ದೂರುದಾರ SC/ST ಎಂಬ ಕಾರಣಕ್ಕೆ ಮೇಲ್ಜಾತಿಯವರನ್ನು ಶಿಕ್ಷಿಸಲಾಗದು: ಸುಪ್ರೀಂಕೋರ್ಟ್
ನವದೆಹಲಿ, ನವೆಂಬರ್ 6: ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ಸಮುದಾಯದ ಸದಸ್ಯನಿಂದ ಮೊಕದ್ದಮೆ ಹೂಡಲಾಗಿದೆ ಎಂಬ ಮಾತ್ರಕ್ಕೆ ಮೇಲ್ಜಾತಿಗೆ ಸೇರಿದ ವ್ಯಕ್ತಿಯು ತನ್ನ ಕಾನೂನಾತ್ಮಕ ಹಕ್ಕುಗಳನ್ನು ಚಲಾಯಿಸುವುದನ್ನು ತಡೆಯಲು ಸಾಧ್ಯವಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ದೌರ್ಜನ್ಯಗಳಿಂದ ಎಸ್ಸಿ/ಎಸ್ಟಿ ಸಮುದಾಯವನ್ನು ರಕ್ಷಿಸುವ ಕಾನೂನಿನ ವ್ಯಾಖ್ಯಾನದ ಕುರಿತಾಗಿ ಸುಪ್ರೀಂಕೋರ್ಟ್ ಶುಕ್ರವಾರ ಈ ಮಹತ್ತರ ಅಭಿಪ್ರಾಯ ವ್ಯಕ್ತಪಡಿಸಿದೆ. ದೂರುದಾರ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾನೆ ಎಂಬ ಕಾರಣಕ್ಕಾಗಿಯಷ್ಟೇ ಯಾವುದೇ ವ್ಯಕ್ತಿಯನ್ನು ದಂಡನೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
'ಸಂತ್ರಸ್ತನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾನೆ ಎಂಬ ಕಾರಣದಿಂದ ಆ ಸಮುದಾಯದ ಸದಸ್ಯನನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ಉದ್ದೇಶವಿರದೆ ಇದ್ದರೆ, ದೂರು ನೀಡಿದ ವ್ಯಕ್ತಿಯು ಎಸ್ಸಿ ಅಥವಾ ಎಸ್ಟಿಗೆ ಸಮುದಾಯದ ಸದಸ್ಯ ಎಂಬ ಸಂಗತಿಯ ಕಾರಣದಿಂದ ಮಾತ್ರವೇ ಎಸ್ಸಿ/ಎಸ್ಟಿ ಕಾಯ್ದೆಯಡಿ ಅಪರಾಧ ಎಂದು ಪರಿಗಣಿಸಲು ಆಗುವುದಿಲ್ಲ' ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಮುಂದೆ ಓದಿ.

ಉದ್ದೇಶ ಸ್ಪಷ್ಟವಾಗದೆ ಅಪರಾಧವಾಗದು
ನಿಂದನಾತ್ಮಕ ಮಾತುಗಳನ್ನಾಡುವುದು ಕೂಡ ಎಸ್ಸಿ ಅಥವಾ ಎಸ್ಟಿ ಸಮುದಾಯದ ವ್ಯಕ್ತಿಯನ್ನು ಅವಮಾನಿಸುವ ಉದ್ದೇಶ ಮಾತ್ರವೇ ಇತ್ತು ಎಂಬುದು ಸ್ಪಷ್ಟಪಡುವವರೆಗೂ ವಿಶೇಷ ಕಾನೂನಿನ ಅಡಿಯಲ್ಲಿ ಅಪರಾಧ ಎಂದು ಪರಿಗಣಿಸಲು ಆಗುವುದಿಲ್ಲ ಎಂದು ನ್ಯಾಯಮೂರ್ತಿ ಹೇಮಂತ್ ಗುಪ್ತಾ ಹೇಳಿದರು.

ಹಕ್ಕು ರಕ್ಷಿಸಿಕೊಳ್ಳಲು ಅವಕಾಶವಿದೆ
'ಒಬ್ಬ ವ್ಯಕ್ತಿಗೆ ಮೇಲ್ಜಾತಿಯ ವ್ಯಕ್ತಿಯು ಮಾಡುವ ಎಲ್ಲ ಅವಮಾನ ಅಥವಾ ಬೆದರಿಕೆಗಳನ್ನು, ಸಂತ್ರಸ್ತ ವ್ಯಕ್ತಿಯು ಎಸ್ಸಿ ಅಥವಾ ಎಸ್ಟಿ ಸಮುದಾಯಕ್ಕೆ ಸೇರಿದ್ದಾನೆ ಎಂಬ ಮಾತ್ರಕ್ಕೆ ಕಾಯ್ದೆಯಡಿಯ ಅಪರಾಧ ಎನ್ನಲಾಗುವುದಿಲ್ಲ. ತನ್ನ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಮೇಲ್ಜಾತಿಯ ವ್ಯಕ್ತಿ ನಡೆಸಿದ ಕೃತ್ಯವನ್ನು ಸ್ವಯಂಚಾಲಿತವಾಗಿ ಎಸ್ಸಿ/ಎಸ್ಟಿ ಕಾಯ್ದೆಯಡಿ ತರಲು ಸಾಧ್ಯವಾಗುವುದಿಲ್ಲ. ಎದುರಾಳಿಯ ತಿಳಿವಳಿಕೆ ಇಲ್ಲಿ ಮುಖ್ಯವಾಗುವುದಿಲ್ಲ. ಯಾವುದೇ ವ್ಯಕ್ತಿಯು ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಕಾನೂನಿನಡಿ ಸ್ಥಾಪಿತವಾದ ಪ್ರಕ್ರಿಯೆಯಲ್ಲಿ ಸಾಗಲು ಅವಕಾಶವಿದೆ' ಎಂದರು.

ನಾಲ್ಕು ಗೋಡೆ ನಡುವೆ ನೋಡುವುದಲ್ಲ
ಎಸ್ಸಿ/ಎಸ್ಟಿ ಕಾಯ್ದೆಯಡಿ ನಡೆಯುವ ಕ್ರಿಮಿನಲ್ ಅಪರಾಧದ ಕೃತ್ಯವನ್ನು ಸಾರ್ವಜನಿಕ ದೃಷ್ಟಿಕೋನದಿಂದ ನೋಡಬೇಕೇ ವಿನಾ ಮನೆಯೊಂದರ ಒಳಗೆ ಅಥವಾ ನಾಲ್ಕು ಗೋಡೆಗಳ ನಡುವೆ ನೋಡುವ ಖಾಸಗಿ ದೃಷ್ಟಿಕೋನದಿಂದ ಅಲ್ಲ ಎಂಬ ತನ್ನ ಹಳೆಯ ತೀರ್ಪನ್ನು ನ್ಯಾಯಾಲಯ ಮರು ಉಲ್ಲೇಖಿಸಿತು.

ಮೂಲ ಪ್ರಕರಣದ ವಿವರ
ಮಹಿಳೆ ವಿರುದ್ಧ ಜಾತಿವಾದಿ ಹೇಳಿಕೆಯನ್ನು ನೀಡಿದ್ದ ಆರೋಪ ಎದುರಿಸುತ್ತಿದ್ದ ವ್ಯಕ್ತಿಯೊಬ್ಬ ಮೇಲಿನ ಪ್ರಕರಣವನ್ನು ನ್ಯಾಯಪೀಠ ವಜಾಗೊಳಿಸಿದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದೆ. ಉತ್ತರಾಖಂಡದ ಪಿಥಾರೋಗಡ ಜಿಲ್ಲೆಯಲ್ಲಿ ಸ್ವಲ್ಪ ಭೂಮಿಯ ವಿಚಾರವಾಗಿ ಇಬ್ಬರ ನಡುವೆ ವಿವಾದ ಉಂಟಾಗಿತ್ತು. ಇಬ್ಬರೂ ತಮ್ಮ ಹಕ್ಕುಗಳನ್ನು ರಕ್ಷಿಸಲು ಸಿವಿಲ್ ಮೊಕದ್ದಮೆಗಳನ್ನು ಹೂಡಿದ್ದರು. ತನ್ನ ಜಮೀನಿನಲ್ಲಿ ಉಳುಮೆ ಮಾಡಲು ಅಡ್ಡಿಪಡಿಸಿದ್ದ ವ್ಯಕ್ತಿ ತನ್ನನ್ನು ನಿಂದಿಸಿದ್ದಾನೆ ಎಂದು ಮಹಿಳೆ ಎಸ್ಸಿ/ಎಸ್ಟಿ ಕಾಯ್ದೆಯಡಿ ದೂರು ಸಲ್ಲಿಸಿದ್ದಳು. ಆಕೆ ಎಸ್ಸಿ ಅಥವಾ ಎಸ್ಟಿ ಸಮುದಾಯಕ್ಕೆ ಸೇರಿದ್ದಾಳೆ ಎಂಬ ಕಾರಣಕ್ಕೆ ಈ ಪ್ರಕರಣದಲ್ಲಿ ಆ ಕಾಯ್ದೆಯಡಿ ದಂಡನೆಗೆ ಒಳಪಡಿಸಲು ಆಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.












Click it and Unblock the Notifications