.[ಸಿಬಿಎಸ್ ಇ ಫಲಿತಾಂಶ ಮತ್ತಷ್ಟು ತಡ: ಆತಂಕದಲ್ಲಿ ವಿದ್ಯಾರ್ಥಿಗಳು]
ಗುರುವಾರ (ಮೇ 25) ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಿಎಸ್ ಇ ಆಡಳಿತ ಮಂಡಳಿಯ ಪದಾಧಿಕಾರಿಗಳ ನಡುವೆ ಎರಡು ಸುತ್ತಿನ ಮಾತುಕತೆಗಳು ನಡೆದವು.
ಗುರುವಾರ ಸಂಜೆ ವೇಳೆಗೆ ನಡೆದ 2ನೇ ಸುತ್ತಿನ ಮಾತುಕತೆ ವೇಳೆ, ಸುಪ್ರೀಂ ಕೋರ್ಟ್ ಗೆ ಹೋಗುವುದರಿಂದ ಫಲಿತಾಂಶವು ಮುಂದೂಡಲ್ಪಟ್ಟು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಇದರಿಂದ ಮಂಡಳಿಯ ಕಾರ್ಯವೈಖರಿಗೆ ಕಪ್ಪುಚುಕ್ಕೆ ಅಂಟಿದಂತಾಗುತ್ತದೆ ಎಂದು ಕೇಂದ್ರದ ಅಧಿಕಾರಿಗಳು ಸಿಬಿಎಸ್ ಇ ಆಡಳಿತ ಮಂಡಳಿಗೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.[ಏನಿದು 'CBSE ಅಂಕ ನಿಯಮ' ? ನೀವು ತಿಳಿಯಬೇಕಾದ 5 ವಿಚಾರ]
ಅದಲ್ಲದೆ, ಸುಪ್ರೀಂ ಕೋರ್ಟ್ ಒಂದು ವೇಳೆ, ಈ ಪ್ರಕರಣದಲ್ಲಿ ಮಧ್ಯೆ ಪ್ರವೇಶಿಸಲು ನಿರಾಕರಿಸಿದರೆ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದೂ ತಿಳಿಸಿದರು.
ಈ ಎಲ್ಲಾ ಕಾರಣಗಳಿಂದಾಗಿ, ಸಿಬಿಎಸ್ ಇಯು ಸುಪ್ರೀಂ ಕೋರ್ಟ್ ಗೆ ಹೋಗುವ ತನ್ನ ನಿಲುವನ್ನು ಕೊಂಚ ಸಡಿಲಿಸಿದೆ ಎಂದು ಹೇಳಲಾಗಿದೆ.