ಏರ್ ಇಂಡಿಯಾ ಬಂಡವಾಳ ಹಿಂತೆಗೆತ ಪ್ರಕ್ರಿಯೆ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ಸುಬ್ರಮಣಿಯನ್ ಸ್ವಾಮಿ
ನವದೆಹಲಿ, ಜನವರಿ 04: ಏರ್ ಇಂಡಿಯಾ ಬಂಡವಾಳ ಹಿಂತೆಗೆತ ಪ್ರಕ್ರಿಯೆಯನ್ನು ಪ್ರಶ್ನೆ ಮಾಡಿ ರಾಜ್ಯಸಭಾ ಸದಸ್ಯ, ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಬಿಜೆಪಿ ಮುಖಂಡರ ಈ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗುರುವಾರ ಅಂದರೆ ಜನವರಿ 6ರಂದು ವಿಚಾರಣೆ ನಡೆಸಿ ಆದೇಶ ಪ್ರಕಟ ಮಾಡಲಿದೆ.
ದೆಹಲಿ ಹೈಕೋರ್ಟ್ನ ನ್ಯಾಯಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್, ನ್ಯಾ. ಜ್ಯೋತಿ ಸಿಂಗ್ ಅರ್ಜಿಯ ವಿಚಾರಣೆಯ ಆದೇಶವನ್ನು ಗುರುವಾರ ನೀಡುವುದಾಗಿ ತಿಳಿಸಿದ್ದು, ನಾಳೆಯ ಒಳಗಾಗಿ ಪಕ್ಷಕಾರರು ಟಿಪ್ಪಣಿಯನ್ನು ಸಲ್ಲಿಕೆ ಮಾಡುವಂತೆ ಹೇಳಿದೆ. ನಾಳೆಯೊಳಗೆ ನಮಗೆ ಟಿಪ್ಪಣಿ ದೊರೆಯಬೇಕು ಎಂದು ನ್ಯಾಯಪೀಠವು ಹೇಳಿದೆ.
ಏರ್ ಇಂಡಿಯಾದ ಮೇಲೆ ಹೂಡಿಕೆಯನ್ನು ಕೇಂದ್ರ ಸರ್ಕಾರವು ಹಿಂದಕ್ಕೆ ಪಡೆಯುವುದು ರಾಷ್ಟ್ರದ್ರೋಹದ ಕಾರ್ಯವಾಗಿದೆ ಎಂದು ಹೇಳಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ಏರ್ ಇಂಡಿಯಾದಿಂದ ಬಂಡವಾಳವನ್ನು ಹಿಂದಕ್ಕೆ ಪಡೆಯುವ ಒಪ್ಪಂದವನ್ನು ಅಮಾನತು ಮಾಡುವಂತೆ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಹಾಗೆಯೇ ಈ ಖಾಸಗೀಕರಣದ ಪ್ರಕ್ರಿಯೆಯ ಬಗ್ಗೆ ಪ್ರತಿವಾದಿಗಳ ಪಾತ್ರದ ಬಗ್ಗೆ ತನಿಖೆಯನ್ನು ನಡೆಸಬೇಕು. ಅದರ ಬಗ್ಗೆ ನ್ಯಾಯಾಲಯದ ಮುಂದೆ ವರದಿ ಸಲ್ಲಿಕೆ ಮಾಡಬೇಕು ಎಂಬುವುದು ಕೂಡಾ ಆಗ್ರಹವಾಗಿದೆ. ಕಳೆದ ಅಕ್ಟೋಬರ್ನಲ್ಲ ಸರ್ಕಾರಿ ಕಂಪನಿ ಎಐಎಸ್ಎಟಿಎಸ್ನ ಅರ್ಧದಷ್ಟು ಪಾಲಿನೊಂದಿಗೆ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ನ ಶೇಕಡ ನೂರರಷ್ಟು ಈಕ್ವಿಟಿ ಷೇರುಬ ಪಡೆಯುವುದಕ್ಕೆ ಟಾಟಾ ಸನ್ಸ್ ಮಾಡಿದ ಅತ್ಯಧಿಕ ಬಿಡ್ ಅನ್ನು ಕೇಂದ್ರ ಸರ್ಕಾರ ಅಂಗೀಕಾರ ಮಾಡಿತ್ತು.
