ಲೇಖಕಿ ಅರುಂಧತಿ ರಾಯ್ ಮೇಲೆ ಕೇಸ್ ದಾಖಲು
ನವದೆಹಲಿ, ಡಿಸೆಂಬರ್ 27: ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ ಪಿಆರ್) ಗೆ ಜನರು ಸುಳ್ಳು ಮಾಹಿತಿ ನೀಡಬೇಕೆಂದು ಎಂದು ಬಹಿರಂಗವಾಗಿ ಕರೆ ನೀಡಿರುವ ಲೇಖಕಿ ಅರುಂಧತಿ ರಾಯ್ ಮೇಲೆ ಸುಪ್ರೀಂ ಕೋರ್ಟ್ ವಕೀಲ ರಾಜೀವ್ ಕುಮಾರ್ ರಂಜನ್ ದೆಹಲಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.
"ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಮಾಡುವುದರಿಂದ ರಾಷ್ಟ್ರೀಯ ಪೌರತ್ವ ನೋಂದಣಿಗೆ ಡೇಟಾ ಬೇಸ್ ಆಗಿ ಕಾರ್ಯನಿರ್ವಹಿಸುತ್ತದೆ, ನಿಮ್ಮ ವೈಯಕ್ತಿಕ ಮಾಹಿತಿ ಸೋರಿಕೆಯಾಗದಂತೆ ತಡೆಯಲು, ಅಧಿಕಾರಿಗಳು ನಿಮ್ಮ ಮನೆಗೆ ಬಂದಾಗ ಸತ್ಯವನ್ನು ಮರೆಮಾಚಿ, ಸುಳ್ಳು ಹೆಸರು ಹಾಗೂ ಮಾಹಿತಿಯನ್ನು ಅವರಿಗೆ ಕೊಡಿ" ಎಂದು ಅರುಂಧತಿ ರಾಯ್ ಹೇಳಿಕೆ ನೀಡಿದ್ದರು.
"ಈ ದೇಶದ ಪ್ರಧಾನ ಮಂತ್ರಿ ನಮಗೆ ಸುಳ್ಳು ಹೇಳುವುದು ಸರಿಯೇ, ಆ ಸುಳ್ಳುಗಳಿಗೆ ಪ್ರತಿಕ್ರಿಯೆಯಾಗಿ ನಾನು ಎನ್ ಪಿಆರ್ ಗಾಗಿ ನಮ್ಮ ವೈಯಕ್ತಿಕ ಡೇಟಾವನ್ನು ಸಂಗ್ರಹಿಸಲು ಬಂದಾಗ ನಾವು ಒಟ್ಟಾಗಿ ಹಾಸ್ಯಾಸ್ಪದ ಮಾಹಿತಿಯನ್ನು ನಮೂದಿಸಬೇಕು ಎಂದು ನಾನು ಹೇಳಿದ್ದೇನೆ. ನಾನು ಪ್ರಸ್ತಾಪಿಸುತ್ತಿರುವುದು ನಗುವಿನೊಂದಿಗೆ ಕಾನೂನಿಗೆ ಅಸಹಕಾರ ನೀಡಿ" ಎಂದು ಅವರು ಹೇಳಿದರು.

ಈ ಬಗ್ಗೆ ದೆಹಲಿಯಲ್ಲಿ ಸುಪ್ರೀಂ ಕೋರ್ಟ್ ವಕೀಲರು, ಅರುಂಧತಿ ರಾಯ್ ಅವರು ಉದ್ದೇಶಪೂರ್ವಕವಾಗಿ ದೇಶದ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಅರುಂಧತಿ ರಾಯ್ ಅವರನ್ನು ತಕ್ಷಣವೇ ಬಂಧಿಸಬೇಕೆಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಇದರಿಂದ ಲೇಖಕಿ ಅರುಂಧತಿ ರಾಯ್ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚಿಗೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ತಂದಿತ್ತು. ಅದರ ಜೊತೆಗೆ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಯನ್ನು ಜಾರಿಗೆ ತರುವುದಾಗಿ ಹೇಳಿತ್ತು.
ಎನ್ಆರ್ ಸಿ ಜಾರಿಗೆ ತರುವ ಮೊದಲು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ ಪಿಆರ್) ಜಾರಿಗೆ ತರಲಾಗುತ್ತದೆ ಎಂದು ಹೇಳಿತ್ತು. ಇದನ್ನು ವಿರೋಧಿಸಿ ಲೇಖಕಿ ಅರುಂಧತಿ ರಾಯ್ ಅವರು ನಾಗರೀಕರು ನಗುನಗುತ್ತಾ ಅಸಹಕಾರವನ್ನು ಎನ್ ಪಿಆರ್ ಗೆ ನೀಡಿ ಎಂದು ಬಹಿರಂಗವಾಗಿ ಜನರಿಗೆ ಕರೆ ನೀಡಿದ್ದರಿಂದ ಅವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.











Click it and Unblock the Notifications