ಭೂಗತ ಪಾತಕಿ ಛೋಟಾ ರಾಜನ್ಗೆ 8 ವರ್ಷ ಜೈಲು ಶಿಕ್ಷೆ
ನವದೆಹಲಿ, ಆಗಸ್ಟ್ 20: ಹೋಟೆಲ್ ಮಾಲಿಕ ಬಿಆರ್ ಶೆಟ್ಟಿ ಬಳಿ ಸುಲಿಗೆ ಹಾಗೂ ಕೊಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಛೋಟಾ ರಾಜನ್ಗೆ 8 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಮಹಾರಾಷ್ಟ್ರದ ಎಂಸಿಓಸಿಎ ನ್ಯಾಯಾಲಯವು ತೀರ್ಪು ಪ್ರಕಟಿಸಿದ್ದು ಛೋಟಾ ರಾಜನ್ ಜೊತೆಗೆ ಇನ್ನೂ ಐವರಿಗೂ ಶಿಕ್ಷೆ ವಿಧಿಸಲಾಗಿದೆ.
ಪತ್ರಕರ್ತ ಜೇ ಡೇ ಹತ್ಯೆ ಪ್ರಕರಣ, ಛೋಟಾ ರಾಜನ್ ಗೆ ಜೀವಾವಧಿ ಶಿಕ್ಷೆ
ಮೂರನೇ ಪ್ರಕರಣದಲ್ಲಿ ಇದೀಗ ಆತನಿಗೆ ಶಿಕ್ಷೆಯಾಗಿದೆ. ಆತನನ್ನು ಕೆಲವೇ ದಿನಗಳ ಹಿಂದೆ ತಿಹಾರ್ ಜೈಲಿಗೆ ಕಳುಹಿಸಲಾಗಿತ್ತು. ಆತನ ಮೇಲೆ ಕೊಲೆ, ಸುಲಿಗೆ ಸೇರಿದಂತೆ ಹತ್ತಾರು ಪ್ರಕರಣಗಳಿವೆ.
55 ವರ್ಷದ ಭೂಗತ ಪಾತಕಿ ಛೋಟಾ ರಾಜನ್ ಅಲಿಯಾಸ್ ರಾಜೇಂದ್ರ ಸದಾಶಿವ, ನೂರಾರು ಹತ್ಯಾ ಪ್ರಕರಣಗಳಲ್ಲಿ ಆರೋಪಿಯಾಗಿದ್ದ, ಭಾರತೀಯ ಪೊಲೀಸರಿಂದ ರೆಡ್ ಕಾರ್ನರ್ ನೋಟಿಸ್ ಪಡೆದಿದ್ದ, ವಿವಿಧ ವೇಷ ಧರಿಸಿ ತಲೆಮರೆಸಿಕೊಂಡಿದ್ದ ರಾಜನ್ ನಾನಾ ದೇಶಗಳಿಗೆ ಪರಾರಿಯಾಗಿ ಪೊಲೀಸರಿಗೆ ತಲೆನೋವಾಗಿದ್ದ.
ಕೊನೆಗೆ ಸಿಡ್ನಿಯಿಂದ ಬಾಲಿ ಬೀಚ್ ರೆಸಾರ್ಟ್ ಗೆ ರಾಜನ್ ಆಗಮಿಸಿರುವ ಕುರಿತು ಮಾಹಿತಿ ಪಡೆದ ಇಂಡೋನೇಷ್ಯಾ ಪೊಲೀಸರು ಕೂಡಲೇ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು. ನಂತರ ಆತನನ್ನು ಭಾರತಕ್ಕೆ ಹಸ್ತಾಂತರಿಸಲಾಗಿತ್ತು.
ಅಪರೂಪದ ತನಿಖಾ ಪತ್ರಕರ್ತ ಜ್ಯೋತಿರ್ಮಯ್ ಡೇ ಅಲಿಯಾಸ್ ಜೇ ಡೇ ಹತ್ಯೆ ಪ್ರಕರಣದಲ್ಲಿ ಭೂಗತ ಪಾತಕಿ ಛೋಟಾ ರಾಜನ್ ದೋಷಿ ಎಂದು ಮುಂಬೈನ ಎಂಕೋಕಾ ನ್ಯಾಯಾಲಯ ತೀರ್ಪು ನೀಡಿತ್ತು.
ದೇಶದ ಮಾಧ್ಯಮ ರಂಗವನ್ನೇ ಬೆಚ್ಚಿ ಬೀಳಿಸಿದ್ದ ಪ್ರಕರಣದಲ್ಲಿ ಪತ್ರಕರ್ತರಾದ ಜಿಗ್ನಾ ವೋರಾ ಮತ್ತು ಜೋಸೆಫ್ ಪೌಲ್ಸೆನ್ ರನ್ನು ಮಾತ್ರ ನ್ಯಾಯಾಲಯ ಖುಲಾಸೆಗೊಳಿಸಿತ್ತು. ಮುಂಬೈನ ಭೂಗತ ಲೋಕದ ಆಳ ಅಗಲಗಳನ್ನು ಅರಿತಿದ್ದ ಜೇ ಡೇ ಹತ್ಯೆ ಪ್ರಕರಣ ಕಳೆದ 7 ವರ್ಷಗಳಿಂದ ತನಿಖಾ ಸಂಸ್ಥೆಗಳಿಗೆ ಕಗ್ಗಂಟಾಗಿಯೇ ಉಳಿದಿತ್ತು. ಇದೀಗ ಮುಂಬೈ ನ್ಯಾಯಾಲಯದ ತೀರ್ಪಿನೊಂದಿಗೆ ಡೇ ಕೊಂದವರು ಯಾರು ಎಂಬುದಕ್ಕೆ ಉತ್ತರ ಸಿಕ್ಕಿತ್ತು.