ಏರ್ ಇಂಡಿಯಾ ಕೊಳ್ಳಲು ಬಿಡ್ ಸಲ್ಲಿಸಿದ್ದ ಸಂಸ್ಥೆಗಳ ಪೈಕಿ ಟಾಟಾ ಸನ್ಸ್ , ಅಜಯ್ ಸಿಂಗ್ ಸಂಸ್ಥೆ ,ಸ್ಪೈಸ್ ಜೆಟ್ ಪ್ರಮುಖ ಸಂಸ್ಥೆಗಳಾಗಿದ್ದವು. ಈ ಪೈಕಿ ಏರ್ ಇಂಡಿಯಾವನ್ನು ಖರೀದಿಸಲು ಸಲ್ಲಿಸಿದ್ದ ಫೈನಲ್ ಬಿಡ್ ಟಾಟಾ ಸಮೂಹ ಸಂಸ್ಥೆ ಪಾಲಾಗಿದೆ ಎಂಬ ಸುದ್ದಿ ಇದೀಗ ಅಧಿಕೃತವಾಗಿದೆ. ಇನ್ನು ಅದೇ ತಿಂಗಳಿನಲ್ಲಿ ಏರ್ ಇಂಡಿಯಾವನ್ನು ಸುಮಾರು 18,000 ಕೋಟಿ ರೂಪಾಯಿಗೆ ಮಾರಾಟ ಮಾಡಲು ಸರ್ಕಾರ ಟಾಟಾದೊಂದಿಗೆ ಷೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಟಾಟಾ 2,700 ಕೋಟಿ ನಗದು ಪಾವತಿ ಮಾಡುವ ಮೂಲಕ ಏರ್ ಇಂಡಿಯಾ ಹೊಂದಿರುವ 13,500 ಕೋಟಿ ಸಾಲವನ್ನು ತಾನು ನಿಭಾಯಿಸಲಿದೆ. ಕಳೆದ ಎರಡು ದಶಕಗಳಲ್ಲಿ ಏರ್ ಇಂಡಿಯಾ ಮೇಲಿನ ಬಂಡವಾಳವನ್ನು ಇದೇ ಮೊದಲ ಬಾರಿಗೆ ಸರ್ಕಾರವು ವಾಪಾಸ್ ಪಡೆದಿದೆ.
ವಿಚಾರಣೆ ವೇಳೆ ಖುದ್ದು ವಾದ ಮಾಡಿದ ಸುಬ್ರಮಣಿಯನ್ ಸ್ವಾಮಿ
ಬಿಜೆಪಿ ಮುಖಂಡ ಸುಬ್ರಮಣಿಯನ್ ತನ್ನ ಸರ್ಕಾರದ ವಿರುದ್ಧವಾಗಿಯೇ ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುತ್ತಾರೆ. ಇಂದು ವಿಚಾರಣೆ ವೇಳೆ ಖುದ್ದಾಗಿ ಸುಬ್ರಮಣಿಯನ್ ಸ್ವಾಮಿ ವಾದ ಮಂಡನೆ ಮಾಡಿದ್ದಾರೆ. "ಈ ಹರಾಜು ಪ್ರಕ್ರಿಯೆಯು ಸಂವಿಧಾನಿಕವಾಗಿಲ್ಲ. ಏರ್ ಇಂಡಿಯಾದ ಮೇಲೆ ಹೂಡಿಕೆಯನ್ನು ಕೇಂದ್ರ ಸರ್ಕಾರವು ಹಿಂದಕ್ಕೆ ಪಡೆಯುವುದು ರಾಷ್ಟ್ರದ್ರೋಹದ ಕಾರ್ಯವಾಗಿದೆ. ಈ ಕಾರ್ಯವು ಕೆಟ್ಟ ಉದ್ದೇಶವನ್ನು ಹೊಂದಿದೆ. ಇದರಲ್ಲಿ ಭ್ರಷ್ಟಾಚಾರವಿದೆ. ಟಾಟಾ ಪರವಾಗಿ ಸರ್ಕಾರವು ಹೊಂದಾಣಿಕೆ ಮಾಡಿಕೊಂಡಿದೆ," ಎಂದು ಆರೋಪ ಮಾಡಿದ್ದಾರೆ. "ಮದ್ರಾಸ್ ಹೈಕೋರ್ಟ್ನಲ್ಲಿ ಸ್ಪೈಸ್ಜೆಟ್ ವಿರುದ್ಧ ದಿವಾಳಿತನದ ಪ್ರಕರಣದ ವಿಚಾರಣೆ ಬಾಕಿ ಇದೆ. ಅದು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರ್ಹವಾಗಿಲ್ಲ. ಆದರೆ ಸ್ಪೈಸ್ಜೆಟ್ ಮಾಲೀಕರ ನೇತೃತ್ವದ ಒಕ್ಕೂಟ ಈ ಬಿಡ್ದಾರರಾಗಿದ್ದಾರೆ. ಅಂದರೆ ಓರ್ವ ಬಿಡ್ದಾರ ಮಾತ್ರ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದು, ಈ ರೀತಿಯಾಗಿ ಬಿಡ್ ನಡೆಸಲು ಸಾಧ್ಯವಿಲ್ಲ," ಎಂದು ಬಿಜೆಪಿಯ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ವಾದ ಮಾಡಿದ್ದಾರೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications